ಮೊಬೈಲ್ ಟಾರ್ಚ್ ಬೆಳಕಲ್ಲಿ ಆಪರೇಷನ್; 12 ವರ್ಷಗಳ ಬಳಿಕ ವೈದ್ಯರ ವಿರುದ್ಧ ಪ್ರಕರಣ ದಾಖಲು
12 ವರ್ಷಗಳ ಹಿಂದೆ ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಆಪರೇಷನ್ ಮಾಡಲಾಗಿತ್ತು. ಇದಾದ ನಂತರ ಆ ರೋಗಿ ಮೃತಪಟ್ಟಿದ್ದರು. ತನ್ನ ಮಗನ ಸಾವಿಗೆ ನ್ಯಾಯ ಸಿಗಬೇಕೆಂದು ಹೋರಾಟ ನಡೆಸಿದ್ದು ಆ ರೋಗಿಯ ತಾಯಿಯ ಪ್ರಯತ್ನ ಒಂದು ಮಟ್ಟಿಗೆ ಯಶಸ್ವಿಯಾಗಿದೆ. ಕೊನೆಗೂ ಪೊಲೀಸರು ಆ ವೈದ್ಯರ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. 2014ರಲ್ಲಿ ನಡೆದ ಈ ಘಟನೆಯ ಬಗ್ಗೆ ಈಗ ಪ್ರಕರಣ ದಾಖಲಾಗಿದೆ.

ಮುಂಬೈ, ಮಾರ್ಚ್ 23: ವೈದ್ಯರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ರೋಗಿಗೆ ಆಪರೇಷನ್ (Operation) ಮಾಡಿ ಆ ರೋಗಿ ಮೃತಪಟ್ಟಿದ್ದರು. ಇದಾದ 12 ವರ್ಷಗಳವರೆಗೂ ಆ ವೈದ್ಯರಿಗೆ ಶಿಕ್ಷೆ ಕೊಡಿಸಲು ಮೃತಪಟ್ಟ ರೋಗಿಯ ತಾಯಿ ತೀವ್ರ ಹೋರಾಟ ನಡೆಸಿದ್ದರು. ಆ ಘಟನೆ ನಡೆದು 12 ವರ್ಷಗಳ ಬಳಿಕ ಇದೀಗ ಈ ಹೋರಾಟಕ್ಕೆ ಸ್ವಲ್ಪ ಮಟ್ಟಿಗಿನ ಯಶಸ್ಸು ಸಿಕ್ಕಿದ್ದು, 12 ವರ್ಷಗಳ ನಂತರ ಆ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.
2014ರಲ್ಲಿ ನಡೆದ ದುರಂತ ಘಟನೆಯಲ್ಲಿ ಮಹಾರಾಷ್ಟ್ರದ ಗೋವಂಡಿಯ 23 ವರ್ಷದ ಸಲ್ಮಾನ್ ಬಾಬರ್ ಶಾ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ತಾಯಿ ನಸೀಮ್ ಬಾನು ಬಾಬರ್ ಶಾ ತನ್ನ ಮಗನ ಸಾವಿಗೆ ನ್ಯಾಯ ಕೊಡಿಸಲು ಹಠದಿಂದ ಹೋರಾಟ ನಡೆಸಿದ್ದರು.
ಇದನ್ನೂ ಓದಿ: ನಗರದಲ್ಲಿ ಹೆಚ್ಚಿದ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್; ನಿವೃತ್ತ ಸಂಶೋಧಕನಿಗೆ 5 ಕೋಟಿ ರೂ. ವಂಚನೆ!
2014ರ ಏಪ್ರಿಲ್ 8ರಂದು ಸಲ್ಮಾನ್ ಬೈಕ್ ಅಪಘಾತಕ್ಕೀಡಾದರು. ಈ ಅಪಘಾತದಲ್ಲಿ ಅವರ ಬಲ ತೊಡೆಯ ಮೂಳೆ ಮುರಿದಿತ್ತು. ಅವರನ್ನು ತಕ್ಷಣ ಗೋವಂಡಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಇದು ಸಣ್ಣ ಗಾಯವಾದ್ದರಿಂದ ಕೆಲವೇ ದಿನಗಳಲ್ಲಿ ಅವರು ಚೇತರಿಸಿಕೊಳ್ಳುತ್ತಾರೆ ಎಂದು ಕುಟುಂಬವು ನಿರೀಕ್ಷಿಸಿತ್ತು. ಆದರೆ, ಶಸ್ತ್ರಚಿಕಿತ್ಸೆಯ ನಂತರ ಅವರ ಸ್ಥಿತಿ ಹದಗೆಡಲು ಪ್ರಾರಂಭಿಸಿತು. ನಂತರ ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಏಪ್ರಿಲ್ 17, 2014ರಂದು ಅವರು ‘ಸೆಪ್ಟಿಸೆಮಿಯಾ’ದಿಂದ ನಿಧನರಾದರು. ಇದು ತೀವ್ರವಾದ ರಕ್ತಪ್ರವಾಹ ಸೋಂಕು. ಅಧಿಕೃತ ದಾಖಲೆಗಳು ಅದು ಸಹಜ ಸಾವು ಎಂದೇ ಹೇಳುತ್ತಿದ್ದರೂ ಅವರ ತಾಯಿ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ರೋಗಿಯ ತಾಯಿ ನಸೀಮ್ ವೈದ್ಯರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅವರ ಪ್ರಕಾರ, ವಿದ್ಯುತ್ ಇಲ್ಲದಿದ್ದರೂ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತ. ಅತ್ಯಂತ ನಿರ್ಲಕ್ಷ್ಯದಿಂದ ಆಪರೇಷನ್ ಮಾಡಲಾಗಿತ್ತು. ಸರಿಯಾದ ವೈದ್ಯಕೀಯ ಸೌಲಭ್ಯಗಳನ್ನು ಬಳಸದೆ ಚಿಕಿತ್ಸೆಯನ್ನು ನೀಡಲಾಗಿತ್ತು. ರೋಗಿಯ ಸ್ಥಿತಿಯ ಬಗ್ಗೆ ಕುಟುಂಬಕ್ಕೆ ತಪ್ಪು ಮಾಹಿತಿ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದರು. ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಲಾಗಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಪ್ರೀತಿಸಿದವನನ್ನು ನಂಬಿ ಮದುವೆಯಾಗಿ ಬಂದಿದ್ದ ಮಹಿಳೆ ನಾಲ್ಕೇ ತಿಂಗಳಲ್ಲಿ ಪತಿ ಕೈಯಿಂದಲೇ ಹೆಣವಾದ್ಲು
ಈ ಘಟನೆಯ ನಂತರ, ನಸೀಮ್ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡಿದರು. ಅವರು ಪೊಲೀಸರಿಗೆ ಪದೇ ಪದೇ ದೂರುಗಳನ್ನು ಸಲ್ಲಿಸಿದರು. ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಮಾಹಿತಿ ಪಡೆಯಲು ಪ್ರಯತ್ನಿಸಿದರು. ಕೊನೆಗೆ ಎಲ್ಲೂ ನ್ಯಾಯ ಸಿಗದ ಕಾರಣದಿಂದ ಅಂತಿಮವಾಗಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದರು. ಕೊನೆಗೂ ಈಗ ಅಂದರೆ ಸಲ್ಮಾನ್ ಸಾವನ್ನಪ್ಪಿ 12 ವರ್ಷಗಳ ನಂತರ ಪೊಲೀಸರು ಸಂಬಂಧಪಟ್ಟ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Mon, 23 March 26
