ತೆಲುಗು ಚಿತ್ರರಂಗಕ್ಕೆ ಸಂಕಷ್ಟ, ಶೀಘ್ರ ನಿರ್ಧಾರ ಪ್ರಕಟಿಸುವಂತೆ ನಿರ್ಮಾಪಕರಿಗೆ ಒತ್ತಾಯ
Telugu Film Chamber: ತೆಲುಗು ಸಿನಿಮಾ ರಂಗ ಇಕ್ಕಟ್ಟಿಗೆ ಸಿಲುಕಿದೆ. ಪವನ್ ಕಲ್ಯಾಣ್, ವಿಜಯ್ ದೇವರಕೊಂಡ, ಚಿರಂಜೀವಿ, ಧನುಶ್ ಇನ್ನೂ ಕೆಲವು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿರುವ ಸಮಯದಲ್ಲಿಯೇ ಆಂಧ್ರ, ತೆಲಂಗಾಣದ ಎಲ್ಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಂದ್ ಆಗುತ್ತಿವೆ. ಚಿತ್ರಮಂದಿರಗಳು ಬಂದ್ ಆಗುತ್ತಿರುವುದು ಏಕೆ? ಮುಂದಿನ ದಾರಿಯೇನು? ಇತ್ಯಾದಿ ಮಾಹಿತಿ ಇಲ್ಲಿದೆ..

ತೆಲುಗು ಚಿತ್ರರಂಗದಕ್ಕೆ (Tollywood) ಬಿಕ್ಕಟ್ಟು ಎದುರಾಗಿದೆ. ಜೂನ್ 1 ರಿಂದ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 1500 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಂದ್ ಆಗಲಿವೆ. ಪವನ್ ಕಲ್ಯಾಣ್ರ ‘ಹರಿ ಹರ ವೀರ ಮಲ್ಲು’, ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸೇರಿದಂತೆ ಇನ್ನೂ ಹಲವಾರು ಸಿನಿಮಾಗಳು ಜೂನ್ ತಿಂಗಳ ಮೊದಲ ವಾರದಲ್ಲಿ ಬಿಡುಗಡೆ ಆಗಲಿದ್ದು, ಈ ಸಿನಿಮಾಗಳಿಗೆ ತೀವ್ರ ಸಂಕಷ್ಟ ಎದುರಾಗಲಿದೆ. ಇದೇ ಕಾರಣಕ್ಕೆ ಇದೀಗ ಚಿತ್ರಮಂದಿರ ಮಾಲೀಕರ ಬೇಡಿಕೆಗಳ ಬಗ್ಗೆ ನಿರ್ಧಾರ ಪ್ರಕಟಿಸುವಂತೆ ಸಿನಿಮಾ ನಿರ್ಮಾಪಕರ ಮೇಲೆ ಒತ್ತಡ ಹೆಚ್ಚು ಮಾಡಲಾಗಿದೆ.
ಆಂಧ್ರ ಮತ್ತು ತೆಲಂಗಾಣಗಳಲ್ಲಿ ವರ್ಷಗಳಿಂದಲೂ ಸಹ ಚಿತ್ರಮಂದಿರಗಳು ಬಾಡಿಗೆ ಆಧಾರದಲ್ಲಿ ಕೆಲಸ ಮಾಡುತ್ತಿವೆ. ನಿರ್ಮಾಪಕರು, ಚಿತ್ರಮಂದಿರಗಳಿಗೆ ನಿಗದಿತ ಬಾಡಿಗೆ ಮೊತ್ತ ನೀಡಿ ತಮ್ಮ ಸಿನಿಮಾಗಳನ್ನು ಪ್ರದರ್ಶಿಸುತ್ತಾರೆ. ಸಿನಿಮಾ ಪ್ರದರ್ಶನದಿಂದ ಬಂದ ಲಾಭವನ್ನು ಪೂರ್ಣವಾಗಿ ನಿರ್ಮಾಪಕ ಅಥವಾ ವಿತರಕ ಹಾಗೂ ನಿರ್ಮಾಪಕ ಇರಿಸಿಕೊಳ್ಳುತ್ತಾರೆ. ಆದರೆ ಪಿವಿಆರ್-ಐನಾಕ್ಸ್ ಇನ್ನಿತರೆ ಮಲ್ಟಿಪ್ಲೆಕ್ಸ್ಗಳು ಲಾಭ ಹಂಚಿಕೆ ಆಧಾರದಲ್ಲಿ ಸಿನಿಮಾ ಪ್ರದರ್ಶನ ಮಾಡುತ್ತವೆ.
