Rags to CEO: ಮಾದರಿ ನಾರಿ ರುಕ್ಮಿಣಿ; ಕೂಲಿ ಕೆಲಸ ಮಾಡುತ್ತಿದ್ದ ಈ ಮಹಿಳೆ ಇವತ್ತು ಸಿಇಒ
Inspiring story of Rukmini Devi: ರಾಜಸ್ಥಾನದ ಬಡ ಕುಟುಂಬದ ರುಕ್ಮಿಣಿ ದೇವಿ ಕಟಾರ ಅವರು ಕೂಲಿ ಕೆಲಸದಿಂದ ಸೌರಶಕ್ತಿ ಕಂಪನಿಯ ಸಿಇಒ ಆಗಿ ಏರಿದ ಯಶೋಗಾಥೆ ಇದು. ಸ್ವಸಹಾಯ ಸಂಘದ ಮೂಲಕ ಸ್ಥಾಪಿಸಿದ ದುರ್ಗಾ ಸೋಲಾರ್ ಕಂಪನಿಯಲ್ಲಿ 50 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ರುಕ್ಮಿಣಿಯ ಸಾಧನೆಯನ್ನು ಶ್ಲಾಘಿಸಿದ್ದಾರೆ. ಕಡಿಮೆ ಶಿಕ್ಷಣದ ಹೊರತಾಗಿಯೂ ಅವರ ಛಲ ಮತ್ತು ಪರಿಶ್ರಮ ಅವರಿಗೆ ಯಶಸ್ಸು ತಂದುಕೊಟ್ಟಿದೆ.

ಅವಕಾಶ ಎಲ್ಲರಿಗೂ ಸದಾ ತೆರೆದೇ ಇರುತ್ತದೆ. ಅವಕಾಶ ಬಳಸಿಕೊಂಡವರು ಮೇಲೇರುತ್ತಾರೆ. ಹೀಗೆ ಅವಕಾಶ ಬಳಸಿಕೊಳ್ಳಲು ಇಚ್ಛಾ ಶಕ್ತಿ ಬೇಕು. ಭಾರತದಲ್ಲಿ ಹೀಗೆ ತಳಮಟ್ಟದಿಂದ ಮೇಲೇರಿದ (Rags to riches story) ಬಹಳಷ್ಟು ಉದಾಹರಣೆಗಳಿವೆ. ಇಂಥವರಲ್ಲಿ ರಾಜಸ್ಥಾನದ ರುಕ್ಮಿಣಿ ದೇವಿ ಕಟಾರ (Rukmini Devi Katara) ಎನ್ನುವ ಮಹಿಳೆಯ ಕಥೆ ಗಮನಾರ್ಹ ಎನಿಸುತ್ತದೆ. ಎಸ್ಸೆಸ್ಸೆಲ್ಸಿಯೂ ಓದದ ರುಕ್ಮಿಣಿ ಒಂದು ಕಾಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರು. ಇವತ್ತು ಇವರು ಒಂದು ಕಂಪನಿಯ ಸಿಇಒ ಆಗಿದ್ದಾರೆ. ಈಕೆಯ ಕಂಪನಿಯೇನೂ ನೂರಾರು ಕೋಟಿ ರೂ ಮೌಲ್ಯದಲ್ಲವಾದರೂ ಒಬ್ಬ ಸಾಧಾರಣ ಮಹಿಳೆ ಹೇಗೆ ಎತ್ತರಕ್ಕೆ ಬೆಳೆಯಬಹುದು ಎನ್ನುವುದಕ್ಕೆ ರುಕ್ಮಿಣಿ ಒಂದು ಮಾಡಲ್ ಎನಿಸಿದ್ದಾರೆ.
ರಾಜಸ್ಥಾನದ ದುಂಗರಪುರ್ ಜಿಲ್ಲೆಯ ಮಡವಾ ಖಪರ್ದ ಎನ್ನುವ ಸಣ್ಣ ಹಳ್ಳಿಯ ರುಕ್ಮಿಣಿ ಕಟಾರಾ ಅವರು ದುರ್ಗಾ ಸೋಲಾರ್ ಕಂಪನಿ ಅಥವಾ ದುಂಗರಪುರ್ ರಿನಿವಬಲ್ ಎನರ್ಜಿ ಟೆಕ್ನಾಲಜಿ ಪ್ರೈ ಲಿ ಎನ್ನುವ ಕಂಪನಿಯ ಸಿಇಒ ಆಗಿದ್ದಾರೆ. ಸೋಲಾರ್ ಪ್ಲೇಟ್, ಬಲ್ಬ್ ಮತ್ತಿತರ ಸೌರ ಉಪಕರಣಗಳನ್ನು ತಯಾರಿಸುವ ಇವರ ಸಂಸ್ಥೆಯಲ್ಲಿ 50 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇವರ ಕಂಪನಿಯ ವಾರ್ಷಿಕ ವಹಿವಾಟು 3.5 ಕೋಟಿ ರೂಗೂ ಅಧಿಕ ಇದೆ.
ಇದನ್ನೂ ಓದಿ: ಚಾಣಕ್ಷ್ಯ ವಾರನ್ ಬಫೆಟ್; ಊರೆಲ್ಲಾ ತೋಪೆದ್ದರೂ ಕರಗಲಿಲ್ಲ ಇವರ ಶ್ರೀಮಂತಿಕೆ; ಇದು ಹೇಗೆ ಸಾಧ್ಯ?
