ವಿದ್ಯಾರ್ಥಿ ಪ್ರತಿಭಟನೆ ವೇಳೆ ಪೆಲೆಟ್ ಗನ್ ದಾಳಿ: ಸಂತ್ರಸ್ತ ಯುವಕನೊಂದಿಗೆ ಪೊಲೀಸ್ ಠಾಣೆಗೆ ಹೋದ ರಾಹುಲ್ ಗಾಂಧಿ
ನೀಟ್ ಪ್ರತಿಭಟನೆ ವೇಳೆ ಪೆಲೆಟ್ ಗನ್ ದಾಳಿಗೆ ಗಾಯಗೊಂಡಿದ್ದ ವಿದ್ಯಾರ್ಥಿ ಸಾಹಿಲ್ ಲೋಚಬ್ ಅವರೊಂದಿಗೆ ರಾಹುಲ್ ಗಾಂಧಿ ದೆಹಲಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಗಾಯಾಳು ಸಾಹಿಲ್ ಎಫ್ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದ ಕಾರಣ, ರಾಹುಲ್ ಗಾಂಧಿ ಕಾನೂನು ಕ್ರಮಗಳ ಬಗ್ಗೆ ಪ್ರಶ್ನಿಸಿದರು. ಶಾಂತಿಯುತ ಪ್ರತಿಭಟನೆ ವೇಳೆ ನಡೆದ ಈ ದೌರ್ಜನ್ಯ ಖಂಡಿಸಿದ ಅವರು, ಕೇಂದ್ರ ಸಚಿವರ ರಾಜೀನಾಮೆಗೆ ಆಗ್ರಹಿಸಿದರು. ಸಾಹಿಲ್ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ನವದೆಹಲಿ, ಆಗಸ್ಟ್ 21: ನವದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ವೇಳೆ ಪೆಲೆಟ್ ಗನ್ (Pellet Gun) ದಾಳಿಯಿಂದ ಗಾಯಗೊಂಡಿದ್ದ ಯುವಕ ಸಾಹಿಲ್ ಲೋಚಬ್ ಅವರೊಂದಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಶುಕ್ರವಾರ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಮತ್ತು ಡಿಸಿಪಿ ಕಚೇರಿಗೆ ದಿಢೀರ್ ಭೇಟಿ ನೀಡಿದರು.
ಭದ್ರತಾ ಪಡೆಗಳ ಬಲಪ್ರಯೋಗದಿಂದ ಗಂಭೀರ ಗಾಯಗೊಂಡಿರುವ ಸಂತ್ರಸ್ತ ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಎಫ್ಐಆರ್ (FIR) ದಾಖಲಿಸಲು ನಿರಾಕರಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ.
ಮೊದಲು ಕನ್ನಾಟ್ ಪ್ಲೇಸ್ ಠಾಣೆಗೆ ತೆರಳಿದ್ದ ರಾಹುಲ್ ಗಾಂಧಿ, ಬಳಿಕ ಸಂಸತ್ ರಸ್ತೆಯಲ್ಲಿರುವ ನವದೆಹಲಿ ಡಿಸಿಪಿ ಕಚೇರಿಗೆ ಭೇಟಿ ನೀಡಿ, ಘಟನೆ ನಡೆದು ದಿನಗಳು ಕಳೆದರೂ ಎಫ್ಐಆರ್ ದಾಖಲಿಸದಿರುವುದನ್ನು ತೀವ್ರವಾಗಿ ಪ್ರಶ್ನಿಸಿದರು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿಚಾರ್ಜ್ ಮತ್ತು ಅಸ್ತ್ರಗಳ ಬಳಕೆಯ ಬಗ್ಗೆ ದೆಹಲಿ ಪೊಲೀಸರು ಈವರೆಗೆ ಕೈಗೊಂಡಿರುವ ಕಾನೂನು ಕ್ರಮಗಳ ಕುರಿತು ರಾಹುಲ್ ಗಾಂಧಿ ಲಿಖಿತ ವಿವರಗಳನ್ನು ಕೇಳಿದರು.
