80 ಕಿ.ಮೀ ಪ್ರಯಾಣ ಬೆಳೆಸಿ ಮಾಡಿದ ಕೃಷಿಯಿಂದ ಲಕ್ಷಗಟ್ಟಲೆ ಆದಾಯಗಳಿಸಿದ ನಿವೃತ್ತ ಅಧಿಕಾರಿ
ಎರಡುವರೆ ಎಕರೆಯಲ್ಲಿ ಬಾಬುರಾವ್ ಆಪೂಸ್, ಕೇಸರ್ ಹಾಗೂ ಮಲ್ಲಿಕಾ ಜಾತಿಗೆ ಸೇರಿದ ಮೂರು ಬಗೆಯ ಮಾವು ಬೆಳೆ ಬೆಳೆದಿದ್ದಾರೆ. ಇದರಲ್ಲಿ ವಿಶೇಷ ಎಂದರೆ ಬಾಬುರಾವ್ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸದೆ ಸಾವಯವ ಕೃಷಿ ಪದ್ಧತಿಯಲ್ಲಿ ಮಾವು ಬೆಳೆದಿದ್ದಾರೆ.

ಬಾಗಲಕೋಟೆ: ಸಾಮಾನ್ಯವಾಗಿ ನೌಕರಿಯಿಂದ ನಿವೃತ್ತಿ ಹೊಂದಿದರೆ ಸಾಕು ಅನೇಕ ಜನರು ಕೆಲಸದ ಜಂಜಾಟ ಮುಗಿಯಿತು. ಇನ್ನುಳಿದ ದಿನಗಳನ್ನು ನೆಮ್ಮದಿಯಿಂದ ಕುಟುಂಬ, ಮಕ್ಕಳು, ಮೊಮ್ಮಕ್ಕಳ ಜೊತೆ ಹಾಯಾಗಿ ಕಳೆಯೋಣ ಎಂದು ಭಾವಿಸುತ್ತಾರೆ. ಆದರೆ ಬಾಗಲಕೋಟೆಯ ಸರ್ಕಾರಿ ನಿವೃತ್ತ ಕ್ಲಾಸ್ ಒನ್ ಅಧಿಕಾರಿ ನಿವೃತ್ತಿ ಜೀವನವನ್ನು ಕೃಷಿಗಾಗಿ ಮುಡುಪಾಗಿಟ್ಟಿದ್ದಾರೆ. ರೈತ ಕುಟುಂಬದಲ್ಲಿ ಜನಿಸಿದ ಇವರಿಗೆ ಸದಾ ಕೃಷಿ ಕಡೆಗೆ ಧ್ಯಾನವಿತ್ತು. ಯಾವಾಗ ನಿವೃತ್ತಿ ಆಯಿತೋ ಅಂದಿನಿಂದ ಕೃಷಿ ಕ್ರಾಂತಿಯಲ್ಲಿ ತೊಡಗಿದ್ದು, ಇದರಿಂದ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ಡಿಡಿ ಆಗಿದ್ದ ಬಾಬುರಾವ್ ಕುಲಕರ್ಣಿ, ಕೋಡಿಹಾಳ ಗ್ರಾಮದವರಾಗಿದ್ದು, ತಮ್ಮ ಅಧಿಕಾರದ ಸಮಯದಲ್ಲಿ ಸುಮಾರು 12 ಜಿಲ್ಲೆಗಳನ್ನು ಸುತ್ತಿ ಕೆಲಸ ನಿರ್ವಹಿಸಿದ್ದಾರೆ. ಆದರೆ ಕೊನೆಯದಾಗಿ ಬಾಗಲಕೋಟೆಯಲ್ಲಿರುವಾಗ ನಿವೃತ್ತರಾಗಿದ್ದಾರೆ. ಸದ್ಯ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಕೋಡಿಹಾಳ ಗ್ರಾಮದ ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದು, ಬಾಗಕೋಟೆಯಿಂದ ಸುಮಾರು 80 ಕಿ.ಮೀ ದೂರ ಇರುವ ಕೋಡಿಹಾಳ ಗ್ರಾಮದ ವ್ಯಾಪ್ತಿಗೆ ಬಂದು ಕೃಷಿ ಮಾಡುತ್ತಿದ್ದಾರೆ ಎನ್ನುವುದು ವಿಶೇಷ.