ರುಕ್ಮಿಣಿ ಕಟಾರಾ ಸಿಇಒ ಆದ ಕಥೆ…
ಕೂಲಿ ಕಾರ್ಮಿಕರಾಗಿದ್ದ ರುಕ್ಮಿಣಿ ಅವರಿಗೆ ರಾಜೀವಿಕಾ (ರಾಜಸ್ಥಾನ್ ಗ್ರಾಮೀಣ ಆಜೀವಿಕ ವಿಕಾಸ್ ಪರಿಷದ್) ಎನ್ನುವ ಸಂಸ್ಥೆಯ ಸಂಪರ್ಕ ಸಿಕ್ಕಿತು. ಸ್ವಸಹಾಯ ಸಂಘಗಳ ಸ್ಥಾಪನೆಗೆ ಉತ್ತೇಜಿಸುವ ಈ ಸಂಘಟನೆ ಮೂಲಕ ರುಕ್ಮಿಣಿ ಅವರು ಒಂದು ಸ್ವಸಹಾಯ ಸಂಘ ಸೇರಿದರು. ಈ ಮಹಿಳಾ ಸ್ವಸಹಾಯ ಸಂಘದಿಂದಲೇ ಸ್ಥಾಪನೆಯಾಗಿದ್ದು ದುರ್ಗಾ ಸೋಲಾರ್ ಕಂಪನಿ. ರುಕ್ಮಿಣಿ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರೇ ಈ ಕಂಪನಿಯ ಸ್ಥಾಪಕರು. ಸೌರ ಉಪಕರಣಗಳ ತಯಾರಿಕೆಯ ಕಲೆಯನ್ನು ರುಕ್ಮಿಣಿ ಬೇಗ ಕಲಿತರು. ಕಂಪನಿಗೆ ಈಕೆ ಬಹಳ ಬೇಗ ಸಿಇಒ ಕೂಡ ಆದರು.
ನರೇಂದ್ರ ಮೋದಿಯಿಂದ ರುಕ್ಮಿಣಿಯ ಪ್ರಸ್ತಾಪ
ಪ್ರಧಾನಿ ನರೇಂದ್ರ ಮೋದಿ ತಮ್ಮ ಹೆಚ್ಚಿನ ಭಾಷಣಗಳಲ್ಲಿ ಯಾರಾದರೂ ಸಾಧಕರ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. 2016ರಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋದಿ ಅವರು ಭಾಷಣ ಮಾಡುವಾಗ ರುಕ್ಮಿಣಿ ದೇವಿ ಕಟಾರ ಅವರ ಹೆಸರನ್ನು ಪ್ರಸ್ತಾಪ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಕಾಲೇಜ್ ಕ್ಯಾಂಟೀನ್ನಲ್ಲಿ ಮುಸುರೆ ತಿಕ್ಕುತ್ತಿದ್ದ ಬೆಂಗಳೂರು ಹುಡುಗ ಸಂಜಿತ್ ಈಗ ಆಸ್ಟ್ರೇಲಿಯಾದಲ್ಲಿ ಫೇಮಸ್ ಚಾಯ್ವಾಲಾ
‘ಮಹಿಳೆಯರು ತಾವು ಹೆಚ್ಚಿಗೆ ಓದಿಲ್ಲ ಎಂದು ಸುಮ್ಮನೆ ಕೂರಬಾರದು. ಶಿಕ್ಷಣದ ಕೊರತೆಯು ಒಂದು ತಡೆಯಾಗಬಾರದು. ಕಡಿಮೆ ಶಿಕ್ಷಣ ಹೊಂದಿದ್ದಾಗ್ಯೂ ಬೆಳೆಯಲು ಅವಕಾಶ ಇರುತ್ತದೆ’ ಎಂದು ಪ್ರಧಾನಿಗಳು 2016ರಲ್ಲಿ ರುಕ್ಮಿಣಿಯ ಉದಾಹರಣೆ ನೀಡುತ್ತಾ ಹೇಳಿದ್ದರು.
ರಾಜಸ್ಥಾನದ ಬುಡಕಟ್ಟು ಸಮುದಾಯಕ್ಕೆ ಸೇರಿದ ರುಕ್ಮಿಣಿ ದೇವಿ ಕಟಾರ ಅವರು ತಮ್ಮ ಸಾಧನೆಯು ಇತರ ಮಹಿಳೆಯರಿಗೆ ದಾರಿದೀಪವಾಗಲಿ ಎಂದು ಶುಭ ಹಾರೈಸುತ್ತಾರೆ. ‘ನಾನು ಕೇವಲ 9ನೆ ತರಗತಿಯವರೆಗೆ ಮಾತ್ರ ಓದಿದ್ದೇನೆ. ಇವತ್ತು ಒಂದು ಕಂಪನಿಯ ಮುಖ್ಯಸ್ಥೆಯಾಗಿದ್ದೇನೆ. ಬೇರೆ ಮಹಿಳೆಯರಿಗೂ ಯಾಕೆ ಆಗದು?’ ಎಂದು ಅವರು ಹುರಿದುಂಬಿಸುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:44 am, Tue, 8 April 25