ಸ್ಟಾರ್ ಆಗಿ ಬೆಳೆಯುತ್ತಿರೋ ಈ ಹೀರೋಗೆ ಚಾನ್ಸ್ ಕೊಟ್ಟ ಅಲ್ಲು-ಅಟ್ಲಿ
ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲಿ ಅವರ ಮುಂಬರುವ ಚಿತ್ರದ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ. ಈ ಚಿತ್ರದಲ್ಲಿ ತಮಿಳಿನ ಯುವ ಹೀರೋ ಎರಡನೇ ನಾಯಕನಾಗಿ ಅಭಿನಯಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಮೊದಲು ಈ ಕಥೆಯನ್ನು ಸಲ್ಮಾನ್ ಖಾನ್ ಗೆ ಹೇಳಲಾಗಿತ್ತು. ಆದರೆ ಅದು ಹೊಂದಿಕೆಯಾಗದ ಕಾರಣ ದಕ್ಷಿಣಕ್ಕೆ ತರಲಾಗಿದೆ.

ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಅಟ್ಲಿ ಒಟ್ಟಾಗಿ ಸಿನಿಮಾ ಮಾಡುತ್ತಿರುವ ವಿಚಾರ ಜೋರಾಗಿ ಚರ್ಚೆಯಲ್ಲಿ ಇದೆ. ಈ ಸಿನಿಮಾದ ಕಥೆ ಮೊದಲು ಸಲ್ಮಾನ್ ಖಾನ್ಗೆ (Salman Khan) ಹೇಳಲಾಗಿತ್ತು. ಆದರೆ, ಸರಿಯಾಗಿ ಹೊಂದಿಕೆ ಆಗದ ಕಾರಣ ಅದನ್ನು ಈಗ ದಕ್ಷಿಣಕ್ಕೆ ತೆಗೆದುಕೊಂಡು ಬಂದಿದ್ದಾರೆ ಅಟ್ಲಿ. ಹೀಗಿರುವಾಗಲೇ ಅಟ್ಲಿ ಅವರ ಕಡೆಯಿಂದ ಒಂದು ದೊಡ್ಡ ಸುದ್ದಿ ಹೊರ ಬಿದ್ದಿದೆ. ಸ್ಟಾರ್ ಆಗಿ ಬೆಳೆಯುತ್ತಿರುವ ಹೀರೋಗೆ ಚಾನ್ಸ್ ನೀಡಲು ಅಲ್ಲು ಅರ್ಜುನ್ ಹಾಗೂ ಅಟ್ಲಿ ಮುಂದಾಗಿದ್ದಾರೆ ಎಂದು ವರದಿ ಆಗಿದೆ.
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರದ ಮೂಲಕ ದೊಡ್ಡ ಹೀರೋ ಆಗಿ ಬೆಳೆದಿದ್ದಾರೆ. ಹೀಗಾಗಿ ಅವರ ಮುಂದಿನ ಸಿನಿಮಾಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈಗ ಅವರ ನಟನೆಯ ಚಿತ್ರದಲ್ಲಿ ಶಿವಕಾರ್ತಿಕೇಯ ಅವರು ಸೆಕೆಂಡ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಅವರ ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ.
ಶಿವಕಾರ್ತಿಕೇಯ ಅವರು ‘ಅಮರನ್’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಅವರ ಖ್ಯಾತಿ ಹೆಚ್ಚಾಗಿದೆ. ಸದ್ಯ ಅವರು ಸುಧಾ ಕೊಂಗರ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಶೂಟ್ನ ಮೇ ಒಳಗೆ ಪೂರ್ಣಗೊಳಿಸೋ ಆಲೋನಚೆಯಲ್ಲಿ ಅವರಿದ್ದಾರೆ. ಆ ಬಳಿಕ ಶಿವಕಾರ್ತಿಕೇಯ ಮುಂದಿನ ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದಾರೆ.
ಇದನ್ನೂ ಓದಿ: ‘ಅಮರನ್’ ಚಿತ್ರಕ್ಕಾಗಿ ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ಪಡೆದ ಸಂಭಾವನೆ ಎಷ್ಟು?
ಸದ್ಯ ಚರ್ಚೆ ಆಗುತ್ತಿರುವ ವಿಚಾರ ಅಂತೆಕಂತೆ ಅಷ್ಟೇ. ಈ ಬಗ್ಗೆ ಅಟ್ಲಿ ಆಗಲೀ, ಅಲ್ಲು ಅರ್ಜುನ್ ಆಗಲಿ ಅಥವಾ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಸನ್ ಪಿಕ್ಚರ್ಸ್ ಆಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ಚಿತ್ರಕ್ಕೆ ಸಾಯಿ ಅಭಯಂಕರ್ ಅಥವಾ ಅನಿರುದ್ಧ್ ಅವರು ಸಂಗೀತ ಸಂಯೋಜನೆ ಮಾಡೋ ಸಾಧ್ಯತೆ ಇದೆ. ಸಿನಿಮಾದ ಕೆಲಸ ಯಾವಾಗ ಆರಂಭ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.