ಸಕ್ಕರೆ ಬೆಲೆ ಏರಿಕೆಗೆ ಬಿಹಾರ ಸಚಿವರ ವಿಚಿತ್ರ ಸಮರ್ಥನೆ: ಜನರಿಗೆ ಮಧುಮೇಹವಿದೆ, ಬೆಲೆ ಏರಿದರೆ ನಷ್ಟವಿಲ್ಲ
ಬಿಹಾರದಲ್ಲಿ ಸಕ್ಕರೆ ಬೆಲೆ ಗಗನಕ್ಕೇರಿದ್ದು, ಪ್ರತಿ ಕೆ.ಜಿ.ಗೆ 65 ರೂ. ತಲುಪಿದೆ. ಜೆಡಿಯು ಸಚಿವ ಶ್ರವಣ್ ಕುಮಾರ್ ಅವರು "ಜನರಿಗೆ ಮಧುಮೇಹ ಹೆಚ್ಚಿದೆ, ಸಕ್ಕರೆ ತಿನ್ನುವುದಿಲ್ಲ. ಹಾಗಾಗಿ ಬೆಲೆ ಏರಿಕೆ ದೊಡ್ಡ ವಿಷಯವಲ್ಲ" ಎಂದು ವಿಚಿತ್ರ ಸಮರ್ಥನೆ ನೀಡಿದ್ದಾರೆ. ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಬ್ಬದ ಸೀಸನ್ನಲ್ಲಿ ಸಚಿವರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಪಾಟ್ನಾ, ಆಗಸ್ಟ್ 21: ಬಿಹಾರದಲ್ಲಿ ಸಕ್ಕರೆ(Sugar) ಬೆಲೆ ತೀವ್ರವಾಗಿ ಏರಿಕೆಯಾಗಿರುವುದನ್ನು ಆಡಳಿತಾರೂಢ ಜೆಡಿಯು (JDU) ಪಕ್ಷದ ಹಿರಿಯ ಸಚಿವ ಶ್ರವಣ್ ಕುಮಾರ್ ಅವರು ವಿಚಿತ್ರ ತರ್ಕದೊಂದಿಗೆ ಸಮರ್ಥಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಮಧುಮೇಹ (Diabetes) ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಜನರು ಸಕ್ಕರೆ ತಿನ್ನುವುದನ್ನೇ ಕಡಿಮೆ ಮಾಡುತ್ತಿದ್ದಾರೆ, ಹೀಗಾಗಿ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಈಗಿನ ದಿನಗಳಲ್ಲಿ ಸಿಹಿತಿಂಡಿಗಳನ್ನು ಯಾರು ತಿನ್ನುತ್ತಾರೆ? ಎಲ್ಲರಿಗೂ ಡಯಾಬಿಟಿಸ್ ಬರುತ್ತಿದೆ. ಜನರು ಸಕ್ಕರೆ ಸೇವನೆಯನ್ನೇ ಕಡಿಮೆ ಮಾಡಿದ್ದಾರೆ, ಆದ್ದರಿಂದ ಬೆಲೆ ಹೆಚ್ಚಾದರೂ ಯಾರೂ ಚಿಂತಿಸಬೇಕಾಗಿಲ್ಲ” ಎಂದು ಹೇಳಿ ನಗೆಪಾಟಲಿಗೀಡಾಗಿದ್ದಾರೆ. ಬಿಹಾರದ ಚಿಲ್ಲರೆ ಮಾರುಕಟ್ಟೆಯಲ್ಲಿ ಈ ಹಿಂದೆ ಪ್ರತಿ ಕಿಲೋಗ್ರಾಂಗೆ 48ರೂ. ರಿಂದ 50 ರಷ್ಟಿದ್ದ ಸಕ್ಕರೆ ಬೆಲೆಯು ಪ್ರಸ್ತುತ 58 ರೂ. ರಿಂದ 65ರೂ.ಗೆ ಏರಿಕೆಯಾಗಿದೆ.
ಸರ್ಕಾರದ ವಿರುದ್ಧ ಕಿಡಿ: ಸಚಿವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸ್ವತಂತ್ರ ಸಂಸದ ಪಪ್ಪು ಯಾದವ್, “ಹಸುವಿನ ಸಗಣಿಯ ಮೇಲೆ ಎಷ್ಟೇ ತುಪ್ಪ ಸುರಿದರೂ ಅದು ಸಗಣಿಯಂತೆಯೇ ಇರುತ್ತದೆ. ಗ್ಯಾಸ್ ಮತ್ತು ಟೊಮೆಟೊ ಬೆಲೆ ಏರಿದಾಗ ಧ್ವನಿ ಎತ್ತುತ್ತಿದ್ದ ನಾಯಕರು, ಈಗ ಸಕ್ಕರೆ ಬೆಲೆ ಏರಿಕೆಗೆ ಮಧುಮೇಹದ ಕಾರಣ ನೀಡುತ್ತಿದ್ದಾರೆ; ಇದೊಂದು ಅತಿದೊಡ್ಡ ಮಧುಮೇಹ ಸರ್ಕಾರ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮತ್ತಷ್ಟು ಓದಿ: ಸಕ್ಕರೆ ತಿಂದರೆ ಆಸಿಡಿಟಿ ಹೆಚ್ಚಾಗುತ್ತದೆಯೇ? ಎದೆ ಉರಿ ಬಗ್ಗೆ ವೈದ್ಯರು ನೀಡಿದ ಮಹತ್ವದ ಮಾಹಿತಿ ಇಲ್ಲಿದೆ
ಹಬ್ಬದ ಋತುವಿನಲ್ಲಿ ಸಕ್ಕರೆ ಬೆಲೆ ಗಗನಕ್ಕೇರಿರುವಾಗ, ಜನಸಾಮಾನ್ಯರ ಹೊರೆ ತಗ್ಗಿಸುವ ಬದಲು ಸಚಿವರು ನೀಡಿರುವ ಈ ಅಸಂಬದ್ಧ ಹೇಳಿಕೆಯು ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ರಕ್ಷಾಬಂಧನ ಮತ್ತು ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಸಿಹಿತಿಂಡಿ, ಬೇಕರಿ ತಿನಿಸುಗಳು ಹಾಗೂ ದಿನಸಿ ವೆಚ್ಚ ಮತ್ತಷ್ಟು ದುಬಾರಿಯಾಗುವ ಆತಂಕ ಎದುರಾಗಿದೆ.
ಬಿಹಾರದಲ್ಲಿ 9 ಸಕ್ಕರೆ ಕಾರ್ಖಾನೆಗಳಿದ್ದರೂ ಕಬ್ಬು ಬೆಳೆಗಾರರಿಗೆ ಸಿಗಬೇಕಾದ ಬೆಂಬಲ ಬೆಲೆ ಹಾಗೂ ಸಕ್ಕರೆ ಉತ್ಪಾದನೆಯ ವೆಚ್ಚದ ಏರಿಕೆಯೇ ಈ ಬೆಲೆ ಹೆಚ್ಚಳಕ್ಕೆ ಮುಖ್ಯ ಕಾರಣ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




