ಕೇಂದ್ರ ಸರ್ಕಾರ ಜಾತಿ ಗಣತಿಗೆ ಕರ್ನಾಟಕದಲ್ಲಿ ಯಾರು ಏನು ಅಂದ್ರು?
ಕೇಂದ್ರ ಸರ್ಕಾರದ ಜಾತಿ ಗಣತಿ ನಿರ್ಧಾರಕ್ಕೆ ಕರ್ನಾಟಕದಲ್ಲಿ ಬಹುತೇಕ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ-ಆರ್ಥಿಕ ಅಂಶಗಳನ್ನು ಒಳಗೊಂಡ ಗಣತಿಯ ಅಗತ್ಯವನ್ನು ಒತ್ತಿ ಹೇಳಿದರೆ, ಬಿಜೆಪಿ ನಾಯಕರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಈ ವಿಷಯದಲ್ಲಿ ತೀವ್ರವಾದ ರಾಜಕೀಯ ವಾಗ್ವಾದಗಳು ನಡೆಯುತ್ತಿವೆ. ಜಾತಿ ಗಣತಿಯ ಪಾರದರ್ಶಕತೆ ಮತ್ತು ಅದರ ಅನುಷ್ಠಾನದ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಬೆಂಗಳೂರು, ಏಪ್ರಿಲ್ 30: ರಾಷ್ಟ್ರೀಯ ಜನಗಣತಿಯೊಂದಿಗೆ (Census) ಜಾತಿ ಗಣತಿಯನ್ನೂ (Caste Census) ಕೂಡ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಅಥವಾ ಆರ್ಥಿಕ ಜನಗಣತಿ ಮಾಡುತ್ತಾರಾ? ಅಥವಾ ಜಾತಿ ಜನಗಣತಿ ಮಾಡುತ್ತಾರಾ ನನಗೆ ಗೊತ್ತಿಲ್ಲ. ಕೇವಲ ಜಾತಿ ಗಣತಿ, ಜನಗಣತಿ ಮಾಡುತ್ತೇವೆ ಅಂದಿದ್ದಾರೆ. ಸಾಮಾಜಿಕ, ಆರ್ಥಿಕ ಸರ್ವೆ ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ಹುನಗುಂದದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಜಾತಿಗಣತಿಯನ್ನು ಸಂಪುಟದಲ್ಲಿ ನಾವು ಮಂಡಿಸಿದ್ದೇವೆ, ಒಪ್ಪಿಗೆ ಕೇಳಿದ್ದೇವೆ. ಸಚಿವರು ಒಪ್ಪಿಗೆ ಕೊಟ್ಟ ಮೇಲೆ ಮತ್ತೆ ಸಂಪುಟದಲ್ಲಿ ಚರ್ಚೆಯಾಗುತ್ತಿದೆ. ಜಾತಿಗಣತಿ ಮಾಡುತ್ತೇವೆಂದು ನಾವು ಪ್ರಣಾಳಿಕೆಯ

ಸಾಂದರ್ಭಿಕ ಪೋಟೋ
ಲ್ಲಿ ಹೇಳಿದ್ವಿ ಎಂದರು.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿ ಮಾಡಿ: ತಿಮ್ಮಾಪುರ
ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಜಾತಿಗಣತಿ ಮಾಡಿ. ಕೇಂದ್ರ ಸರಕಾರ ಜನಸಂಖ್ಯೆ ಹಾಗೂ ಜಾತಿಗಣತಿ ಮಾಡಲಿಕ್ಕೆ ಹೊರಟಿದೆ. ಅದೇ ನಾವು ಜಾತಿಗಣತಿ ಮಾಡುವ ವೇಳೆ ಬಾರಿ ಟೀಕೆ ಮಾಡಿದರು. ಕೇಂದ್ರ ಸರಕಾರ ಈಗ ಜಾತಿಗಣತಿ ಮಾಡುವುದಾಗಿ ಹೇಳಿದೆ. ಇವಾಗ ಒಂದು ಹೇಳುವುದು, ಆಗಾವ ಒಂದು ಹೇಳುವುದು. ನಾವು ಮಾಡಿದಾಗ ಒಂದು ಟೀಕೆ ಅವರು ಮಾಡಿದಾಗ ಒಂದು ಟೀಕೆ. ಈ ತರಹದ ಧ್ವಂಧ್ವತೆಯನ್ನು ಜನ ಒಪ್ಪುವುದಿಲ್ಲ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ವಾಗ್ದಾಳಿ ಮಾಡಿದರು.
