ಬಸ್ ಡ್ರೈವರ್ ಆದ ಶೈನ್ ಶೆಟ್ಟಿ; ಗಮನಸೆಳೆದ ‘ಶಂಕರಾಭರಣ’ ಸಿನಿಮಾ ಟೀಸರ್
ನಟ ಶೈನ್ ಶೆಟ್ಟಿ ಅಭಿನಯದ 'ಶಂಕರಾಭರಣ' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಸುಮಂತ್ ಭಟ್ ನಿರ್ದೇಶನದ ಈ ಹಾರರ್ ಕಾಮಿಡಿ ಚಿತ್ರದಲ್ಲಿ ಶೈನ್ ಶೆಟ್ಟಿ ಬಸ್ ಚಾಲಕನಾಗಿ ನಟಿಸುವುದರ ಜೊತೆಗೆ ಕಥೆ ಬರೆದು, ರಂಗಸ್ಥಳ ಸ್ಟುಡಿಯೋ ಮೂಲಕ ನಿರ್ಮಾಣವನ್ನೂ ಮಾಡಿದ್ದು, ಸಿನಿಮಾ ನವೆಂಬರ್ 20ಕ್ಕೆ ತೆರೆಕಾಣಲಿದೆ.

ಮುಖ್ಯಾಂಶಗಳು
- 'ಶಂಕರಾಭರಣ' ಬಸ್ ಏರಿದ ಶೈನ್ ಶೆಟ್ಟಿ
- ಧಮಾಕಾ ಎಂಟ್ರಿಗೆ ದಿನಾಂಕ ಫಿಕ್ಸ್
- ರಂಗಸ್ಥಳ ಸ್ಟುಡಿಯೋ ಮೂಲಕ ಶೈನ್ ಹೊಸ ಹೆಜ್ಜೆ
ಬಿಗ್ ಬಾಸ್ ಕನ್ನಡ ವಿಜೇತ, ನಟ ಶೈನ್ ಶೆಟ್ಟಿ ನಟನೆಯ ‘ಶಂಕರಾಭರಣ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಪೋಸ್ಟರ್ಗಳ ಮೂಲಕವೇ ಗಮನ ಸೆಳೆದಿದೆ. ಇದೀಗ ಟೀಸರ್ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದು, ನವೆಂಬರ್ 20ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ.
ಈ ಸಿನಿಮಾದಲ್ಲಿ ಶೈನ್ ಶೆಟ್ಟಿ ‘ಶಂಕರಾಭರಣ’ ಎಂಬ ಬಸ್ನ ಚಾಲಕನಾಗಿ, ಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ಪ್ರೇಕ್ಷಕರ ಎದುರು ಬರಲಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲದೆ, ಈ ಚಿತ್ರಕ್ಕೆ ಶೈನ್ ಅವರೇ ಕಥೆ ಬರೆದಿರುವುದು ವಿಶೇಷ. ತಮ್ಮ ಸುತ್ತಮುತ್ತ ಕಂಡ ನೈಜ ಅನುಭವಗಳನ್ನು ಆಧರಿಸಿ ಅವರು ಈ ಕಥೆಯನ್ನು ಹೆಣೆದಿದ್ದಾರೆ. ‘ಏಕಂ’ ವೆಬ್ ಸೀರೀಸ್ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ‘ಮಿಥ್ಯ’ ಚಿತ್ರವನ್ನು ನಿರ್ದೇಶಿಸಿದ್ದ ಸುಮಂತ್ ಭಟ್ ಈ ಕಮರ್ಷಿಯಲ್ ಹಾರರ್ ಕಾಮಿಡಿ ಕಥೆಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಬಸ್ ಪ್ರಮುಖ ಪಾತ್ರ ವಹಿಸಲಿದೆ.
ನಟನೆಯ ಜೊತೆಗೆ ಶೈನ್ ಶೆಟ್ಟಿ ಇದೇ ಮೊದಲ ಬಾರಿಗೆ ನಿರ್ಮಾಣಕ್ಕೂ ಕೈಹಾಕಿದ್ದಾರೆ. ‘ರಂಗಸ್ಥಳ ಸ್ಟುಡಿಯೋ’ ಬ್ಯಾನರ್ ಅಡಿಯಲ್ಲಿ ದಿವಾಕರ್ ಶೆಟ್ಟಿ ಅವರೊಂದಿಗೆ ಸೇರಿ ಶೈನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ‘ಪರಂವ್ಹ ಸ್ಟುಡಿಯೋಸ್’, ‘ಲಾಫಿಂಗ್ ಬುದ್ಧ’ ಹಾಗೂ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಸಾಲಿಗೆ ಕರಾವಳಿ ಭಾಗದಿಂದ ಇದೀಗ ರಂಗಸ್ಥಳ ಸ್ಟುಡಿಯೋ ಕೂಡ ಹೊಸ ಭರವಸೆಯಾಗಿ ಸೇರ್ಪಡೆಯಾಗಿದೆ.
ಇದನ್ನೂ ಓದಿ: ‘ಶಂಕರಾಭರಣ’ ಶೂಟಿಂಗ್ ಮುಗಿಸಿದ ಶೈನ್ ಶೆಟ್ಟಿ; ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ಮಲಯಾಳಂ ಚಿತ್ರರಂಗದಲ್ಲಿ 17ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ತನ್ವಿ ರಾವ್ ಈ ಚಿತ್ರದ ನಾಯಕಿಯಾಗಿ ಶೈನ್ ಶೆಟ್ಟಿಗೆ ಜೋಡಿಯಾಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಪತ್ನಿ ಕೃತಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:53 am, Sat, 5 September 26




