ಭೀಕರ ವಿಮಾನ ದುರಂತ; ಯಶ್, ರಾಧಿಕಾ ಪಂಡಿತ್, ರಮ್ಯಾ, ರಶ್ಮಿಕಾ ಮಂದಣ್ಣ ಸಂತಾಪ
ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಪತನವಾಗಿರುವುದು ತೀವ್ರ ನೋವಿನ ಸಂಗತಿ. ಈ ದುರಂತದಲ್ಲಿ ಎಲ್ಲ 242 ಪ್ರಯಾಣಿಕರು ಮೃತರಾಗಿದ್ದಾರೆ. ದುರ್ಘಟನೆ ಬಗ್ಗೆ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ಯಶ್, ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಮುಂತಾದ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

242 ಜನರು ಪ್ರಯಾಣ ಮಾಡುತ್ತಿದ್ದ ಏರ್ ಇಂಡಿಯಾ ವಿಮಾನ ಪತನ (Air India Plane Crash) ಆಗಿದೆ. ಈ ಸುದ್ದಿ ಕೇಳಿ ವಿಶ್ವಾದ್ಯಂತ ಜನರು ಸಂತಾಪ ಸೂಚಿಸುತ್ತಿದ್ದಾರೆ. ಅಹಮದಾಬಾದ್ನಲ್ಲಿ ನಡೆದ ಈ ಘಟನೆಯಿಂದ ಅನೇಕ ಸೆಲೆಬ್ರಿಟಿಗಳಿಗೂ ಶಾಕ್ ಆಗಿದೆ. ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಈಡಾಗಿದೆ. ಈ ಭೀಕರ ದುರಂತದ ಬಗ್ಗೆ ಯಶ್ (Yash), ರಮ್ಯಾ, ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ (Allu Arjun), ರಾಧಿಕಾ ಪಂಡಿತ್ ಸೇರಿದಂತೆ ಅನೇಕ ಸೆಲಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಕಂಬನಿ ಮಿಡಿದಿದ್ದಾರೆ.
‘ಅಹಮದಾಬಾದ್ ಏರ್ ಇಂಡಿಯಾ ಫ್ಲೈಟ್ ವಿಮಾನ ದುರಂತ ಭಯಾನಕವಾಗಿದೆ. ಪ್ರತಿ ಪ್ರಯಾಣಿಕರು, ಸಿಬ್ಬಂದಿ ಹಾಗೂ ಪ್ರಾಣ ಕಳೆದುಕೊಂಡ ಎಲ್ಲ ಮುಗ್ಧ ಜನರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ಇದು ದೊಡ್ಡ ದುರಂತ. ನೋವಿನಲ್ಲಿರುವ ಕುಟುಂಬದವರಿಗೆ ಯಾವ ಮಾತುಗಳಿಂದಲೂ ಸಮಾಧಾನ ಮಾಡಲು ಸಾಧ್ಯವಿಲ್ಲ. ನಿಮಗಾಗಿ ಪ್ರಾರ್ಥಿಸುತ್ತೇವೆ’ ಎಂದು ನಟ ಯಶ್ ಅವರು ಬರೆದುಕೊಂಡಿದ್ದಾರೆ.
‘ಪ್ರತಿ ಪ್ರಯಾಣಿಕರು, ಹಾಸ್ಟೆಲ್ನಲ್ಲಿ ಇದ್ದ ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸುವೆ. ಈ ದುರಂತದಿಂದ ಆಗಿರುವ ನಷ್ಟದ ಪ್ರಮಾಣ ತುಂಬ ಭೀಕರವಾಗಿದೆ’ ಎಂದು ರಾಧಿಕಾ ಪಂಡಿತ್ ಅವರು ಪೋಸ್ಟ್ ಮಾಡಿದ್ದಾರೆ. ‘ಅಹಮದಾಬಾದ್ ವಿಮಾನ ಪತನದ ಸುದ್ದಿ ಕೇಳಿ ಶಾಕ್ ಆಗಿದೆ. ಮೃತರ ಕುಟುಂಬಕ್ಕಾಗಿ ನನ್ನ ಪ್ರಾರ್ಥನೆಗಳು’ ಎಂದು ನಟಿ ರಮ್ಯಾ ದಿವ್ಯ ಸ್ಪಂದನಾ ಅವರು ಪೋಸ್ಟ್ ಮಾಡಿದ್ದಾರೆ.
‘ಈ ಘಟನೆ ನನ್ನನ್ನು ತೀವ್ರವಾಗಿ ಆಘಾತಗೊಳಿಸಿದೆ. ಪ್ರತಿ ದಿನ ವಿಮಾನದಲ್ಲಿ ಪ್ರಯಾಣಿಸುತ್ತೇನೆ. ಇಷ್ಟು ಹತ್ತಿರದಲ್ಲಿ ಇಂಥ ಘಟನೆ ನಡೆದಿದೆ. ಇದು ತುಂಬ ಭಯಾನಕವಾಗಿದೆ. ಎಲ್ಲ ಪ್ರಯಾಣಿಕರು ಮತ್ತು ಅವರ ಕುಟುಂಬದವರಿಗಾಗಿ ನನ್ನ ಮನ ಮಿಡಿಯುತ್ತಿದೆ’ ಎಂದ ನಟಿ ರಶ್ಮಿಕಾ ಮಂದಣ್ಣ ಅವರು ಬರೆದುಕೊಂಡಿದ್ದಾರೆ.
‘ಅಹ್ಮದಾಬಾದ್ ಏರ್ ಇಂಡಿಯಾ ವಿಮಾನ ಪತನದಿಂದ ಹೃದಯ ಛಿದ್ರವಾಗಿದೆ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದಿದ್ದಾರೆ ನಟ ಅಲ್ಲು ಅರ್ಜುನ್. ಅದೇ ರೀತಿಯ ಬಾಲಿವುಡ್ ಸೆಲೆಬ್ರಿಟಿಗಳಾದ ಅಕ್ಷಯ್ ಕುಮಾರ್, ಸನ್ನಿ ಡಿಯೋಲ್, ರಣದೀಪ್ ಹೂಡಾ, ಪರಿಣೀತಿ ಚೋಪ್ರಾ ಮುಂತಾದವರು ಸಹ ಈ ಘಟನೆಗೆ ಮರುಗಿದ್ದಾರೆ.
ಇದನ್ನೂ ಓದಿ: ಅಹಮದಾಬಾದ್ ವಿಮಾನ ಪತನ: ಕರ್ನಾಟಕ ಮೂಲದ ಕೋ ಪೈಲಟ್ ಸಾವು
ಅಹಮದಾಬಾದ್ನಿಂದ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲ ನಿಮಿಷಗಳಲ್ಲಿ ತಾಂತ್ರಿಕ ದೋಷದಿಂದ ನೆಲಕ್ಕೆ ಉರುಳಿತು. ಕೂಡಲೇ ಸ್ಫೋಟಗೊಂಡಿತು. ಆ ಸ್ಥಳದಲ್ಲಿ ಇದ್ದ ಕಟ್ಟಡಗಳು ಕೂಡ ಬೆಂಕಿಗೆ ಆಹುತಿ ಆದವು. 242ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, ಓರ್ವ ಕೆನಡಾ ಪ್ರಜೆ ಹಾಗೂ 7 ಪೋರ್ಚುಗೀಸ್ ಪ್ರಜೆಗಳು ಇದ್ದರು ಎಂಬ ಮಾಹಿತಿ ಇದೆ. ಎಲ್ಲರೂ ಮೃತರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.