ಚಾಮರಾಜನಗರ: ಹುಲಿ ಸೆರೆಗೆ ಮುಂದಾಗದಿದ್ರೆ ಮತ್ತೊಂದು ದುರಂತ ಸಂಭವಿಸುತ್ತಾ? ಅರಣ್ಯ ಇಲಾಖೆಗೆ ರೈತರ ಎಚ್ಚರಿಕೆ ಏನು?
ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನ ಹೊಂದಿರುವ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಅಸಲಿಯತ್ತು ಅನಾವರಣಗೊಂಡಿದೆ. ಹುಲಿ ಕೂಂಬಿಂಗ್ ಮಾಡಲು ವಾಹನ ಹಾಗೂ ಡಿಸೇಲ್ ಇಲ್ಲವಂತೆ, ಹುಲಿ ಸೆರೆಗೆ ಒಂದೇ ಬೋನ್ ಇದೆಯಂತೆ. ರೈತರು ಹುಲಿ ಸೆರೆಗೆ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ. ಹೀಗಾಗಿ ಅನ್ಯ ಮಾರ್ಗ ಹಿಡಿಯುವ ಎಚ್ಚರಿಕೆ ನೀಡಿದ್ದಾರೆ.

ಚಾಮರಾಜನಗರ, ಸೆಪ್ಟೆಂಬರ್ 01: ಬಂಡೀಪುರ ಅರಣ್ಯ ಸಿಬ್ಬಂದಿ ಒಂದಿಲ್ಲೊಂದು ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅಂತಹದ್ದೆ ಒಂದು ಎಡವಟ್ಟು ಬಯಲಾಗಿದೆ. ಹುಲಿ (tiger) ಕೂಂಬಿಂಗ್ ಮಾಡುವುದಕ್ಕೆ ಅರಣ್ಯ ಇಲಾಖೆ ಬಳಿ ವಾಹನ ಹಾಗೂ ಡಿಸೇಲ್ ಇಲ್ಲವಂತೆ. ಜೊತೆಗೆ ಇಡೀ ಬಂಡೀಪುರಕ್ಕೆ ಹುಲಿ ಸೆರೆಗೆ ಇರುವುದು ಒಂದೇ ಒಂದು ಬೋನಂತೆ. ಇದು ಟಿವಿ9 ಗ್ರೌಂಡ್ ರಿಯಾಲಿಟಿ ಚೆಕ್ನಲ್ಲಿ ಬೆಳಕಿಗೆ ಬಂದ ಅರಣ್ಯ ಇಲಾಖೆಯ ವಾಸ್ಥವ ಸ್ಥಿತಿ. ಆ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನ ಹೊಂದಿರುವ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ (Bandipur National Park) ಅಸಲಿಯತ್ತು ಅನಾವರಣಗೊಂಡಿದೆ.
ಜಮೀನಿನಲ್ಲಿ ಹುಲಿ ಸಂಚಾರ: ಕ್ಯಾರೇ ಎನ್ನದ ಅರಣ್ಯ ಇಲಾಖೆ
ಚಾಮರಾಜನಗರ ಜಿಲ್ಲೆಯ ಗುಂಡ್ಲುಟೇಟೆ ತಾಲೂಕಿನ ಕಗ್ಗಲಹುಂಡಿ ಕಾಡಂಚಿನ ಗ್ರಾಮದಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಜಮೀನಿನಲ್ಲಿ ಹುಲಿ ಸಂಚರಿಸುತ್ತಿದೆ. ಜಮೀನಲ್ಲೇ ಎರಡು ಕಾಡು ಹಂದಿಯನ್ನ ಬೇಟೆಯಾಡಿ ಭಕ್ಷಣೆ ಮಾಡಿದೆ. ಹುಲಿ ಸಂಚಾರದ ವಿಡಿಯೋ ಟಿವಿ9 ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಹುಲಿ ಸೆರೆ ಹಿಡಿಯಲು ಮನವಿ ಮಾಡಿದರೂ ಅರಣ್ಯ ಇಲಾಖೆ ಕ್ಯಾರೇ ಅನ್ನುತ್ತಿಲ್ಲ. ಹೀಗಾಗಿ ನಿತ್ಯ ಜೀವ ಕೈಯಲ್ಲಿ ಹಿಡಿದು ರೈತರು ಜಮೀನಿಗೆ ತೆರಳುತ್ತಿದ್ದಾರೆ.
ಅನಿವಾರ್ಯವಾದರೆ ವಿಷ ಹಾಕಲು ಸಿದ್ಧ: ಎಚ್ಚರಿಕೆ ನೀಡಿದ ರೈತರು
ಕಳೆದ ಜುಲೈನಲ್ಲಿ ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳಿಗೆ ವಿಷ ಹಾಕಿ ಕೊಲ್ಲಲಾಗಿತ್ತು. ಮಾದರಾಜುನ ಹಸುವನ್ನ ಕೊಂದು ತಿಂದಿದ್ದ ಹುಲಿಗಳಿಗೆ ವಿಷ ಹಾಕಲಾಗಿತ್ತು. ಅನಿವಾರ್ಯವಾದರೆ, ಅಂತಹದೇ ಕೆಲಸ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ 5 ಹುಲಿಗಳ ಸಾವು ಕೇಸ್: ಕ್ರಿಮಿನಾಶಕ ಬಳಸಿರುವುದು ವರದಿಯಲ್ಲಿ ದೃಢ
ಈಗಲಾದರೂ ಹುಲಿ ಸೆರೆಗೆ ಕೂಂಬಿಂಗ್ ಮಾಡದಿದ್ದರೆ ಮತ್ತೊಂದು ದುರಂತಕ್ಕೆ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಕಾರಣವಾಗುವ ಸಾಧ್ಯತೆಗಳಿವೆ. ಹಾಗಾಗಿ ಅದಕ್ಕೂ ಮುನ್ನ ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಂಡು ರೈತರ ಹಾಗೂ ಜಾನುವಾರುಗಳ ಜೀವ ರಕ್ಷಣೆಗೆ ಮುಂದಾಗಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:19 am, Mon, 1 September 25







