ಅತ್ಯಾಚಾರ ಪ್ರಕರಣ; ತರುಣ್ ತೇಜ್ಪಾಲ್ಗೆ 2 ವಾರಗಳೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶ
ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ‘ತೆಹಲ್ಕಾ’ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜ್ಪಾಲ್ ಎರಡು ವಾರಗಳ ಒಳಗಾಗಿ ಶರಣಾಗಬೇಕೆಂದು ಸುಪ್ರೀಂ ಕೋರ್ಟ್ ಇಂದು ನಿರ್ದೇಶನ ನೀಡಿದೆ. 2013ರಲ್ಲಿ ತಮ್ಮ ಸಹೋದ್ಯೋಗಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 2021ರಲ್ಲಿ ನೀಡಲಾಗಿದ್ದ ಖುಲಾಸೆ ಆದೇಶವನ್ನು ರದ್ದುಗೊಳಿಸಿದ ಬಾಂಬೆ ಹೈಕೋರ್ಟ್ನ ಗೋವಾ ಪೀಠವು, ಆಗಸ್ಟ್ 6ರಂದು ತರುಣ್ ತೇಜ್ಪಾಲ್ ಅವರನ್ನು ದೋಷಿ ಎಂದು ತೀರ್ಪು ನೀಡಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ನವದೆಹಲಿ, ಆಗಸ್ಟ್ 25: 2013ರ ಗೋವಾದ ಅತ್ಯಾಚಾರ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜ್ಪಾಲ್ (Tarun Tejpal) ಅವರಿಗೆ 2 ವಾರಗಳ ಒಳಗಾಗಿ ಶರಣಾಗುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಶರಣಾಗತಿಯಿಂದ ವಿನಾಯಿತಿ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ತರುಣ್ ತೇಜ್ಪಾಲ್ ಅವರು ಶರಣಾಗಿ, ಅದಕ್ಕೆ ಸಂಬಂಧಿಸಿದ ಶರಣಾಗತಿ ಪ್ರಮಾಣಪತ್ರವನ್ನು ಸಲ್ಲಿಸಿದ ನಂತರವಷ್ಟೇ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ಪೀಠವು ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ನಿಗದಿಪಡಿಸಿದೆ.
ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ, ಶಿಕ್ಷೆಯ ಆದೇಶವನ್ನು ಸವಾಲು ಮಾಡುವ ಮೊದಲು ವ್ಯಕ್ತಿಯು ಶರಣಾಗುವುದು ಕಡ್ಡಾಯವಾಗಿದೆ. ನಿಯಮಗಳ ಪ್ರಕಾರ ಶರಣಾಗತಿಯ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಅಥವಾ, ಇದರ ಬದಲಾಗಿ ಶರಣಾಗತಿಯಿಂದ ವಿನಾಯಿತಿ ಕೋರಿ ಅರ್ಜಿಯನ್ನು ಮೇಲ್ಮನವಿಯೊಂದಿಗೆ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: Tarun Tejpal: ತರುಣ್ ತೇಜ್ಪಾಲ್ಗೆ ಭಾರಿ ಆಘಾತ: 2013ರ ಅತ್ಯಾಚಾರ ಪ್ರಕರಣದಲ್ಲಿ ತೇಜ್ಪಾಲ್ ದೋಷಿ, ಹೈಕೋರ್ಟ್ ತೀರ್ಪು
ವಿಚಾರಣೆಯ ಸಮಯದಲ್ಲಿ, ಗೋವಾ ಸರ್ಕಾರದ ಪರವಾಗಿ ಹಾಜರಾದ ತುಷಾರ್ ಮೆಹ್ತಾ ಅವರು, ತರುಣ್ ತೇಜ್ಪಾಲ್ ಮೊದಲು ಶರಣಾಗತಿಯ ಪ್ರಮಾಣಪತ್ರವನ್ನು ಸಲ್ಲಿಸಿದರೆ ಮಾತ್ರ ಅವರ ಮೇಲ್ಮನವಿಯ ವಿಚಾರಣೆ ನಡೆಸಬಹುದು ಎಂದು ಹೇಳಿದರು. ಇಲ್ಲದಿದ್ದರೆ, ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಅವರು ಸುಪ್ರೀಂ ಕೋರ್ಟ್ನಿಂದ ಶರಣಾಗತಿಯಿಂದ ವಿನಾಯಿತಿ ಪಡೆಯಬೇಕಾಗುತ್ತದೆ ಎಂದು ಮೆಹ್ತಾ ಹೇಳಿದರು.
Supreme Court ordered rape convict and former editor of Tehelka magazine Tarun Tejpal to surrender within two weeks’ time and to furnish the surrender certificate before the Court.
