ಹಿರಿಯ ನಾಗರಿಕರು, ಅಸ್ವಸ್ಥರಿಗೆ ಚುನಾವಣಾ ಆಯೋಗದಿಂದ ಬಿಗ್ ರಿಲೀಫ್: ಮನೆ ಬಾಗಿಲಲ್ಲೇ ವಿಚಾರಣೆಗೆ ಅವಕಾಶ!
ಮತದಾರರ ಪಟ್ಟಿಯ ಪರಿಶೀಲನೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗ ಬಿಗ್ ರಿಲೀಫ್ ನೀಡಿದೆ. ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ಅಸ್ವಸ್ಥರ ಪರವಾಗಿ ಅವರ ಕುಟುಂಬಸ್ಥರು ಇಆರ್ಒ ಕಚೇರಿಗೆ ದಾಖಲೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ತೀವ್ರ ಅಸ್ವಸ್ಥರ ಮನೆ ಬಾಗಿಲಲ್ಲೇ ಪರಿಶೀಲನೆ ನಡೆಯಲಿದೆ.

ಮುಖ್ಯಾಂಶಗಳು
- ಹಿರಿಯ ನಾಗರಿಕರು, ಅಸ್ವಸ್ಥರಿಗೆ ಮತದಾರರ ಪಟ್ಟಿ SIR ಪರಿಶೀಲನೆಯಿಂದ ಭಾರಿ ವಿನಾಯಿತಿ.
- ವೃದ್ಧರ ಬದಲಾಗಿ ಕುಟುಂಬದ ವಯಸ್ಕ ಸದಸ್ಯರು ಅಗತ್ಯ ದಾಖಲೆ ಸಲ್ಲಿಸಲು ಅವಕಾಶ.
- ತೀವ್ರ ಅಸ್ವಸ್ಥರ ಮನೆಗೇ ತೆರಳಿ ದಾಖಲೆ ಪರಿಶೀಲಿಸಲು ಚುನಾವಣಾಧಿಕಾರಿಗಳ ಹೊಸ ಆದೇಶ.
ಬೆಂಗಳೂರು, ಸೆಪ್ಟೆಂಬರ್ 16: ರಾಜ್ಯಾದ್ಯಂತ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಹಿರಿಯ ನಾಗರಿಕರು, ವಿಕಲಚೇತನರು, ಅನಾರೋಗ್ಯ ಪೀಡಿತರು ಹಾಗೂ ಅನಿವಾಸಿ ಭಾರತೀಯ ಮತದಾರರಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಭಾರಿ ವಿನಾಯಿತಿ ನೀಡಿದೆ. ಈ ವರ್ಗದ ಮತದಾರರು ಇಆರ್ಒ ಅಥವಾ ಎಇಆರ್ಒ ಕಚೇರಿಗಳ ವಿಚಾರಣೆಗೆ ಖುದ್ದಾಗಿ ಹಾಜರಾಗುವ ಅಗತ್ಯವಿಲ್ಲ ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್. ಯೋಗೇಶ್ವರ್ ಆದೇಶ ಹೊರಡಿಸಿದ್ದಾರೆ.
ಅಸ್ವಸ್ಥರ ಪರವಾಗಿ ಅವರ ಕುಟುಂಬದವರಿಗೆ ಹಾಜರಾಗಲು ಅನುಮತಿ
ಚುನಾವಣಾ ಆಯೋಗದ ನೋಟಿಸ್ ಪಡೆದ ಸಾರ್ವಜನಿಕರು ಹಾಗೂ ಹಿರಿಯ ನಾಗರಿಕರು ಪರಿಶೀಲನಾ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲಬೇಕಾದ ಸನ್ನಿವೇಶ ನಿರ್ಮಾಣವಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಹಿರಿಯ ನಾಗರಿಕರು ಮತ್ತು ತೀವ್ರ ಅಸ್ವಸ್ಥರ ಪರವಾಗಿ ಅವರ ಕುಟುಂಬದ ಯಾವುದೇ ವಯಸ್ಕ ಸದಸ್ಯರು ಅಗತ್ಯ ದಾಖಲೆಗಳೊಂದಿಗೆ ಅಧಿಕಾರಿಯ ಮುಂದೆ ಹಾಜರಾಗಲು ಅನುಮತಿ ನೀಡಿದ್ದಾರೆ.
ರೋಗಿಗಳ ಮನೆಗೇ ಸಿಬ್ಬಂದಿ ಭೇಟಿ
ಅಲ್ಲದೆ, ಹೊರಬರಲಾಗದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿರುವ ಹಿರಿಯರು ಮತ್ತು ರೋಗಿಗಳ ಮನೆಗೇ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸುವ ಹಾಗೂ ನೋಟಿಸ್ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ನಿಯಮವು ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಅಧಿಕೃತ ಇಆರ್ಒ ಕಚೇರಿಗಳಿಗೆ ತಕ್ಷಣದಿಂದಲೇ ಅನ್ವಯವಾಗಲಿದೆ. ಈ ಹೊಸ ಮಾರ್ಗದರ್ಶನದಿಂದಾಗಿ ವೃದ್ಧರು ಹಾಗೂ ರೋಗಿಗಳು ಕಚೇರಿ ಅಲೆಯುವುದು ತಪ್ಪಲಿದ್ದು, ರಾಜ್ಯಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಗಣನೀಯ ನಿರಾಳತೆ ಸಿಕ್ಕಂತಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




