MS Dhoni Retirement: ಧೋನಿ ನಿವೃತ್ತಿ ಆಗಲ್ವಂತೆ: ಊಹಾಪೋಹಗಳಿಗೆ ತೆರೆ ಎಳೆದ ಸಿಎಸ್ಕೆ ಕೋಚ್
DC vs CSK, IPL 2025: ಐಪಿಎಲ್ 2025ರ ಡೆಲ್ಲಿ ಕ್ಯಾಪಿಟಲ್ಸ್-ಸಿಎಸ್ಕೆ ಪಂದ್ಯ ವೀಕ್ಷಣೆಗೆ ಎಂಎಸ್ ಧೋನಿಯ ಇಡೀ ಕುಟುಂಬ ಬಂದಿತ್ತು. ಹೀಗಾಗಿ ಥಾಲಾ ತನ್ನ ತವರು ನೆಲದಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡುತ್ತಿದ್ದಾರೆ ಎಂದು ಚರ್ಚೆಗಳು ಕೂಡ ತೀವ್ರಗೊಂಡವು. ಧೋನಿ ನಿವೃತ್ತಿ ಘೋಷಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಈ ಎಲ್ಲ ಊಹಾಪೋಹಗಳಿಗೆ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ತೆರೆ ಎಳೆದಿದ್ದಾರೆ.

ಬೆಂಗಳೂರು (ಏ. 06): ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ ಕಳಪೆ ಸ್ಥಿತಿಯಲ್ಲಿದೆ. ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿಯಂತಹ (Mahendra Singh Dhoni) ದಿಗ್ಗಜ ಆಟಗಾರನಿದ್ದರೂ, ಸಿಎಸ್ಕೆ 18 ನೇ ಸೀಸನ್ನಲ್ಲಿ ಹ್ಯಾಟ್ರಿಕ್ ಸೋಲುಗಳನ್ನು ಅನುಭವಿಸಿದೆ. ಈ ಋತುವಿನಲ್ಲಿ ಸಿಎಸ್ಕೆ ತನ್ನ ನಾಲ್ಕನೇ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿತ್ತು, ಇದರಲ್ಲಿ 25 ರನ್ಗಳಿಂದ ಸೋತಿದೆ. ಆ ಪಂದ್ಯದಲ್ಲಿ, ಮಹೇಂದ್ರ ಸಿಂಗ್ ಧೋನಿ ಸಿಎಸ್ಕೆ ಪರ 26 ಎಸೆತಗಳಲ್ಲಿ 30 ರನ್ಗಳ ನಿಧಾನಗತಿಯ ಇನ್ನಿಂಗ್ಸ್ ಆಡಿದರು. ಇನ್ನಿಂಗ್ಸ್ನ 11 ನೇ ಓವರ್ನಲ್ಲಿ ಧೋನಿ ಸಿಎಸ್ಕೆ ಪರ ಬ್ಯಾಟಿಂಗ್ ಮಾಡಲು ಬಂದರು, ಆದರೆ ಇದರ ಹೊರತಾಗಿಯೂ, ಅವರು ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
ಈ ಪಂದ್ಯವು ಧೋನಿಗೆ ತುಂಬಾ ಮಹತ್ವದ್ದಾಗಿತ್ತು. ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವನ್ನು ವೀಕ್ಷಿಸಲು ಅವರ ಇಡೀ ಕುಟುಂಬ ಬಂದಿತ್ತು. ಧೋನಿ ಅವರ ಪತ್ನಿ ಸಾಕ್ಷಿ ಮತ್ತು ಮಗಳು ಜೀವಾ ಮತ್ತು ಅವರ ಪೋಷಕರು ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು. ಇಡೀ ಕುಟುಂಬದ ಉಪಸ್ಥಿತಿಯಿಂದಾಗಿ, ಥಾಲಾ ತನ್ನ ತವರು ನೆಲದಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡುತ್ತಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳು ಕೂಡ ತೀವ್ರಗೊಂಡವು. ಧೋನಿ ನಿವೃತ್ತಿ ಘೋಷಿಸಲಿದ್ದಾರೆ ಎಂದೇ ಹೇಳಲಾಗಿತ್ತು.
ಆದರೆ, ಈ ಎಲ್ಲ ಊಹಾಪೋಹಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ತೆರೆ ಎಳೆದಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಐಪಿಎಲ್ನಲ್ಲಿ ಇನ್ನೂ ಬಲಿಷ್ಠವಾಗಿ ಆಡುತ್ತಿದ್ದು, ಅವರ ವೃತ್ತಿಜೀವನವನ್ನು ಕೊನೆಗೊಳಿಸುವ ಪಾತ್ರವನ್ನು ಅವರಿಗೆ ನೀಡಲಾಗಿಲ್ಲ ಎಂದು ಹೇಳಿದ್ದಾರೆ. ದೆಹಲಿ ವಿರುದ್ಧದ ಸೋಲಿನ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫ್ಲೆಮಿಂಗ್, ‘‘ಇಲ್ಲ, ಅವರ ಪ್ರಯಾಣವನ್ನು ಕೊನೆಗೊಳಿಸುವುದು ನನ್ನ ಕೆಲಸವಲ್ಲ. ನಾನು ಅವನೊಂದಿಗೆ ಕೆಲಸ ಮಾಡುವುದನ್ನು ಆನಂದಿಸುತ್ತೇನೆ. ಧೋನಿ ಇನ್ನೂ ಬಲಶಾಲಿಯಾಗಿದ್ದಾರೆ. ನಾನು ಅವರಲ್ಲಿ ವಿದಾಯದ ಬಗ್ಗೆ ಕೇಳುವುದೇ ಇಲ್ಲ. ಇದರ ಬಗ್ಗೆ ಕೇಳುವವರು ನೀವುಗಳೇ’’ ಎಂದು ಹೇಳಿದ್ದಾರೆ.
IPL 2025: ತಂಡ ಬದಲಿಸುತ್ತಿದ್ದಂತೆ ಆಟವನ್ನು ಬದಲಿಸಿದ ರಾಹುಲ್; ಸಿಎಸ್ಕೆ ವಿರುದ್ಧ ಸ್ಫೋಟಕ ಅರ್ಧಶತಕ
ಸ್ಟೀಫನ್ ಫ್ಲೆಮಿಂಗ್ ಧೋನಿಯನ್ನು ಸಮರ್ಥಿಸಿಕೊಂಡು ಆ ಸಮಯದಲ್ಲಿ ಬ್ಯಾಟಿಂಗ್ ಮಾಡುವುದು ನಿಜವಾಗಿಯೂ ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ. ‘‘ಧೋನಿ ಆಡುವ ಉತ್ಸಾಹವನ್ನು ತೋರಿಸಿದ್ದಾರೆ. ಅವರು ಕ್ರೀಸ್ ತಲುಪಿದಾಗ ಚೆಂಡು ಸ್ವಲ್ಪ ನಿಂತು ಬರುತ್ತಿತ್ತು. ಆ ಸಂದರ್ಭ ಬ್ಯಾಟಿಂಗ್ ಮಾಡುವುದು ಕಷ್ಟ ಎಂದು ನಾನು ಭಾವಿಸುತ್ತೇನೆ. ಮೊದಲಾರ್ಧದಲ್ಲಿ ಆಟ ಚೆನ್ನಾಗಿರುತ್ತದೆ ಮತ್ತು ನಂತರ ಕ್ರಮೇಣ ನಿಧಾನವಾಗುತ್ತದೆ. ಅವರು ಪರಿಸ್ಥಿತಿಯನ್ನು ಪರಿಗಣಿಸಿ ನಿಜವಾಗಿಯೂ ಉತ್ತಮವಾಗಿ ಆಡಿದರು. ವಿಜಯ್ ಶಂಕರ್ ಕೂಡ ತಮ್ಮ ಇನ್ನಿಂಗ್ಸ್ನಲ್ಲಿ ಸರಿಯಾಗಿ ಆಡಲು ಹೆಣಗಾಡಿದರು. 12 ರಿಂದ 16 ಓವರ್ಗಳ ಆ ಅವಧಿ ಎಲ್ಲರಿಗೂ ಕಷ್ಟಕರವಾಗಿತ್ತು. ಆ ಸಂದರ್ಭದಲ್ಲಿ ಆಡುವುದು ಖಂಡಿತವಾಗಿಯೂ ಕಷ್ಟಕರವಾಗಿತ್ತು. ಅದಕ್ಕಾಗಿಯೇ ನಮ್ಮ ಪ್ರಯತ್ನಗಳ ಹೊರತಾಗಿಯೂ ಪಂದ್ಯವು ನಮ್ಮ ಕೈಯಿಂದ ಜಾರಿಹೋಹಿತು’’ ಎಂದು ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