A bench of Justice Alok Aradhe also agreed to list Tejpal’s appeal (challenge) against the Bombay… pic.twitter.com/hsctV9tS6o
— ANI (@ANI) August 25, 2026
ಇದನ್ನು ವಿರೋಧಿಸಿದ ತೇಜ್ಪಾಲ್ ಪರ ವಕೀಲ ಕಪಿಲ್ ಸಿಬಲ್, ಬಾಂಬೆ ಹೈಕೋರ್ಟ್ ಈಗಾಗಲೇ ತರುಣ್ ತೇಜ್ಪಾಲ್ ಅವರ ಶಿಕ್ಷೆಗೆ ತಡೆ ನೀಡಿದೆ. ಆದ್ದರಿಂದ, ಅವರನ್ನು ಮತ್ತೆ ಶರಣಾಗುವಂತೆ ಕೇಳುವುದು ಸೂಕ್ತವಲ್ಲ ಎಂದು ವಾದಿಸಿದರು.
ಏನಿದು ಪ್ರಕರಣ?:
2013ರ ನವೆಂಬರ್ 7 ಮತ್ತು 8ರಂದು ಗೋವಾದ ಪಣಜಿಯಲ್ಲಿ ನಡೆದ ತೆಹೆಲ್ಕಾ ಮ್ಯಾಗಜಿನ್ನ ಅಧಿಕೃತ ಕಾರ್ಯಕ್ರಮವೊಂದರಲ್ಲಿ, ಹೋಟೆಲ್ ಲಿಫ್ಟ್ ಒಳಗೆ ಆಗ ತೆಹಲ್ಕಾದ ಸಂಪಾದಕರಾಗಿದ್ದ ತರುಣ್ ತೇಜ್ಪಾಲ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳಾ ಪತ್ರಕರ್ತೆಯೊಬ್ಬರು ಆರೋಪಿಸಿದ್ದರು. ಆ ಆರೋಪಗಳ ಮೇಲೆ 2013ರ ನವೆಂಬರ್ 30ರಂದು ತರುಣ್ ತೇಜ್ಪಾಲ್ ಅವರನ್ನು ಬಂಧಿಸಲಾಯಿತು.
ಇದನ್ನೂ ಓದಿ: 2013ರ ಅತ್ಯಾಚಾರ ಪ್ರಕರಣ; ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್ಪಾಲ್ಗೆ 10 ವರ್ಷ ಜೈಲು ಶಿಕ್ಷೆ
2017ರ ಸೆಪ್ಟೆಂಬರ್ 29ರಂದು ಅವರ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಕಾನೂನುಬಾಹಿರ ಬಂಧನ ಸೇರಿದಂತೆ ಭಾರತೀಯ ದಂಡ ಸಂಹಿತೆಯ (IPC) ವಿವಿಧ ವಿಭಾಗಗಳ ಅಡಿಯಲ್ಲಿ ದೋಷಾರೋಪಣೆ ಹೊರಿಸಲಾಯಿತು. ಆದರೆ, ಅವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು. 2021ರ ಮೇ ತಿಂಗಳಲ್ಲಿ ಗೋವಾ ಸತ್ರ ನ್ಯಾಯಾಲಯವು ಪ್ರಾಸಿಕ್ಯೂಷನ್ ತನ್ನ ಪ್ರಕರಣವನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ಹೇಳಿ ತರುಣ್ ತೇಜ್ಪಾಲ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು. ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸುವಂತೆ ಕೋರಿ ಗೋವಾ ಸರ್ಕಾರವು ಬಾಂಬೆ ಹೈಕೋರ್ಟ್ನಲ್ಲಿ ಖುಲಾಸೆಯನ್ನು ಚಾಲೆಂಜ್ ಮಾಡಿತ್ತು.
2021ರಲ್ಲಿ ಗೋವಾ ಸತ್ರ ನ್ಯಾಯಾಲಯವು ನೀಡಿದ್ದ ಖುಲಾಸೆ ಆದೇಶವನ್ನು ರದ್ದುಗೊಳಿಸಿ, ತರುಣ್ ತೇಜ್ಪಾಲ್ ಅವರನ್ನು ದೋಷಿ ಎಂದು ಆಗಸ್ಟ್ 6 ರಂದು ತೀರ್ಪು ನೀಡಿತ್ತು. ಬಾಂಬೆ ಹೈಕೋರ್ಟ್ನ ಗೋವಾ ಪೀಠದ ಈ ತೀರ್ಪನ್ನು ಪ್ರಶ್ನಿಸಿ ತರುಣ್ ತೇಜ್ಪಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಅವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




