ಫೈನಾನ್ಸ್ ಕಿರುಕುಳ: ಮತ್ತೊಮ್ಮೆ ರಾಜ್ಯಪಾಲರ ಅಂಗಳಕ್ಕೆ ಸುಗ್ರೀವಾಜ್ಞೆ ಕರಡು ರವಾನೆ
ಕರ್ನಾಟಕ ಸರ್ಕಾರವು ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರವಾಗಿ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೆ ಮರುಪರಿಶೀಲನೆಗಾಗಿ ರವಾನಿಸಿದೆ. ರಾಜ್ಯಪಾಲರು ಮೊದಲು ಸ್ಪಷ್ಟೀಕರಣ ಕೋರಿ ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿದ್ದರು. ಇದೀಗ ಸರ್ಕಾರವು ಯಾವುದೇ ಬದಲಾವಣೆಗಳಿಲ್ಲದೆ ಸುಗ್ರೀವಾಜ್ಞೆಯನ್ನು ಮತ್ತೆ ಸಲ್ಲಿಸಿದ್ದು, ಮರು ಪರಿಶೀಲಿಸಿ ಅನುಮೋದನೆ ನೀಡುವಂತೆ ಸರ್ಕಾರ ರಾಜ್ಯಪಾರಿಗೆ ಕೋರಿದೆ.

ಬೆಂಗಳೂರು, ಫೆಬ್ರವರಿ 10: ಕರ್ನಾಟಕದಲ್ಲಿ ಫೈನಾನ್ಸ್ (microfinance) ಕಿರುಕುಳ ವಿರುದ್ಧದ ಸುಗ್ರೀವಾಜ್ಞೆ ರಾಜ್ಯಪಾಲರ ಅಂಗಳದವರೆಗೆ ಹೋಗಿ ಸರ್ಕಾರಕ್ಕೆ ವಾಪಸ್ ಆಗಿತ್ತು. ಹತ್ತಾರು ಕಾರಣ ನೀಡಿದ್ದ ರಾಜ್ಯಪಾಲರು, ಸರ್ಕಾರದ ಆಸೆಗೆ ತಣ್ಣೀರು ಎರಚಿದ್ದರು. ಆದರೆ ಇದೀಗ ಮತ್ತೊಮ್ಮೆ ರಾಜ್ಯಪಾಲರ ಅಂಗಳಕ್ಕೆ ಸರ್ಕಾರ ಸುಗ್ರೀವಾಜ್ಞೆ ಕರಡು ರವಾನೆ ಮಾಡಿದೆ. ಈ ಭಾರಿ ಸುಗ್ರೀವಾಜ್ಞೆಯಲ್ಲಿ ಯಾವುದೇ ಬದಲಾವಣೆ ಮಾಡದೆಯೇ ಕರಡು ರವಾನಿಸಲಾಗಿದೆ.
ಸುಗ್ರೀವಾಜ್ಞೆ ಜಾರಿಗೆ ಬರಬೇಕಾದ ಅಗತ್ಯತೆ ಬಗ್ಗೆ ವಿವರಣೆ ನೀಡಿರುವ ಸರ್ಕಾರ, ಅನಗತ್ಯ ಕಿರುಕುಳ, ಅಮಾನವೀಯ ವಸೂಲಾತಿ ಕ್ರಮ ಹಾಗೂ ಬಡವರ ಮೇಲಿನ ಒತ್ತಡ ಸೇರಿದಂತೆ ತಡೆಗಟ್ಟಬೇಕಾದ ಅಗತ್ಯತೆ ಬಗ್ಗೆ ವಿವರಣೆ ನೀಡಿದೆ. ಸಾಲದ ಪ್ರಮಾಣ ಆಧರಿಸಿ ದಂಡದ ಮೊತ್ತ ನಿಗದಿಪಡಿಸಿಲ್ಲ ಎಂಬ ಬಗ್ಗೆ ವಿವರಣೆ ನೀಡಲಾಗಿದೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ವಿರುದ್ಧದ ಸುಗ್ರೀವಾಜ್ಞೆ ಡ್ರಾಫ್ಟ್ ರಾಜ್ಯಪಾಲರಿಗೆ ರವಾನೆ: ಜೈಲು ಶಿಕ್ಷೆಯಲ್ಲಿ ಬದಲಾವಣೆ
ಸಾಲ ಪಡೆಯುವ ಹಾಗೂ ಸಾಲ ನೀಡುವ ವ್ಯವಸ್ಥೆಗೆ ಧಕ್ಕೆ ಬರದಂತೆ ಸುಗ್ರೀವಾಜ್ಞೆ ಅನುಷ್ಠಾನಕ್ಕೆ ಬರಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಅತಿ ಅಗತ್ಯತೆಯ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಅನುಮೋದಿಸಲು ಮನವಿ ಮಾಡಲಾಗಿದ್ದು, ಮರು ಪರಿಶೀಲಿಸಿ ಅನುಮೋದನೆ ನೀಡುವಂತೆ ಸರ್ಕಾರ ಕೋರಿದೆ.