12 ಎಕರೆ ಜಮೀನಿನಲ್ಲಿ ದಾಳಿಂಬೆ, ಎರಡುವರೆ ಎಕರೆ ಜಮೀನಿನಲ್ಲಿ ಮಾವು, ಸೇರಿದಂತೆ ಅಲ್ಲಲ್ಲಿ ತೆಂಗು, ಬಾಳೆ, ನುಗ್ಗೆ ಬೆಳೆದು ಸೈ ಎನಿಸಿಕೊಂಡಿದ್ದಾರೆ. ದಾಳಿಂಬೆ,ಮಾವು ಸೇರಿದಂತೆ ವಿವಿಧ ಫಸಲಿನ ಮೂಲಕ ವರ್ಷಕ್ಕೆ ಖರ್ಚು ವೆಚ್ಚ ತೆಗೆದು 30 ಲಕ್ಷ ಆದಾಯ ಪಡೆಯುತ್ತಿದ್ದಾರೆ. ನಿವೃತ್ತಿಯಲ್ಲೂ ಲಕ್ಷ ಲಕ್ಷ ಲಾಭ ಪಡೆದು ಕೃಷಿಯಲ್ಲೇ ನಿವೃತ್ತಿಯ ಸಂತೃಪ್ತಿ ಕಾಣುತ್ತಿದ್ದಾರೆ ಬಾಬುರಾವ್ ಕುಲಕರ್ಣಿ.
ಜಮೀನು ಫಲವತ್ತತೆಯಿಂದ ಕೂಡಿದ ಜಮೀನಾಗಿರಲಿಲ್ಲ. ಈ ಜಮೀನು ಈ ಹಿಂದೆ ಸಂಪೂರ್ಣ ಕಲ್ಲು ಬಂಡೆಗಳಿಂದ ಕೂಡಿತ್ತು. ಜೊತೆಗೆ ಇಲ್ಲಿನ ಮಣ್ಣು ಬೆಳೆಗೆ ಅಷ್ಟೊಂದು ಸೂಕ್ತವೂ ಆಗಿರಲಿಲ್ಲ. ಆದರೂ ಕಲ್ಲು ಬಂಡೆ ಕರಗಿಸಿ ಬೆಳೆಗೆ ಅನುಕೂಲಕರ ರೀತಿಯಲ್ಲಿ ಫಲವತ್ತತೆಯ ಭೂಮಿಯನ್ನಾಗಿ ಪರಿವರ್ತಿಸಲಾಗಿದೆ. ಚಿಕ್ಕವಯಸ್ಸಿನಿಂದಲು ಕೃಷಿ ಬಗ್ಗೆ ಹೆಚ್ಚಿನ ಕಾಳಜಿ ಇತ್ತು ಆ ಕಾರಣ ವ್ಯವಸಾಯ ಮಾಡಲು ಮುಂದಾಗಿದ್ದೇನೆ ಮತ್ತು ಇದರಿಂದ ಉತ್ತಮ ಆದಾಯ ಕೂಡ ಬಂದಿದೆ ಎಂದು ನಿವೃತ್ತ ಅಧಿಕಾರಿ ಬಾಬುರಾವ್ ಕುಲಕರ್ಣಿ ಹೇಳಿದ್ದಾರೆ.

