Gyanvapi mosque case: ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ನಡೆಸಲು ಹಿಂದೂಗಳಿಗೆ ಅನುಮತಿ

ಜ್ಞಾನವಾಪಿ ಮಸೀದಿಯ ಮೊಹರು ಮಾಡಿದ ನೆಲಮಾಳಿಗೆಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಬಹುದು ಎಂದು ವಾರಣಾಸಿ ನ್ಯಾಯಾಲಯ ಹೇಳಿದೆ. ಈ ಮಸೀದಿ ಒಳಗಿರುವ ವ್ಯಾಸ್ ಜೀ ಕಾ ತಹಖಾನಾದಲ್ಲಿ ಹಿಂದೂಗಳು ಪೂಜೆ ಮಾಡಬಹುದಾಗಿದೆ. ಇದಕ್ಕಾಗಿ ಜಿಲ್ಲಾಡಳಿತವು 7 ದಿನಗಳಲ್ಲಿ ವ್ಯವಸ್ಥೆ ಮಾಡಬೇಕಾಗಿದೆ ಎಂದು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ  ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.

Gyanvapi mosque case: ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ನಡೆಸಲು ಹಿಂದೂಗಳಿಗೆ ಅನುಮತಿ
Follow us
| Updated By: Digi Tech Desk

Updated on:Feb 02, 2024 | 12:02 PM

ವಾರಣಾಸಿ ಜನವರಿ 31:  ಹಿಂದೂ (Hindu) ಧರ್ಮದವರಿಗೆ ಜ್ಞಾನವಾಪಿ ಮಸೀದಿಯ (Gyanvapi mosque) ಮೊಹರು ಮಾಡಿದ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ವಾರಣಾಸಿಯ (Varanasi) ನ್ಯಾಯಾಲಯವು ಬುಧವಾರ ಅನುಮತಿ ನೀಡಿದೆ. ನ್ಯಾಯಾಲಯದ ಆದೇಶದ ಪ್ರಕಾರ, ವಾರಣಾಸಿಯ ಜ್ಞಾನವಾಪಿ ಮಸೀದಿಯೊಳಗೆ ಮುಚ್ಚಿದ ಪ್ರದೇಶವಾದ ‘ವ್ಯಾಸ್ ಜೀ ಕಾ ತಹಖಾನಾ’ದಲ್ಲಿ ಹಿಂದೂ ಭಕ್ತರು ಈಗ ಪ್ರಾರ್ಥನೆ ಸಲ್ಲಿಸಬಹುದು. ಹಿಂದಿನ ದಿನದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಮುಂದಿನ ಏಳು ದಿನಗಳಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್, ‘ವ್ಯಾಸ್ ಕಾ ತಹಖಾನಾ’ದಲ್ಲಿ ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತವು 7 ದಿನಗಳಲ್ಲಿ ವ್ಯವಸ್ಥೆ ಮಾಡಬೇಕಾಗಿದೆ, ಈಗ ಎಲ್ಲರಿಗೂ ಪೂಜೆ ಮಾಡುವ ಹಕ್ಕು ಇದೆ ಎಂದು ಹೇಳಿದ್ದಾರೆ.

ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದೇನು?

“1983 ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರದ ಬೀಗಗಳನ್ನು ತೆರೆಯಲು ಆದೇಶಿಸಿದ ನ್ಯಾಯಮೂರ್ತಿ ಕೃಷ್ಣ ಮೋಹನ್ ಪಾಂಡೆ ಅವರು ನೀಡಿದ ಆದೇಶದಂತೆ ವಾರಾಣಸಿ ನ್ಯಾಯಾಲಯದ ಇತ್ತೀಚಿನ ಆದೇಶವನ್ನು ನಾನು  ನೋಡುತ್ತೇನೆ” ಎಂದು ವಕೀಲ ವಿಷ್ಣು ಜೈನ್ ಹೇಳಿದ್ದಾರೆ.

ಗೋರಖ್‌ಪುರ ನಿವಾಸಿಯಾದ ಜೆಎಂ ಪಾಂಡೆ ಅವರ ಆದೇಶದ ಮೇರೆಗೆ ರಾಮಮಂದಿರದ ಬೀಗವನ್ನು ಪೂಜೆಗಾಗಿ ತೆರೆದ ಮೊದಲ ನ್ಯಾಯಾಧೀಶರಾಗಿದ್ದಾರೆ.