ಕರ್ನಾಟಕದಲ್ಲಿ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕಬೇಕು ಅಂತಾ ಹೊರಟ ಸರ್ಕಾರ ಸುಗ್ರೀವಾಜ್ಞೆ ಮೊರೆ ಹೋಗಿತ್ತು. ಕಠಿಣ ಕಾನೂನು ರೂಪಿಸಿ ರಾಜ್ಯಪಾಲರಿಗೆ ರವಾನಿಸಲಾಗಿತ್ತು. ಸುಗ್ರೀವಾಜ್ಞೆಗೆ ಅಂಕಿತ ಹಾಕಲು ನಿರಾಕರಸಿದ್ದ ರಾಜ್ಯಪಾಲರು, ಸರ್ಕಾರಕ್ಕೆ ವಾಪಸ್ ಕಳಿಸಿದ್ದರು. ಇದರಲ್ಲಿರುವ ಅಂಶಗಳನ್ನ ನೋಡಿದರೆ ಮುಂದಿನ ದಿನಗಳಲ್ಲಿ ಮಾರಕ ಆಗಲಿದೆ ಅನ್ನೋ ಕಾರಣ ನೀಡಿ ಸರ್ಕಾರ ಸ್ಪಷ್ಟನೆ ಕೇಳಿ ವಾಪಸ್ ಮಾಡಿದ್ದರು.
ಇದನ್ನೂ ಓದಿ: ಸುಗ್ರೀವಾಜ್ಞೆ ಹೊಸ್ತಿಲಲ್ಲೇ ಸಿದ್ದರಾಮಯ್ಯ ಸರ್ಕಾರಕ್ಕೆ ಸೆಡ್ಡು ಹೊಡೆದ ಮೈಕ್ರೋಫೈನಾನ್ಸ್ ಕಂಪನಿಗಳು
ಸುಗ್ರೀವಾಜ್ಞೆಯಲ್ಲಿ ಸಾಲ ಪಡೆದವರ ರಕ್ಷಣೆಗೆ ಮಾತ್ರ ಗಮನಹರಿಸಲಾಗಿದೆ. ಆದರೆ ಸಹಜ ನ್ಯಾಯದ ಅಡಿಯಲ್ಲಿ ಸಾಲ ನೀಡಿದವರಿಗೆ ರಕ್ಷಣೆ ಕಾಣುತ್ತಿಲ್ಲ. ಸುದೀರ್ಘ ಅವಧಿಯಲ್ಲಿ ಸುಗ್ರೀವಾಜ್ಞೆ ಮಾರಕವಾಗಲಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳು 3 ಲಕ್ಷ ರೂ ಗಿಂತ ಹೆಚ್ಚು ಸಾಲ ಕೊಡಲ್ಲ. ಸಾಲ ಪಡೆಯುವವರಿಂದ ದಾಖಲೆ ಪಡೆಯಬಾರದು ಎಂದು ಹೇಳಿದ್ದೀರಿ. ಇದೇ ರೂಲ್ಸ್ ಸರ್ಕಾರಿ ಸಂಸ್ಥೆಗಳ ಸಾಲದ ವೇಳೆ ಅನುಸರಿಸಬೇಕಾದ ಸ್ಥಿತಿ ಎದುರಾಗಬಹುದು. ಇನ್ನು ಶಿಕ್ಷೆ ಪ್ರಮಾಣ 10 ವರ್ಷ ಎಂದಿದೆ, ಇದರಲ್ಲಿ ಯಾವುದೇ ಲಾಜಿಕ್ ಇಲ್ಲ. ಇದರಿಂದ ಪ್ರಾಮಾಣಿಕವಾಗಿ ಸಾಲ ನೀಡಿದ್ದವರಿಗೂ ಇದರ ಪರಿಣಾಮ ಬೀರಲಿದೆ. ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವವರಿಗೂ ಸಮಸ್ಯೆ ಆಗಲಿದೆ. ಹೀಗೆ ಕಾರಣ ನೀಡಿ ಸುಗ್ರೀವಾಜ್ಞೆ ವಾಪಸ್ ಕಳಿಸಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:29 pm, Mon, 10 February 25