ನಿವೃತ್ತ ಅಧಿಕಾರಿ ಬಾಬುರಾವ್ ಕುಲಕರ್ಣಿ
ಸದ್ಯ ದಾಳಿಂಬೆ ಸೀಸನ್ ಇರದೇ ಇರುವ ಕಾರಣ ದಾಳಿಂಬೆ ಫಸಲು ಬರುವುದಕ್ಕೆ ಇನ್ನು ಸ್ವಲ್ಪ ದಿನ ಬೇಕು. ಆದರೆ ಸೀಸನ್ ಇರುವ ಮಾವಿನ ಬೆಳೆ ನೋಡುಗರನ್ನು ಹೆಚ್ಚು ಆಕರ್ಷಣೆ ಮಾಡುತ್ತಿವೆ. ಎರಡುವರೆ ಎಕರೆಯಲ್ಲಿ ಬಾಬುರಾವ್ ಆಪೂಸ್, ಕೇಸರ್ ಹಾಗೂ ಮಲ್ಲಿಕಾ ಜಾತಿಗೆ ಸೇರಿದ ಮೂರು ಬಗೆಯ ಮಾವು ಬೆಳೆ ಬೆಳೆದಿದ್ದಾರೆ. ಇದರಲ್ಲಿ ವಿಶೇಷ ಎಂದರೆ ಬಾಬುರಾವ್ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸದೆ ಸಾವಯವ ಕೃಷಿ ಪದ್ಧತಿಯಲ್ಲಿ ಮಾವು ಬೆಳೆಸಿದ್ದು ಮುಖ್ಯ. ಹೊಲದಲ್ಲಿ ಡ್ರಿಪ್ ಅಳವಡಿಸಿ ತೋಟಗಾರಿಕೆ ಬೆಳೆ ಬೆಳೆದಿದ್ದಾರೆ. ಹೀಗಾಗಿ ಇವರ ಹೊಲದಲ್ಲಿ ಬೆಳೆದ ಹಣ್ಣುಗಳಿಗೆ ಭಾರಿ ಬೇಡಿಕೆ ಇದೆ.

12 ಎಕರೆ ಜಮೀನಿನಲ್ಲಿ ಕೃಷಿ ಮಾಡಿರುವ ನಿವೃತ್ತ ಅಧಿಕಾರಿ
ಇಲ್ಲಿ ಬೆಳೆದ ಹಣ್ಣುಗಳು ಪಕ್ಕದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಹಾಗೂ ಕೇರಳ ರಾಜ್ಯಗಳಿಗೆ ರಫ್ತಾಗುತ್ತದೆ. ಇನ್ನು ಬಾಬುರಾವ್ ಅವರಿಗೆ ಹೆಗಲಿಗೆ ಹೆಗಲಾಗಿರುವುದು ಅವರ ಪತ್ನಿ. ಬಾಬುರಾವ್ ಅವರ ಧರ್ಮಪತ್ನಿ ಸಂಧ್ಯಾ ಜಮೀನ ಪ್ರತಿಯೊಂದು ವಿಷಯದಲ್ಲೂ ಸಲಹೆ ನೀಡುತ್ತ. ಬಾಬುರಾವ್ ಗೈರಾದ ಸಮಯದಲ್ಲಿ ಮುಂದೆ ನಿಂತು ಗಿಡಮರಗಳನ್ನು, ಕೂಲಿ ಕಾರ್ಮಿಕರ ಮೂಲಕ ನಿರ್ವಹಿಸುತ್ತಾರೆ.
ಒಟ್ಟಿನಲ್ಲಿ ನಿವೃತ್ತಿ ಬಳಿಕ ಹಾಯಾಗಿ ಜೀವನ ಕಳೆಯುವ ಅಧಿಕಾರಿಗಳ ಮಧ್ಯೆ ಬಾಬುರಾವ್ ವಿಶಿಷ್ಟವಾಗಿ ಕಾಣುತ್ತಾರೆ. ಇಂದಿನ ಆಧುನಿಕ ಜೀವನದಲ್ಲಿ ಕೃಷಿ ಕಡೆ ಗಮನ ಹರಿಸದ ಜನರಿಗೆ ಬಾಬುರಾವ್ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ಇದು ನಿವೃತ್ತ ಮೇಷ್ಟ್ರು ಮನೆ ಮೇಲ್ಛಾವಣಿಯನ್ನೇ ಗಾರ್ಡನ್ ಮಾಡಿದ ಕಥೆ..!
( Retired officer who earns lakhs from agriculture in Bagalkot)