‘ಚಾಂಪಿಯನ್ಸ್ ಟ್ರೋಫಿ ಸೋತಿದ್ದರೂ..’; ನಾಯಕತ್ವ ಬದಲಾವಣೆಯ ಬಗ್ಗೆ ಅಗರ್ಕರ್ ಹೇಳಿದ್ದಿದು
India vs Australia: ವೆಸ್ಟ್ ಇಂಡೀಸ್ ಸರಣಿ ಬಳಿಕ, ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳ ಈ ಸರಣಿಗೆ ತಂಡ ಪ್ರಕಟಗೊಂಡಿದೆ. ಅಚ್ಚರಿ ಎಂಬಂತೆ ರೋಹಿತ್ ಶರ್ಮಾ ಬದಲಿಗೆ ಶುಭ್ಮನ್ ಗಿಲ್ ಅವರನ್ನು ಏಕದಿನ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಈ ನಿರ್ಧಾರ ಭವಿಷ್ಯದ ದೃಷ್ಟಿಯಿಂದ ತೆಗೆದುಕೊಂಡಿದ್ದು, 2027 ವಿಶ್ವಕಪ್ಗೆ ಹೊಸ ನಾಯಕನನ್ನು ಸಿದ್ಧಪಡಿಸುವ ಉದ್ದೇಶ ಹೊಂದಿದೆ ಎಂದು ಅಜಿತ್ ಅಗರ್ಕರ್ ಸ್ಪಷ್ಟಪಡಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಮುಗಿದ ನಂತರ,ಟೀಂ ಇಂಡಿಯಾ, ಆಸ್ಟ್ರೇಲಿಯಾ (India Team for Australia Tour) ಪ್ರವಾಸ ಕೈಗೊಳ್ಳಲಿದೆ. ಅಕ್ಟೋಬರ್ 19 ರಿಂದ ಆರಂಭವಾಗಿ ನವೆಂಬರ್ 8 ರವರೆಗೆ ನಡೆಯಲಿರುವ ಈ ಪ್ರವಾಸದಲ್ಲಿ ಟೀಂ ಇಂಡಿಯಾ ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಈಗಾಗಲೇ ಎರಡು ತಂಡಗಳನ್ನು ಪ್ರಕಟಿಸಲಾಗಿದೆ. ನಿರೀಕ್ಷೆಯಂತೆಯೇ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ ಅವರನ್ನು ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ. ಆದರೆ ಏಕದಿನ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದ್ದು, ರೋಹಿತ್ ಶರ್ಮಾ ಬದಲಿಗೆ ಶುಭ್ಮನ್ ಗಿಲ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಜಿತ್ ಅಗರ್ಕರ್ (Ajit Agarkar) ಹಲವಾರು ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದ್ದಾರೆ.
ನಿರ್ಧಾರ ನಮಗೆ ಸುಲಭವಾಗಿರಲಿಲ್ಲ
ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾವನ್ನು ಪ್ರಕಟಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ಬದಲಿಗೆ ಶುಭ್ಮನ್ ಗಿಲ್ ಅವರನ್ನು ನಾಯಕರನ್ನಾಗಿ ಮಾಡುವ ಬಗ್ಗೆ ಅಗರ್ಕರ್ ಅವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಗರ್ಕರ್, ‘ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದುಹಾಕುವ ನಿರ್ಧಾರ ನಮಗೆ ಸುಲಭವಾಗಿರಲಿಲ್ಲ. ಅವರು 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲದಿದ್ದರೂ ಸಹ, ಅದು ಕಠಿಣ ನಿರ್ಧಾರವಾಗುತ್ತಿತ್ತು. ಆದರೆ ನಾವು ಭವಿಷ್ಯದ ಬಗ್ಗೆ ಯೋಚಿಸಬೇಕು. ತಂಡ ಪ್ರಸ್ತುತ ಎಲ್ಲಿದೆ ಮತ್ತು ತಂಡ ಏನು ಬಯಸುತ್ತದೆ ಎಂಬುದನ್ನು ನಾವು ನೋಡಬೇಕು. 2027 ರ ವಿಶ್ವಕಪ್ಗೆ ಮೊದಲು ನಾವು ನಾಯಕನನ್ನು ಬದಲಾಯಿಸಲು ಬಯಸಿದ್ದೆವು, ನಾವೆಲ್ಲರೂ ಒಂದೇ ದೃಷ್ಟಿಕೋನವನ್ನು ಹೊಂದಿದ್ದೇವೆ. ಅದಕ್ಕಾಗಿಯೇ ಗಿಲ್ಗೆ ತಂಡದ ನಾಯಕತ್ವವನ್ನು ನೀಡಲಾಗಿದೆ’ ಎಂದು ಹೇಳಿದರು.
ರೋಹಿಯ್ ಭವಿಷ್ಯದ ಬಗ್ಗೆ ಅಗರ್ಕರ್ ಹೇಳಿದ್ದೇನು?
ಇನ್ನು ನಾಯಕತ್ವ ಕಳೆದುಕೊಂಡಿರುವ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆಯೂ ಅಜಿತ್ ಅಗರ್ಕರ್ ಅವರನ್ನು ಕೇಳಲಾಯಿತು. ಈ ಬಗ್ಗೆ ಮಾತನಾಡಿದ ಅವರು, ‘ನಾವು ಇನ್ನೂ ಅವರೊಂದಿಗೆ ಈ ಬಗ್ಗೆ ಮಾತನಾಡಿಲ್ಲ’ ಎಂದಷ್ಟೇ ಹೇಳಿದರು. ಹಾಗಾಗಿ, ರೋಹಿತ್ ಎಷ್ಟು ಕಾಲ ಕ್ರಿಕೆಟ್ ಆಡುತ್ತಾರೆ ಎಂಬುದನ್ನು ಕಾಲವೇ ಹೇಳಬೇಕು.
ಏತನ್ಮಧ್ಯೆ, ಭಾರತ ತಂಡವು ಅಕ್ಟೋಬರ್ 19 ರಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ, ಈ ಸರಣಿಯ ಮೊದಲ ಪಂದ್ಯ ಪರ್ತ್ನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಅಕ್ಟೋಬರ್ 23 ರಂದು ಅಡಿಲೇಡ್ನಲ್ಲಿ ಮತ್ತು ಮೂರನೇ ಪಂದ್ಯ ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ನಡೆಯಲಿದೆ. ಅದಾದ ನಂತರ ಟಿ20 ಸರಣಿ ನಡೆಯಲಿದೆ.
IND vs AUS: ಶುಭ್ಮನ್ ಗಿಲ್ಗೆ ಏಕದಿನ ನಾಯಕತ್ವ; ವಿಶ್ವಕಪ್ ಆಡ್ತಾರಾ ರೋಹಿತ್, ಕೊಹ್ಲಿ?
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ
ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಧ್ರುವ ಜರೆಲ್ ಮತ್ತು ಯಶಸ್ವಿ ಜೈಸ್ವಾಲ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Sat, 4 October 25