ಈ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ವಕೀಲ ಅಖ್ಲಾಕ್ ಅಹ್ಮದ್ ಹೇಳಿದ್ದಾರೆ. ಅರ್ಜಿಯನ್ನು ವಜಾಗೊಳಿಸಬೇಕು ಎಂದು ಹೇಳಿ ಮಸೀದಿ ಸಮಿತಿಯ ಅರ್ಜಿಯ ವಿಚಾರಣೆಯ ದಿನಾಂಕವನ್ನು ನ್ಯಾಯಾಲಯವು ಫೆಬ್ರವರಿ 8 ಕ್ಕೆ ನಿಗದಿಪಡಿಸಿದೆ.

ಮಸೀದಿಯ ಮೊಹರು ಮಾಡಿದ ಭಾಗವನ್ನು ಉತ್ಖನನ ಮತ್ತು ವೈಜ್ಞಾನಿಕ ಸಮೀಕ್ಷೆಗೆ ಕೋರಿ ನಾಲ್ವರು ಹಿಂದೂ ಮಹಿಳೆಯರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಒಂದು ದಿನದ ನಂತರ ಜಿಲ್ಲಾ ನ್ಯಾಯಾಲಯದ ಆದೇಶ ಬಂದಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ವರದಿಯು ಮಸೀದಿ ನಿರ್ಮಾಣಕ್ಕೆ ಮುಂಚೆಯೇ ಒಂದು ದೊಡ್ಡ ಹಿಂದೂ ದೇವಾಲಯವು ಅಸ್ತಿತ್ವದಲ್ಲಿತ್ತು ಎಂದು ತೀರ್ಮಾನಿಸಿದ ನಂತರ ಈ ಆದೇಶ ಬಂದಿದೆ.

ಇದನ್ನೂ ಓದಿ: ಜ್ಞಾನವಾಪಿ ಸಂಕೀರ್ಣದಲ್ಲಿ ವಿಷ್ಣು, ಹನುಮಂತನ ವಿಗ್ರಹಗಳು ಪತ್ತೆ

“ಸರಿಯಾದ ಮತ್ತು ಪರಿಣಾಮಕಾರಿ ತನಿಖೆಗಾಗಿ, ಶಿವಲಿಂಗದ ಸ್ವರೂಪವನ್ನು ನಿರ್ಧರಿಸಲು ಶಿವಲಿಂಗದ ಸುತ್ತಲೂ (ಮುಸ್ಲಿಮರು ಕಾರಂಜಿ ಎಂದು ಹೇಳಿಕೊಳ್ಳುತ್ತಾರೆ) ಇತರ ವೈಜ್ಞಾನಿಕ ವಿಧಾನಗಳನ್ನು ಬಳಸಲು ಮತ್ತು ಅಗತ್ಯ ಉತ್ಖನನವನ್ನು ಕೈಗೊಳ್ಳಲು ಎಎಸ್ಐಗೆ ನಿರ್ದೇಶನ ನೀಡುವುದು ಅವಶ್ಯಕ. ಶಿವಲಿಂಗದ ಸುತ್ತಲಿನ ಕೃತಕ/ಆಧುನಿಕ ಗೋಡೆಗಳು/ಮಹಡಿಗಳನ್ನು ತೆಗೆದ ನಂತರ ವಸ್ತುವಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪ್ರಶ್ನಾರ್ಹ ಪ್ರದೇಶವು ವಿವಾದಿತ ರಚನೆಯನ್ನು ಹೊಂದಿದೆ, ಅದು ಶಿವಲಿಂಗವಾಗಿದೆ ಎಂದು ಹಿಂದೂಗಳು ಹೇಳುತ್ತಾರೆ. ಆದರೆ ಇದು ಮಸೀದಿಯೊಳಗಿರುವ ನೀರಿನ ತೊಟ್ಟಿ (ವಜೂಖಾನ) ಎಂದು ಮುಸ್ಲಿಂ ಕಡೆಯವರು ‘ಶಿವಲಿಂಗ’ದ ವಾದವನ್ನು ತಿರಸ್ಕರಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:25 pm, Wed, 31 January 24