ತೆರಿಗೆ ವಿನಾಯಿತಿ, ಉಚಿತ ಟಿಕೆಟ್: ಆದರೂ ಏಳುತ್ತಿಲ್ಲ ಕಂಗನಾ ಸಿನಿಮಾ
Kangana Ranaut movie: ನಟಿ ಮತ್ತು ಸಂಸದೆ ಆಗಿರುವ ಕಂಗನಾ ರನೌತ್ ಅವರು ಶುಶ್ರೂಕಿಯ ಪಾತ್ರದಲ್ಲಿ ನಟಿಸಿರುವ ‘ಭಾರತ್ ಭಾಗ್ಯ ವಿಧಾತ’ ಸಿನಿಮಾ 2008 ರಲ್ಲಿ ನಡೆದ ಮುಂಬೈ ದಾಳಿಯ ವೇಳೆ ಮುಂಬೈನ ಕಾಮಾ ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಕಿಯರು ತೋರಿದ ಅಭೂತಪೂರ್ವ ಧೈರ್ಯ, ತ್ಯಾಗ ಮತ್ತು ಸೇವೆಯ ಕತೆಯನ್ನು ಒಳಗೊಂಡಿದೆ. ಸಿನಿಮಾದ ಕಥಾವಸ್ತು ಚೆನ್ನಾಗಿದೆಯಾದರೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬಲು ನೀರಸ ಪ್ರದರ್ಶನ ತೋರುತ್ತಿದೆ.

ಕಂಗನಾ ರನೌತ್ (Kangana Ranaut) ನಟನೆಯ ‘ಭಾರತ ಭಾಗ್ಯ ವಿಧಾತ’ ಹೆಸರಿನ ಸಿನಿಮಾ ಎರಡು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ನಟಿ ಮತ್ತು ಸಂಸದೆ ಆಗಿರುವ ಕಂಗನಾ ರನೌತ್ ಅವರು ಶುಶ್ರೂಕಿಯ ಪಾತ್ರದಲ್ಲಿ ನಟಿಸಿದ್ದಾರೆ. 2008 ರಲ್ಲಿ ನಡೆದ ಮುಂಬೈ ದಾಳಿಯ ವೇಳೆ ಮುಂಬೈನ ಕಾಮಾ ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಕಿಯರು ತೋರಿದ ಅಭೂತಪೂರ್ವ ಧೈರ್ಯ, ತ್ಯಾಗ ಮತ್ತು ಸೇವೆಯ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದ ಕಥಾವಸ್ತು ಚೆನ್ನಾಗಿದೆಯಾದರೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬಲು ನೀರಸ ಪ್ರದರ್ಶನ ತೋರುತ್ತಿದೆ.
ಕಂಗನಾ ನಟನೆಯ ಈ ಸಿನಿಮಾಕ್ಕೆ ಹರಿಯಾಣದಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಶನಿವಾರ ಸಿನಿಮಾದ ವಿಶೇಷ ಸ್ಕ್ರೀನಿಂಗ್ಗೆ ಹಾಜರಾಗಿ ಸಿನಿಮಾ ನೋಡಿದ ಹರಿಯಾಣ ಸಿಎಂ ನಯಾಬ್ ಸಿಂಗ್ ಅವರು, ಈ ಸಿನಿಮಾವು ಇದು ಧೈರ್ಯ, ಕರುಣೆ, ಕರ್ತವ್ಯ ಮತ್ತು ಮಾನವೀಯತೆಯ ಶಕ್ತಿಯುತ ಕಥೆಯನ್ನು ಸಾರುತ್ತದೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಪೂರ್ತಿ ನೀಡುತ್ತದೆ ಎಂದು ಬಣ್ಣಿಸಿದರು. ಚಿತ್ರದ ವಿಶೇಷ ಪ್ರದರ್ಶನದ ವೇಳೆ ಮುಖ್ಯಮಂತ್ರಿಯವರ ಪತ್ನಿ ಸುಮನ್ ಸೈನಿ, ಅವರ ಸಂಪುಟದ ಕೆಲವು ಸಚಿವರು ಮತ್ತು ನಟಿ ಕಂಗನಾ ರನೌತ್ ಉಪಸ್ಥಿತರಿದ್ದರು.
