ರಾಜ್ಯದ 9 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಸೆಪ್ಟೆಂಬರ್ 14 ರಂದು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಹವಾಮಾನ ವೈಪರೀತ್ಯದಿಂದ ವೈರಲ್ ಸೋಂಕುಗಳು ಹೆಚ್ಚಾಗುವ ಸಾಧ್ಯತೆಗಳಿದ್ದು, ಬಿಸಿ ನೀರು ಕುಡಿಯುವುದು ಹಾಗೂ ಮಾಸ್ಕ್ ಧರಿಸುವುದು ಸುರಕ್ಷಿತ ಎಂದು ಆರೋಗ್ಯ ಸಲಹೆ ನೀಡಲಾಗಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಒಣ ಹವೆ ಮುಂದುವರೆಯಲಿದೆ.

ಬೆಂಗಳೂರು, ಸೆ.14: ನೈರುತ್ಯ ಮುಂಗಾರು ಕ್ಷೀಣಿಸಿದ್ದರೂ ಸಹಿತ, ಇಂದು (ಸೆಪ್ಟೆಂಬರ್ 14) ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರ್ನಾಟಕದಲ್ಲಿ ಗರಿಷ್ಠ ತಾಪಮಾನ 32°C ಮತ್ತು ಕನಿಷ್ಠ ತಾಪಮಾನ 22°C ದಾಖಲಾಗುವ ಸಾಧ್ಯತೆಯಿದೆ.
ದಿನವಿಡೀ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ರಾತ್ರಿಯ ವೇಳೆಗೆ ಮೋಡಗಳು ಹೆಚ್ಚಾಗಲಿವೆ. ಶೇಕಡಾ 10% ರಷ್ಟು ಮಾತ್ರ ಹಗುರ ಮಳೆಯಾಗುವ ಸಾಧ್ಯತೆಯಿದೆ. ಪಶ್ಚಿಮ ದಿಕ್ಕಿನಿಂದ ಗಂಟೆಗೆ 9 ಮೈಲಿ (9 mph) ವೇಗದಲ್ಲಿ ಗಾಳಿ ಬೀಸಲಿದೆ. ಹಾಗೂ ವಾತಾವರಣದಲ್ಲಿ 55% ಆರ್ದ್ರತೆ ಇರಲಿದೆ.
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಹಾಗೂ ಕೊಡಗು ಸೇರಿದಂತೆ ಪ್ರಮುಖ 9 ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಇಂದು ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಈ ವೇಳೆ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದೆ.
ಬೀದರ್, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳ ಕೆಲವೆಡೆ ಹಗುರ ಮಳೆಯಾಗುವ ಮುನ್ಸೂಚನೆಯಿದ್ದು, ಉಳಿದ ಜಿಲ್ಲೆಗಳಲ್ಲಿ ಮುಖ್ಯವಾಗಿ ಒಣ ಹವೆ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಭಾವವಿದ್ದು, ದಿನವಿಡೀ ಒಣ ಹವೆ ಮತ್ತು ಬಿಸಿಲಿನ ಝಳ ಇರಲಿದೆ. ಮೀನುಗಾರರಿಗೆ ಯಾವುದೇ ಎಚ್ಚರಿಕೆ ನೀಡಿಲ್ಲ. ಬೆಳಗಾವಿ, ಧಾರವಾಡ, ಹಾವೇರಿ, ವಿಜಯಪುರ, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣದೊಂದಿಗೆ ಬಿಸಿಲು ಇರಲಿದೆ.
ಇದನ್ನು ಓದಿ: ಗ್ರೀನ್, ಯೆಲ್ಲೋ, ಬ್ಲೂ, ಪರ್ಪಲ್ ಬೆನ್ನಲ್ಲೇ ಈಗ ಆರೆಂಜ್ ಲೈನ್ ಮೆಟ್ರೋ ಸರದಿ: ಇಲ್ಲಿದೆ ಎಲ್ಲಿಂದ ಎಲ್ಲಿಗೆ ಎನ್ನುವ ವಿವರ
ಹವಾಮಾನ ವೈಪರೀತ್ಯದಿಂದಾಗಿ (ಹಗಲಿನಲ್ಲಿ ಬಿಸಿಲು, ರಾತ್ರಿ ವೇಳೆ ತಂಪು ಗಾಳಿ ಹಾಗೂ ಮಳೆ) ವೈರಲ್ ಸೋಂಕುಗಳು ಹೆಚ್ಚಾಗುವ ಸಾಧ್ಯತೆಯಿದೆ ತಾಪಮಾನದ ವ್ಯತ್ಯಾಸದಿಂದಾಗಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಜ್ವರ, ಗಂಟಲು ನೋವು ಮತ್ತು ಶೀತ ಕಾಣಿಸಿಕೊಳ್ಳಬಹುದು. ಬಿಸಿಮಾಡಿದ ನೀರನ್ನೇ ಕುಡಿಯುವುದು ಸೂಕ್ತ. ಮಳೆ ಬೀಳುವ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಸೊಳ್ಳೆಗಳ ಉತ್ಪತ್ತಿ ತಡೆಯಲು ಮನೆಯ ಸುತ್ತಮುತ್ತ ನೈರ್ಮಲ್ಯ ಕಾಪಾಡಿ. ಸಾಧಾರಣ ಬಿರುಗಾಳಿಯೊಂದಿಗೆ ಧೂಳು ಹಾಗೂ ತೇವಾಂಶ ಏರಿಕೆಯಾಗುವುದರಿಂದ ಉಸಿರಾಟದ ತೊಂದರೆ ಅಥವಾ ಅಸ್ತಮಾ ಇರುವವರು ಮಾಸ್ಕ್ ಧರಿಸುವುದು ಸುರಕ್ಷಿತ ಎಂದು ಇಲಾಖೆ ಹೇಳಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:27 am, Mon, 14 September 26