ಬಿಜೆಪಿಯವರಿಗೆ ಒಳ್ಳೆ ಬುದ್ಧಿ ಇಲ್ಲ: ಶಿವರಾಜ ತಂಗಡಗಿ
ಬಿಜೆಪಿಯವರಿಗೆ ಈಗ ಎಚ್ಚರ ಆಗಿರಬೇಕು. ಶೈಕ್ಷಣಿಕ, ಸಾಮಾಜಿಕ ಗಣತಿ ಮಾಡಿದರೆ ಒಳ್ಳೆಯದು. ಎಲ್ಲ ಸಮುದಾಯದವರು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಸಿದ್ದರಾಮಯ್ಯರು ಸಾಮಾಜಿಕ, ಶೈಕ್ಷಣಿಕ ಗಣತಿ ಮಾಡಿಸಿದರು. ಅದೇ ಮಾದರಿಯಲ್ಲಿ ಮಾಡಿದರೆ ಒಳ್ಳೆಯದು. ಕಾಂಗ್ರೆಸ್ನವರಿಗೆ ಇದ್ದಂತ ಅಂತ ಒಳ್ಳೇ ಬುದ್ಧಿ ಬಿಜೆಪಿಗಿಲ್ಲ ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.
ಜಾತಿಗಣತಿ ನಿರ್ಧಾರಕ್ಕೆ ಬಿಜೆಪಿಗರ ಸ್ವಾಗತ
ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡುತ್ತೇವೆ: ಸುಧಾಕರ ರೆಡ್ಡಿ
ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡುತ್ತೇವೆ. ಕೇಂದ್ರ ಸರ್ಕಾರದಿಂದ ವೈಜ್ಞಾನಿಕ ಗಣತಿ ನಡೆಯಲಿದೆ. ಕಾಂಗ್ರೆಸ್ ಯಾವತ್ತೂ ಜಾತಿಗಣತಿ ಮಾಡಲು ಯತ್ನಿಸಿಲ್ಲ. ಈಗ ಪ್ರಧಾನಿ ಮೋದಿ ಸಂಪುಟ ತೀರ್ಮಾನ ಮಾಡಿದೆ ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಹೇಳಿದರು.
ಜಾತಿಗಣತಿ ಆಗುತ್ತಿರುವುದು ಬಹಳ ವಿಶೇಷ: ಅಶ್ವತ್ಥ್ ನಾರಾಯಣ್
ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡುತ್ತೇವೆ. ರಾಜ್ಯದ ಜನರ ಪರವಾಗಿ ಪ್ರಧಾನಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಬಾರಿ ಜಾತಿಗಣತಿ ಆಗುತ್ತಿರುವುದು ಬಹಳ ವಿಶೇಷ. ಕರ್ನಾಟಕದಲ್ಲಿ ಜಾತಿಗಣತಿ ಬಹಳ ಗೊಂದಲ ಆಗಿತ್ತು. ಎಲ್ಲ ಜಾತಿಗಳ ಗಣತಿ ಮಾಡಿಲ್ಲ ಎಂದು ದೂರು ಬಂದಿತ್ತು. ಕೇಂದ್ರ ಸರ್ಕಾರ ವೈಜ್ಞಾನಿಕ, ಸ್ಪಷ್ಟವಾಗಿ ಸಮೀಕ್ಷೆ ಮಾಡುತ್ತೆ. ರಾಜ್ಯ ಸರ್ಕಾರ ಕದ್ದುಮುಚ್ಚಿ ಜಾತಿಗಣತಿಯನ್ನ ಮಾಡಿತ್ತು ಎಂದು ಶಾಸಕ ಡಾ.ಅಶ್ವತ್ಥ್ ನಾರಾಯಣ್ ಹೇಳಿದರು.
ಇದನ್ನೂ ಓದಿ: ಭಾರತದಲ್ಲಿ ಜನಗಣತಿ ಜೊತೆಗೆ ಜಾತಿಗಣತಿ; ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ
ಜನಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ: ರವಿಕುಮಾರ್
ಜನಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಈ ಕುರಿತು ಸಂವಿಧಾನದಲ್ಲಿಯೇ ಸ್ಪಷ್ಟ ಉಲ್ಲೇಖ ಇದೆ. ಕೆಲ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು, ಗಣತಿ ಮಾಡಿರುವುದನ್ನು ನೋಡಿದ್ದೇವೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ರಾಜ್ಯ ಸರ್ಕಾರ ಮಾಡಿಸಿರುವ ಸಮೀಕ್ಷೆ ಸರಿಯಾಗಿ ಆಗಿಲ್ಲ ಎಂದು ಪರಿಷತ್ ವಿಪಕ್ಷ ಮುಖ್ಯಸಚೇತಕ ರವಿಕುಮಾರ್ ಹೇಳಿದರು.