ಇದೇ ಸಿನಿಮಾಕ್ಕೆ ಇಡೀ ದೇಶದಾದ್ಯಂತ ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಟಿಕೆಟ್ ಉಚಿತ ಎಂಬ ಘೋಷಣೆಯನ್ನೂ ಸಹ ಚಿತ್ರತಂಡ ಘೋಷಿಸಿದೆ. ಬುಕ್ಮೈ ಶೋ ಮೂಲಕ ಟಿಕೆಟ್ ಬುಕ್ ಮಾಡುವವರು ‘BHARAT’ ಎಂಬ ಕೋಡ್ ಬಳಸಿ ಟಿಕೆಟ್ ಬುಕ್ ಮಾಡಿದಲ್ಲಿ ಒಂದು ಟಿಕೆಟ್ ಬೆಲೆಗೆ ಎರಡು ಟಿಕೆಟ್ ಬುಕ್ ಮಾಡಬಹುದಾಗಿದೆ. ದೇಶದಾದ್ಯಂತ ಎಲ್ಲ ನಗರಗಳಲ್ಲಿಯೂ ಈ ಆಫರ್ ಚಾಲ್ತಿಯಲ್ಲಿದೆ.
ಇದನ್ನೂ ಓದಿ:ಅಪರೂಪಕ್ಕೆ ದೀಪಿಕಾ ಪಡುಕೋಣೆಯನ್ನು ಕೊಂಡಾಡಿದ ಕಂಗನಾ ರನೌತ್
ಇಷ್ಟೆಲ್ಲ ಆದರೂ ಸಹ ‘ಭಾರತ್ ಭಾಗ್ಯ ವಿಧಾತ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನೀರಸ ಕಲೆಕ್ಷನ್ ಮಾಡಿದೆ. ಮೊದಲ ದಿನ ಒಂದು ಕೋಟಿ ಗಳಿಸಿದ್ದ ಈ ಸಿನಿಮಾ ವೀಕೆಂಡ್ನಲ್ಲಿ ಅಷ್ಟೇನೂ ಉತ್ತಮ ಮೊತ್ತ ಗಳಿಸಿಲ್ಲ ಆದರೆ ಮೊದಲ ದಿನಕ್ಕೆ ಹೋಲಿಸಿದರೆ ನಿನ್ನೆ (ಶನಿವಾರ) ಗಳಿಕೆಯಲ್ಲಿ ಸಣ್ಣ ಏರಿಕೆ ಕಂಡು ಬಂದಿದೆ. ಎರಡನೇ ದಿನ ಅಂದರೆ ಶನಿವಾರದಂದು ಸಿನಿಮಾ 1.45 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈಗ ತೆರಿಗೆ ವಿನಾಯಿತಿ, ಒಂದು ಟಿಕೆಟ್ಗೆ ಇನ್ನೊಂದು ಫ್ರೀ ಆಫರ್ಗಳ ಬಳಿಕ ಭಾನುವಾರದ ಗಳಿಕೆ ಇನ್ನಷ್ಟು ಉತ್ತಮಗೊಳ್ಳುವ ನಿರೀಕ್ಷೆ ಚಿತ್ರತಂಡದ್ದು.
ಈ ಸಿನಿಮಾ ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ಕತೆಯನ್ನು ಒಳಗೊಂಡಿದೆ. ಭಯೋತ್ಪಾದಕರು ಆಸ್ಪತ್ರೆಯ ಒಳಗೆ ನುಗ್ಗಿದಾಗ, ನರ್ಸ್ಗಳು, ವಾರ್ಡ್ ಬಾಯ್ಗಳು, ಸ್ವಚ್ಛತಾ ಸಿಬ್ಬಂದಿ, ಲಿಫ್ಟ್ ಆಪರೇಟರ್ಗಳು ಮತ್ತು ಭದ್ರತಾ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಹೇಗೆ ದೃಢವಾಗಿ ನಿರ್ವಹಿಸಿದರು ಹಾಗೂ ನೂರಾರು ಜೀವಗಳನ್ನು ಹೇಗೆ ಕಾಪಾಡಿದರು ಎಂಬುದನ್ನು ಸಿನಿಮಾನಲ್ಲಿ ತೋರಿಸಲಾಗಿದೆ. ಕಂಗನಾ ರನೌತ್, ಗಿರಿಜಾ ಓಕ್, ಸ್ಮಿತಾ ತಾಂಬೆ ಇನ್ನೂ ಹಲವರು ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶಿಸಿರುವುದು ಮನೋಜ್ ತಪಾಡಿಯಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




