ಮಂಗಳೂರು ಜಿಲ್ಲಾ ಕಾರಾಗೃಹದ ಮೇಲೆ ಬರ್ಕೆ ಪೊಲೀಸರಿಂದ ರೇಡ್: 10 ಮೊಬೈಲ್ಗಳು ಪತ್ತೆ
ಮಂಗಳೂರು ಜಿಲ್ಲಾ ಕಾರಾಗೃಹದ ಮೇಲೆ ಬರ್ಕೆ ಠಾಣೆ ಪೊಲೀಸರು ಹಠಾತ್ ದಾಳಿ ನಡೆಸಿದ್ದು, ಎ-ಬ್ಲಾಕ್ನಲ್ಲಿದ್ದ 9 ಜೈಲುಬಂಧಿಗಳಿಂದ ಒಟ್ಟು 10 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಜೈಲು ಬಂಧಿಗಳಿಂದ ಮೊಬೈಲ್ ಬಳಕೆ ಬಗ್ಗೆ ಖಚಿತ ಮಾಹಿತಿ ದೊರೆತಿದ್ದ ಹಿನ್ನೆಲೆಯೇ ಪೊಲೀಸರು ಈ ರೇಡ್ ನಡೆಸಿದ್ದಾರೆ ಎನ್ನಲಾಗಿದೆ.

ಮಂಗಳೂರು, ಸೆಪ್ಟೆಂಬರ್ 08: ಮೇಲಿಂದ ಮೇಲೆ ಸಾಕಷ್ಟು ಪ್ರಕರಣಗಳು ಸಾರ್ವಜನಿಕ ಚರ್ಚೆಗೆ ಗ್ರಾಸವಾದ ಬಳಿಕವೂ ರಾಜ್ಯದ ಜೈಲುಗಳಲ್ಲಿ ಮಾತ್ರ ಜೈಲುಬಂಧಿಗಳಿಗೆ ರಾಜಾತಿಥ್ಯಕ್ಕೆ ಬ್ರೇಕ್ ಬಿದ್ದಿಲ್ಲ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಕೈದಿಗಳ ಬ್ಯಾರಕ್ನಲ್ಲಿ ಮೊಬೈಲ್ ಫೋನ್ಗಳು ಪತ್ತೆಯಾಗಿದ್ದ ಘಟನೆ ಮಾಸುವ ಮುನ್ನವೇ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿಯೂ ಎಲ್ಲವೂ ಖುಲ್ಲಂ ಖುಲ್ಲವಾಗಿ ನಡೆಯುತ್ತಿರುವುದು ಬರ್ಕೆ ಪೊಲೀಸರ ದಾಳಿಯ ವೇಳೆ ಬಟಾ ಬಯಲಾಗಿದೆ.
ಜೈಲಿನಲ್ಲಿದ್ದ 9 ಕೈದಿಗಳ ಬಳಿ ಒಟ್ಟು 10 ಮೊಬೈಲ್ ಪತ್ತೆ
ಮಂಗಳೂರು ಜಿಲ್ಲಾ ಕಾರಾಗೃಹದ ಮೇಲೆ ಬರ್ಕೆ ಠಾಣೆ ಪೊಲೀಸರ ದಾಳಿ ವೇಳೆ ಜೈಲಿನಲ್ಲಿದ್ದ 9 ಕೈದಿಗಳ ಬಳಿ ಒಟ್ಟು 10 ಮೊಬೈಲ್ ಫೋನ್ಗಳು ಪತ್ತೆಯಾಗಿವೆ. ಮೊಬೈಲ್ ಬಳಕೆ ಬಗ್ಗೆ ಖಚಿತ ಮಾಹಿತಿ ದೊರೆತಿದ್ದ ಹಿನ್ನೆಲೆಯೇ ಪೊಲೀಸರು ಈ ರೇಡ್ ನಡೆಸಿದ್ದರು ಎನ್ನಲಾಗಿದ್ದು, ಎ-ಬ್ಲಾಕ್ನಲ್ಲಿದ್ದ ಕೈದಿಗಳ ಬಳಿಯಿದ್ದ 10 ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಿಫತ್ ಅಲಿ, ಇಬ್ರಾಹಿಂ ಖಲೀಲ್, ಅಸ್ಫಕ್ ಅಲಿಯಾಸ್ ಜುಟ್ಟು ಅಸ್ಫಕ್, ಅರ್ಷದ್, ದಾವೂದ್ ಫರ್ವೇಜ್, ನಝರತ್ ಅಲಿ, ಶಿಫಾನ್, ಅಬ್ದುಲ್ ಸಾದೀಕ್, ಅರ್ಫಜ್ ಎಂಬುವರ ಬಳಿ ಮೊಬೈಲ್ಗಳು ಇದ್ದವು ಎನ್ನಲಾಗಿದೆ. ಈ ಪೈಕಿ ನಾಲ್ವರು ತೊಕ್ಕೊಟ್ಟು ಬಳಿ ನಡೆದ ಅರೀಫ್ ಕೊಲೆ ಕೇಸ್ನ ಆರೋಪಿಗಳು ಎನ್ನಲಾಗಿದ್ದು, ಮೊಬೈಲ್ ಬಳಕೆ ಮತ್ತು ಪೂರೈಕೆ ಸಂಬಂಧ ಬರ್ಕೆ ಪೊಲೀಸರಿಂದ ತನಿಖೆ ನಡೆಯುತ್ತಿದೆ.
ಪ್ರತಿ ಠಾಣಾ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ಪಡೆ ರಚನೆ ಹಿನ್ನೆಲೆ ಜೈಲಿನಲ್ಲಿರುವ ರೌಡಿಗಳು ಹೊರಗಿನ ರೌಡಿಗಳ ಜೊತೆ ಸಂಪರ್ಕದಲ್ಲಿರುವ ಮಾಹಿತಿ ಮತ್ತು ಜೈಲಿನಲ್ಲಿ ಅಕ್ರಮ ಚಟುವಟಿಕೆಗಳ ಆರೋಪ ಹಿನ್ನೆಲೆ ಆಗಸ್ಟ್ 11ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಈ ವೇಳೆ ಅತ್ಯಾಚಾರ ಕೇಸ್ನಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವದಿ ಶಿಕ್ಷೆಗೆ ಗುರಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್ನಲ್ಲಿದ್ದ ಮೊಬೈಲ್ ಸೇರಿ 10ಕ್ಕೂ ಹೆಚ್ಚು ಮೊಬೈಲ್ಗಳನ್ನು ಸಿಸಿಬಿ ಪತ್ತೆ ಮಾಡಿತ್ತು. ಆ ಪ್ರಕರಣದ ತನಿಖೆ ನಡೆಯುತ್ತಿರುವ ಹೊತ್ತಲ್ಲೇ ರಾಜ್ಯದ ಮತ್ತೊಂದು ಜೈಲಿನ ಕರ್ಮಕಾಂಡವೀಗ ಹೊರಬಿದ್ದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