ಇದೀಗ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಚಿತ್ರಮಂದಿರಗಳ ಮಾಲೀಕರು ತಮಗೂ ಸಹ ಸಿನಿಮಾದ ಒಟ್ಟು ಕಲೆಕ್ಷನ್ನಲ್ಲಿ ಭಾಗ ಬೇಕು ಎಂದು ಬೇಡಿಕೆ ಇರಿಸಿದ್ದಾರೆ. ಇನ್ನು ಮುಂದೆ ನಾವು ಬಾಡಿಗೆ ಆಧಾರದಲ್ಲಿ ಸಿನಿಮಾ ಪ್ರದರ್ಶಿಸುವುದಿಲ್ಲ ಪರ್ಸೆಂಟೇಜ್ ಲೆಕ್ಕದಲ್ಲಿ ಸಿನಿಮಾ ಪ್ರದರ್ಶಿಸುತ್ತೇವೆ ಎಂದಿದ್ದಾರೆ. ಆದರೆ ಇದಕ್ಕೆ ತೆಲುಗು ಸಿನಿಮಾ ನಿರ್ಮಾಪಕರು ಒಪ್ಪಿಲ್ಲ. ಮೇ 18 ರಂದು ಈ ಬಗ್ಗೆ ಸಭೆ ನಡೆದಿದ್ದು, ಸಭೆ ವಿಫಲವಾಗಿದೆ. ಸಿನಿಮಾ ಪ್ರದರ್ಶಕರು ಪ್ರತಿಭಟನೆ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಹೀರೋ ಜೊತೆ ತೆಲುಗು ಸಿನಿಮಾ ಘೋಷಿಸಿದ ಸಪ್ತಮಿ ಗೌಡ
ಇದೀಗ ತೆಲುಗು ಸಿನಿಮಾ ಚೇಂಬರ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಶೀಘ್ರವಾಗಿ ಈ ವಿಷಯ ಕುರಿತಂತೆ ಸಿನಿಮಾ ನಿರ್ಮಾಪಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕು ಎಂದಿದೆ. ಚಿತ್ರಮಂದಿರಗಳು ಬಂದ್ ಆದರೆ ಸಿನಿಮಾಗಳಿಗೆ ಸಮಸ್ಯೆ ಆಗಲಿದೆ. ಈಗಾಗಲೇ ಸಾಲು-ಸಾಲು ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಒಂದೊಮ್ಮೆ ಚಿತ್ರಮಂದಿರಗಳು ಬಂದ್ ಆದರೆ ಸಮಸ್ಯೆ ಆಗಲಿದೆ ಎಂದು ಚೇಂಬರ್ ಹೇಳಿದೆ. ಈ ಬಗ್ಗೆ ನಿರ್ಮಾಪಕರ ಸಂಘದೊಂದಿಗೆ ಹಾಗೂ ಪ್ರದರ್ಶಕರ ಸಂಘದೊಂದಿಗೆ ಪ್ರತ್ಯೇಕ ಸಭೆ ನಡೆಸುವುದಾಗಿಯೂ ಚೇಂಬರ್ ಹೇಳಿದೆ.
ಈ ಸಮಸ್ಯೆ ನೆರೆಯ ಕೇರಳದಲ್ಲೂ ಇದೆ. ಕೇರಳ ಸಿನಿಮಾ ಪ್ರದರ್ಶಕರು ಸಹ ಅವರ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೂನ್ 1 ರಿಂದ ಅನಿರ್ದಿಷ್ಟ ಅವಧಿಯ ವರೆಗೆ ಸಿನಿಮಾ ಪ್ರದರ್ಶನವನ್ನು ಬಂದ್ ಮಾಡಲಿದ್ದಾರೆ. ಸಿನಿಮಾ ನಿರ್ಮಾಪಕರು ಹಾಗೂ ಸರ್ಕಾರದ ಮುಂದೆ ಅವರು ಕೆಲ ಬೇಡಿಕೆಗಳನ್ನು ಇರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




