ಬೆಂಗಳೂರಿನ ನಡು ರಸ್ತೆಯಲ್ಲಿಯೆ ವ್ಯಕ್ತಿಯ ಭೀಕರ ಹತ್ಯೆ: ಪ್ರತೀಕಾರಕ್ಕಾಗಿ ನಡೀತಾ ಕೊಲೆ?
ಬೆಂಗಳೂರಿನ ಮಡಿವಾಳ ಅಂಡರ್ಪಾಸ್ ಬಳಿ ಮೆಡಿಕಲ್ ಶಾಪ್ ಮಾಲೀಕನೋರ್ವನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮಡಿವಾಳದಿಂದ ಕೊರಮಂಗಲ ಕಡೆ ಹೊರಟಿದ್ದ ಈತನನ್ನು ಮಾರಕಾಸ್ತ್ರಗಳಿಂದ ಜನರೆದುರೇ ಕೊಚ್ಚಿ ಹತ್ಯೆ ಮಾಡಲಾಗಿದ್ದು, ಇದು ಜನವರಿ 13ರಂದು ಬಂಡೆಪಾಳ್ಯದಲ್ಲಿ ನಡೆದಿದ್ದ ಶಬ್ಬೀರ್ ಕೊಲೆ ಪ್ರಕರಣಕ್ಕೆ ಪ್ರಥಿಕಾರವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಪ್ರಕರಣ ಸಂಬಂಧ ಮೂರು ವಿಶೇಷ ತಂಡಗಳ ರಚನೆ ಮಾಡಲಾಗಿದೆ.

ಮುಖ್ಯಾಂಶಗಳು
- ನಡು ರಸ್ತೆಯಲ್ಲಿಯೇ ವ್ಯಕ್ತಿಯ ಭೀಕರ ಕೊಲೆ
- ಬೆಂಗಳೂರಿನ ಮಡಿವಾಳದಲ್ಲಿ ನಡೆದ ಘಟನೆ
- ಪ್ರತೀಕಾರಕ್ಕಾಗಿ ಆರೋಪಿಗಳಿಂದ ನಡೆದ ಕೃತ್ಯ?
ಬೆಂಗಳೂರು, ಆಗಸ್ಟ್ 23: ಬೆಂಗಳೂರಿನಲ್ಲಿ (Bengaluru) ಮತ್ತೆ ರೌಡಿಗಳು ಬಾಲ ಬಿಚ್ಚಿದ್ದು, ಮೆಡಿಕಲ್ ಶಾಪ್ ನಡೆಸ್ತಿದ್ದ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಘಟನೆ ಮಡಿವಾಳದ ಅಂಡರ್ಪಾಸ್ ಸಮೀಪ ನಿನ್ನೆ ರಾತ್ರಿ ನಡೆದಿದೆ. ಮಂಗಮ್ಮನ ಪಾಳ್ಯದ ಸುಹೇಲ್ ಮೃತ ವ್ಯಕ್ತಿಯಾಗಿದ್ದು, ರಾತ್ರಿ 10 ಗಂಟೆಗೆ ಮಡಿವಾಳದಿಂದ ಕೊರಮಂಗಲ ಕಡೆ ಹೊರಟಿದ್ದ ಸುಹೇಲ್ನನ್ನು ಮುಖ್ಯ ರಸ್ತೆಯಲ್ಲಿ ಜನರ ಎದುರಲ್ಲೇ ಭೀಕರ ಹತ್ಯೆ ಮಾಡಲಾಗಿದೆ. ಜನವರಿ 13ರಂದು ಬಂಡೆಪಾಳ್ಯದಲ್ಲಿ ನಡೆದಿದ್ದ ಶಬ್ಬೀರ್ ಕೊಲೆ ಕೇಸ್ನಲ್ಲಿ ಸುಹೇಲ್ ಸಹೋದರರಾದ ಖಲೀಂ, ನಜೀರ್, ಇನ್ನೋರ್ವ ಸೋದರ ಭಾಗಿಯಾಗಿದ್ದರು. ಅದಕ್ಕೆ ಪ್ರತೀಕಾರವಾಗಿ ಈ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಟ್ರಾಫಿಕ್ ಜಾಮ್ನಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದಾಗ ಎರಡು ಬೈಕ್ಗಳಲ್ಲಿ ಬಂದಿದ್ದ ನಾಲ್ವರು ಸುಹೇಲ್ ಮೇಲೆ 2 ತಲ್ವಾರ್ನಿಂದ ಅಟ್ಯಾಕ್ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸುಹೇಲ್ ಮೃತಪಟ್ಟಿದ್ದರೆ, ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದಾರೆ. ದುರ್ದೈವ ಅಂದರೆ ಮೃತ ಸುಹೇಲ್ಗೂ ಶಬ್ಬೀರ್ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧ ಇರಲಿಲ್ಲ. ಸುಹೇಲ್ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಕೂಡ ಇಲ್ಲ. ಆದರೆ ಆತನ ಸಹೋದರರ ಮೇಲಿನ ದ್ವೇಷಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಸುಜಿತಾ, ಸಿಸಿಬಿ ಡಿಸಿಪಿ ಹರಿಬಾಬು, ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಉರುಳಿಗೆ ಬಿದ್ದು ಪ್ರಾಣ ಬಿಟ್ಟ ಚಿರತೆ ಸುಟ್ಟ ದುರುಳರು: ತನಿಖೆ ವೇಳೆ ಸ್ಫೋಟಕ ವಿಚಾರಗಳು ಬಯಲು
ಅಣ್ಣನ ಕೊಲೆ ಬೆನ್ನಲ್ಲೇ ತಮ್ಮನ ಪ್ರತಿಜ್ಞೆ
ಅಣ್ಣ ಸುಹೇಲ್ ಹತ್ಯೆ ಬೆನ್ನಲ್ಲೇ ಕೊಲೆ ನಡೆದ ಸ್ಥಳದಲ್ಲಿ ತಮ್ಮ ನಜೀರ್ ರಿವೇಂಜ್ ಪ್ರತಿಜ್ಞೆ ಮಾಡಿದ್ದಾನೆ. ಸುಹೇಲ್ ನನ್ನ ಅಣ್ಣ ಅಷ್ಟೇ ಆಗಿರಲಿಲ್ಲ ಅಪ್ಪನ ರೀತಿಯಿದ್ದ. ಹೀಗಾಗಿ ಅವನನ್ನು ಕೊಲೆ ಮಾಡಿದ ಯಾರನ್ನೂ ಸುಮ್ಮನೆ ಬಿಡೋದಿಲ್ಲ ಎಂದು ಹೇಳಿದ್ದಾನೆ. ಅಣ್ಣ ಸುಹೇಲ್ ಕೊಲೆಯಾದ ತಕ್ಷಣ ಸ್ಥಳಕ್ಕೆ ನಜೀರ್ ಬಂದಿದ್ದ ಎನ್ನಲಾಗಿದೆ.
ಕಳೆದ ಕೆಲ ದಿನಗಳಿಂದಲೇ ಕೊಲೆಗೆ ಸ್ಕೆಚ್?
ಇನ್ನು ಸುಹೇಲ್ ಕೊಲೆ ಸಂಬಂಧ ಕಳೆದ ಕೆಲ ದಿನಗಳಿಂದಲೇ ಆರೋಪಿಗಳು ಸ್ಕೆಚ್ ಹಾಕಿದ್ದರು. ಸುಹೇಲ್ ಚಲನವಲನ ಗಮನಿಸಿದ್ದ ಹಂತಕರು, ಪಕ್ಕಾ ಪ್ರೀಪ್ಲ್ಯಾನ್ ಮಾಡಿ ಸ್ಕೆಚ್ ಹಾಕಿ ಸುಹೇಲ್ ಹತ್ಯೆಗೈದಿದ್ದಾರೆ. ಹಾರ್ಲೆ ಡೇವಿಡ್ಸನ್ ಬೈಕ್ನಲ್ಲಿ ಹೊರಟಿದ್ದ ಸುಹೇಲ್ ಮೇಲೆ ದಾಳಿ ನಡೆಸಿದ್ದಾರೆ. ಕೊಲೆಗೈದು ಬಳಿಕ ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಸಾಕಿ ಪರಾರಿಯಾಗಿದ್ದಾರೆ.
ತನಿಖೆಗೆ ಮೂರು ತಂಡಗಳ ರಚನೆ
ಹತ್ಯೆ ಪ್ರಕರಣ ಸಂಬಂಧ ಮೂರು ವಿಶೇಷ ತಂಡಗಳ ರಚನೆ ಮಾಡಲಾಗಿದ್ದು, ಕೊಲೆಯಾದ ಸ್ಥಳದಲ್ಲಿ ಏರಿಯಾದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆಯಲಾಗಿದೆ. ಹಂತಕರ ಚಲನವಲನಗಳ ಬಗ್ಗೆ ಮಾಹಿತಿ ಪಡೆಯಲು ಸಿಸಿ ಕ್ಯಾಮಾರ ದೃಶ್ಯಾವಳಿ ಪರಿಶೀಲನೆ ನಡೆಸಲಾಗ್ತಿದ್ದು, ಮಂಗಮ್ಮನ ಪಾಳ್ಯ ನಿವಾಸಿ ಸುಹೇಲ್ ಮಡಿವಾಡ ಮುಖ್ಯ ರಸ್ತೆ ಕಡೆ ಬಂದಿದ್ದೇಕೆ? ಸುಹೇಲ್ ಮೆಡಿಕಲ್ ಸ್ಟೋರಿ ಇರುವುದು ಬೊಮ್ಮನಹಳ್ಳಿಯಲ್ಲಿ. ಮೆಡಿಕಲ್ ಶಾಪ್ನಿಂದ ಹೊರಡುವ ವೇಳೆ ಕೊನೆಯದಾಗಿ ಸುಹೇಲ್ಗೆ ಕರೆ ಮಾಡಿದ್ದವರು ಯಾರು? ಎಂಬಿತ್ಯಾದಿ ವಿಚಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:24 am, Sun, 23 August 26




