ಪಿಟ್ಬುಲ್ ನಾಯಿಯ ಕಾಲು ಕತ್ತರಿಸಿದ ಕೇರಳದ ವ್ಯಕ್ತಿಯ ಬಂಧನ
ಕೇರಳದ ವ್ಯಕ್ತಿಯೊಬ್ಬರು ಪಿಟ್ಬುಲ್ ನಾಯಿಯ ಕಾಲುಗಳನ್ನು ಕತ್ತರಿಸಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಮುಂಡೂರು ಪಟ್ಟಣದಲ್ಲಿ ರಾಜೇಶ್ ಎಂಬ ವ್ಯಕ್ತಿ ಪಿಟ್ಬುಲ್ನ ಕಾಲುಗಳನ್ನು ಕತ್ತರಿಸಿದ ಆರೋಪ ಹೊರಿಸಲಾಗಿದೆ. ಅವರ ಮೇಲೆ ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಪಾಲಕ್ಕಾಡ್, ಸೆಪ್ಟೆಂಬರ್ 3: ಕೇರಳದ ಪಾಲಕ್ಕಾಡ್ (Palakkad) ಜಿಲ್ಲೆಯ ಮುಂಡೂರಿನ ಒಂದು ಹಳ್ಳಿಯಲ್ಲಿ ಸ್ಥಳೀಯರ ಮೇಲೆ ದಾಳಿ ಮಾಡಿ ಮತ್ತೊಂದು ಸಾಕು ನಾಯಿಯನ್ನು ಕೊಂದ ಪಿಟ್ಬುಲ್ನ ಕಾಲುಗಳನ್ನು ವ್ಯಕ್ತಿಯೊಬ್ಬ ಕತ್ತರಿಸಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಪಿಟ್ಬುಲ್ ನಾಯಿ (Pitbull Dog) ಆಕ್ರಮಣಕಾರಿಯಾಗಿ ಮಾರ್ಪಟ್ಟಿತ್ತು. ಆ ನಾಯಿ ಹಲವಾರು ಜನರನ್ನು ಕಚ್ಚಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಅದರ ಮಾಲೀಕ ಸತೀಶ್ ಈ ಹೇಳಿಕೆಗಳನ್ನು ನಿರಾಕರಿಸಿದ್ದಾರೆ. ಅವರು ತನ್ನ ಸಾಕುನಾಯಿ ಪಿಟ್ಬುಲ್ ಕಾಲನ್ನು ಕತ್ತರಿಸಿದ ವ್ಯಕ್ತಿಯ ಮೇಲೆ ದೂರು ನೀಡಿದ್ದಾರೆ.
ಮಾಲೀಕ ಸತೀಶ್ ನೀಡಿದ ದೂರಿನ ನಂತರ, ಪೊಲೀಸರು ರಾಜೇಶ್ ಎಂಬ ವ್ಯಕ್ತಿಯ ಮೇಲೆ ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅವರ ಮೇಲೆ ಯಾವುದೇ ಪ್ರಚೋದನೆಯಿಲ್ಲದೆ ನಾಯಿಯ ಕಾಲುಗಳನ್ನು ಕತ್ತರಿಸಿದ ಆರೋಪ ಹೊರಿಸಿದ್ದಾರೆ. ಗಾಯಗೊಂಡ ಪಿಟ್ಬುಲ್ ಅನ್ನು ಪಶು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಆ ನಾಯಿ ವೈದ್ಯರ ಆರೈಕೆಯಲ್ಲಿದೆ.
ಇದನ್ನೂ ಓದಿ: ಬುದ್ದಿವಂತ ಸಿನಿಮಾದ ರೀತಿ ಮದ್ವೆ ವಂಚನೆ: ಯುವತಿಯರನ್ನ ಬುಟ್ಟಿಗೆ ಬೀಳಿಸಿಕೊಂಡು ಮದ್ವೆಯಾಗಿ ಕೈಕೊಡುವುದೇ ಇವನ ಕಾಯಕ
ಗ್ರಾಮಸ್ಥರು ಹೇಳುವ ಪ್ರಕಾರ, ಪಿಟ್ಬುಲ್ ಹಲವಾರು ಜನರ ಮೇಲೆ ದಾಳಿ ಮಾಡಿ 1 ಸಾಕುನಾಯಿಯನ್ನು ಕೊಂದಿದೆ. ಮತ್ತೊಂದೆಡೆ, ಸತೀಶ್ ಒಡೆತನದ ಪಿಟ್ಬುಲ್ ಪಕ್ಕದವರ ಅಂಗಳಕ್ಕೆ ಹಾರಿದೆ ಎಂದು ರಾಜೇಶ್ ಮತ್ತು ಸ್ಥಳೀಯರು ಹೇಳಿದ್ದಾರೆ. ಅವರ ಪ್ರಕಾರ, ನಾಯಿ ವಯಸ್ಸಾದ ಮಹಿಳೆ ಮತ್ತು ಇನ್ನೊಂದು ಸಾಕು ನಾಯಿಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ.
ಆ ನಾಯಿಯನ್ನು ತಡೆಯಲು, ರಾಜೇಶ್ ಆತ್ಮರಕ್ಷಣೆಗಾಗಿ ವರ್ತಿಸಿ ನಾಯಿಯ ಒಂದು ಕಾಲನ್ನು ಕತ್ತರಿಸಿದ್ದಾರೆ ಎನ್ನಲಾಗಿದೆ. ಅವರ ಆತ್ಮರಕ್ಷಣೆಗಾಗಿ ಈ ರೀತಿ ಮಾಡಿದ್ದಾಗಿ ಅವರು ಸಮರ್ಥಿಸಿಕೊಂಡಿದ್ದಾರೆ. ಆ ನಾಯಿ ಈ ಹಿಂದೆ ಮತ್ತೊಂದು ಸಾಕುಪ್ರಾಣಿಯನ್ನು ಕಚ್ಚಿ ಕೊಂದಿತ್ತು ಮತ್ತು ಸಾರ್ವಜನಿಕರಲ್ಲಿ ಭಯ ಉಂಟುಮಾಡಿತ್ತು ಎಂದು ಅಕ್ಕಪಕ್ಕದವರು ಹೇಳಿದ್ದಾರೆ.
ಇದನ್ನೂ ಓದಿ: ಚಿನ್ನದಂಥ ಪತ್ನಿ ಇದ್ದರೂ ಇನ್ನೊಬ್ಬಳ ಜತೆ ಲವ್ವಿಡವ್ವಿ: ಹೆಂಡ್ತಿ ಪ್ರಶ್ನಿಸಿದ್ದಕ್ಕೆ ನಡೆಯಿತು ಘೋರ ದುರಂತ
ಅಂದಹಾಗೆ, ಕೇಂದ್ರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಮಾರ್ಚ್ 2024ರಲ್ಲಿ ಮಾರಣಾಂತಿಕ ನಾಯಿಗಳ ಮಾರಾಟ, ಸಂತಾನೋತ್ಪತ್ತಿ ಮತ್ತು ಆಮದನ್ನು ನಿಷೇಧಿಸಲು ಹೊರಡಿಸಿದ ಸುತ್ತೋಲೆಯಲ್ಲಿ ಪಿಟ್ಬುಲ್ ಸೇರಿದಂತೆ 23 ನಾಯಿಗಳ ತಳಿಯ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ, ಈ ಆದೇಶವನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