ನೀಟ್ ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಜುಲೈ 20 ರಂದು ನಡೆದ ‘ಸಂಸದ್ ಚಲೋ’ ಮೆರವಣಿಗೆಯಲ್ಲಿ ಭಾಗವಹಿಸಿದ್ದ 19 ವರ್ಷದ ಸಾಹಿಲ್ ಮೇಲೆ ಪೆಲೆಟ್ ಗುಂಡು ಹಾರಿಸಲಾಗಿತ್ತು. ಇದರಿಂದ ಅವರ ಬಲಗಣ್ಣಿಗೆ ಗಂಭೀರ ಹಾನಿಯಾಗಿದ್ದು, ದೃಷ್ಟಿ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆಯ ಮೇಲೆ ಮಾರಕ ಅಸ್ತ್ರಗಳನ್ನು ಪ್ರಯೋಗಿಸಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿದೆ. ಪೊಲೀಸರು ಪೆಲೆಟ್ ಗನ್ ಬಳಕೆಯನ್ನು ನಿರಾಕರಿಸಿದ್ದರೂ, ವೈದ್ಯಕೀಯ ದಾಖಲೆಗಳು ಗಾಯಗಳನ್ನು ದೃಢಪಡಿಸಿವೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.
ಮತ್ತಷ್ಟು ಓದಿ: ‘ಅಪ್ಪನ ಸಾವಿನ ಬಳಿಕ ಅಮ್ಮ ಪಟ್ಟ ಕಷ್ಟ ನಮಗಷ್ಟೇ ಗೊತ್ತು’; ಸೋನಿಯಾ ಗಾಂಧಿ ಬಗ್ಗೆ ರಾಹುಲ್ ಗಾಂಧಿ ಭಾವನಾತ್ಮಕ ಬರಹ
ಡಿಸಿಪಿ ಕಚೇರಿಯಲ್ಲಿ ತರಾಟೆ: ಮೊದಲು ಕನ್ನಾಟ್ ಪ್ಲೇಸ್ ಠಾಣೆಗೆ ತೆರಳಿದ್ದ ರಾಹುಲ್ ಗಾಂಧಿ, ಬಳಿಕ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿರುವ ಡಿಸಿಪಿ ಕಚೇರಿಗೆ ಭೇಟಿ ನೀಡಿ, ಈವರೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಅಧಿಕೃತ ವರದಿಯನ್ನು ಕೇಳಿದರು.
ಸಂತ್ರಸ್ತ ಯುವಕನ ಪರವಾಗಿ ಪೊಲೀಸರು ತಕ್ಷಣವೇ ಎಫ್ಐಆರ್ ದಾಖಲಿಸಬೇಕು ಎಂದು ಪಟ್ಟುಹಿಡಿದ ಹಿರಿಯ ಕಾಂಗ್ರೆಸ್ ನಾಯಕರು, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ಪ್ರಶ್ನಿಸಿದರು.
ಕಣ್ಣು ಕಳೆದುಕೊಳ್ಳುವ ಭೀತಿ: ನೀಟ್ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭದ್ರತಾ ಪಡೆಗಳು ಪೆಲೆಟ್ ಗನ್ ಬಳಸಿದ್ದರಿಂದ ಸಾಹಿಲ್ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ ಎಂದು ವೈದ್ಯಕೀಯ ವರದಿಗಳು ತಿಳಿಸಿವೆ.
ಗೃಹ ಸಚಿವಾಲಯಕ್ಕೆ ಪತ್ರ: ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಮತ್ತು ಮಾರಕ ಅಸ್ತ್ರಗಳನ್ನು ಬಳಸಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿ ರಾಹುಲ್ ಗಾಂಧಿ ಅವರು ಈ ಹಿಂದೆಯೇ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




