ಜೂನ್ 28… ಭಾರತೀಯ ಕ್ರಿಕೆಟ್ ಇತಿಹಾಸದ ‘ಅತ್ಯಂತ ಕೆಟ್ಟ ದಿನ’!
India vs Ireland: ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ನಲ್ಲಿ ಟೀಮ್ ಇಂಡಿಯಾ 34 ರನ್ಗಳಿಂದ ಸೋಲನುಭವಿಸಿತು. ಇನ್ನು ನಿರ್ಣಾಯಕವಾಗಿದ್ದ ದ್ವಿತೀಯ ಪಂದ್ಯವನ್ನು ಐರ್ಲೆಂಡ್ 1 ರನ್ನಿಂದ ಗೆಲ್ಲುವ ಮೂಲಕ 2-0 ಅಂತರದಿಂದ ಸರಣಿ ಜಯಿಸಿತು. ಭಾರತ ತಂಡದ ಈ ಹೀನಾಯ ಪ್ರದರ್ಶನವನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕಟುವಾಗಿ ಟೀಕಿಸಿದ್ದಾರೆ.

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಜೂನ್ 28 ಎಂದಿಗೂ ಮರೆಯಲಾಗದ ಕರಾಳ ದಿನವಾಗಿ ದಾಖಲಾಗಿದೆ. ಈ ದಿನವನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳು ‘ಅತ್ಯಂತ ಕೆಟ್ಟ ದಿನ’ವಾಗಿ ನೆನಪಿನಲ್ಲಿಟ್ಟುಕೊಳ್ಳಲಿದ್ದಾರೆ ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್. ಭಾರತೀಯ ದಿಗ್ಗಜ ಹೀಗೆ ಹೇಳಲು ಮುಖ್ಯ ಕಾರಣ ಐರ್ಲೆಂಡ್ ವಿರುದ್ಧದ ಹೀನಾಯ ಸೋಲು.
ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 2-0 ಅಂತರದಿಂದ ಸೋಲನುಭವಿಸಿತ್ತು. ಈ ಸೋಲಿನ ಬಗ್ಗೆ ಅಂಕಣ ಬರೆದಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಇದು ” ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಿನಗಳಲ್ಲಿ ಒಂದು” ಎಂದು ಬಣ್ಣಿಸಿದ್ದಾರೆ.
“ಕ್ರಿಕೆಟ್ ಪಂದ್ಯವನ್ನು ಸೋಲುವುದು ಒಂದು ಕಡೆ, ಆದರೆ ಯಾರ ವಿರುದ್ಧ ಸೋಲುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಐರ್ಲೆಂಡ್ ವಿರುದ್ಧ ಸರಣಿ ಸೋತಿರುವುದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಪ್ರದರ್ಶನ. ತಂಡದಲ್ಲಿದ್ದ ಅತಿಯಾದ ಆತ್ಮವಿಶ್ವಾಸ ಮತ್ತು ಬೇಜವಾಬ್ದಾರಿತನವೇ ಈ ದುಸ್ಥಿತಿಗೆ ಕಾರಣ.” ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಈ ಸೋಲನ್ನು ವಿಮರ್ಶಿಸಿರುವ ಸುನಿಲ್ ಗವಾಸ್ಕರ್, ಐರ್ಲೆಂಡ್ನಲ್ಲಿನ ಪಿಚ್ನ ಪರಿಸ್ಥಿತಿಗೆ ತಕ್ಕಂತೆ ಆಡದೆ ಕೇವಲ ತಮ್ಮ ‘ಹೆಸರು ಮತ್ತು ಕೀರ್ತಿ’ಗೆ ತಕ್ಕಂತೆ ಬ್ಯಾಟ್ ಬೀಸಲು ಹೋಗಿ ಬ್ಯಾಟರ್ಗಳು ತಪ್ಪು ಮಾಡಿದರು. 1983ರ ವಿಶ್ವಕಪ್ ಫೈನಲ್ನಲ್ಲಿ ಭಾರತವನ್ನು ಲಘುವಾಗಿ ಪರಿಗಣಿಸಿ ಸೋತ ವೆಸ್ಟ್ ಇಂಡೀಸ್ ತಂಡದ ಸ್ಥಿತಿಯನ್ನು ಗವಾಸ್ಕರ್ ಇಲ್ಲಿ ನೆನಪಿಸಿದ್ದಾರೆ.
ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನ!
ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ತಂಡದ ಆಯ್ಕೆಯ ಬಗ್ಗೆ ಸುನಿಲ್ ಗವಾಸ್ಕರ್ ಅಸಮಾಧಾನ ಹೊರಹಾಕಿದ್ದಾರೆ. ಅತ್ಯುತ್ತಮ ಫಾರ್ಮ್ನಲ್ಲಿರುವ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರಿಗೆ ಪಾದಾರ್ಪಣೆ ಮಾಡಲು ಅವಕಾಶ ನೀಡದಿರುವುದು ಅಚ್ಚರಿ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಇಂತಹದೊಂದು ನಿರ್ಧಾರವನ್ನು ಏಕೆ ಮಾಡಿದ್ದಾರೆ ಎಂಬುದು ತಿಳಿಯುತ್ತಿಲ್ಲ.
ಉತ್ತಮ ಫಾರ್ಮ್ನಲ್ಲಿರುವ ಆಟಗಾರರನ್ನು ಕೂರಿಸುವುದರಲ್ಲಿ ಅರ್ಥವಿಲ್ಲ. ಕಳೆದ ಒಂದು ತಿಂಗಳಿನಿಂದ ನಾನು ವೈಭವ್ ಸೂರ್ಯವಂಶಿ ಅವರನ್ನು ಆಡಿಸಬೇಕು ಎಂದು ಹೇಳುತ್ತಲೇ ಇದ್ದೆ. ಐರ್ಲೆಂಡ್ ವಿರುದ್ಧದ ಈ ಎರಡು ಪಂದ್ಯಗಳು ಯುವ ಆಟಗಾರರನ್ನು ಪರೀಕ್ಷಿಸಲು ಅತ್ಯಂತ ಸೂಕ್ತ ವೇದಿಕೆಯಾಗಿದ್ದವು.
ಇದನ್ನೂ ಓದಿ: Cape Verde: ಬಂದ್ರು… ನಡುಗಿಸಿದ್ರು… ಇತಿಹಾಸ ಬರೆದ್ರು… ಹೋದ್ರು..!
ಫಾರ್ಮ್ನಲ್ಲಿಲ್ಲದ ಬ್ಯಾಟರ್ಗಳನ್ನು ಬೆಂಚ್ನಲ್ಲಿರಿಸಿ, ಫಾರ್ಮ್ನಲ್ಲಿರುವ ಯುವ ಆಟಗಾರರಿಗೆ ಮ್ಯಾನೇಜ್ಮೆಂಟ್ ಮಣೆ ಹಾಕಬೇಕಿತ್ತು ಎಂದು ಸುನಿಲ್ ಗವಾಸ್ಕರ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
Published On - 4:56 pm, Sat, 4 July 26




