ಆಯುಕ್ತರಿಲ್ಲದೇ ಸೊರಗುತ್ತಿದೆ ಗದಗ-ಬೆಟಗೇರಿ ನಗರಸಭೆ: ಬೆಳಗ್ಗೆ ಒಬ್ಬ, ಸಂಜೆ ಇನ್ನೊಬ್ಬ ಅಧಿಕಾರಿ ನೇಮಕ ಮಾಡಿ ಆದೇಶ!

ಕರ್ನಾಟಕ ಸರ್ಕಾರ ಜನರಿಗೆ ಸಾಕಷ್ಟು ಭಾಗ್ಯಗಳನ್ನು ನೀಡಿದೆ. ಆದರೆ, ಗದಗ-ಬೆಟಗೇರಿ ನಗರಸಭೆಗೆ ಮಾತ್ರ ಪೂರ್ಣ ಪ್ರಮಾಣದ ಪೌರಾಯುಕ್ತರ ಭಾಗ್ಯ ಕಲ್ಪಿಸುತ್ತಿಲ್ಲ. ಕಳೆದ ವರ್ಷದಿಂದ ಪೌರಾಯುಕ್ತರಿಲ್ಲದೇ ಗ್ರೇಡ್-1 ನಗರಸಭೆ ಒದ್ದಾಡುತ್ತಿದೆ. ಬೆಳಗ್ಗೆ ಒಬ್ಬ ಅಧಿಕಾರಿಯನ್ನು ಪೌರಾಯುಕ್ತ ಅಂತ ಆದೇಶ ಮಾಡಿದ್ರೆ, ಸಂಜೆ ಮತ್ತೊಬ್ಬ ಅಧಿಕಾರಿಯನ್ನು ಪೌರಾಯುಕ್ತ ಅಂತ ನೇಮಿಸಿ ಆದೇಶ ಹೊರಡಿಸಲಾಗುತ್ತಿದೆ.

ಆಯುಕ್ತರಿಲ್ಲದೇ ಸೊರಗುತ್ತಿದೆ ಗದಗ-ಬೆಟಗೇರಿ ನಗರಸಭೆ: ಬೆಳಗ್ಗೆ ಒಬ್ಬ, ಸಂಜೆ ಇನ್ನೊಬ್ಬ ಅಧಿಕಾರಿ ನೇಮಕ ಮಾಡಿ ಆದೇಶ!
ಆಯುಕ್ತರಿಲ್ಲದೇ ಸೊರಗುತ್ತಿದೆ ಗದಗ-ಬೆಟಗೇರಿ ನಗರಸಭೆ
Follow us
| Updated By: ಗಣಪತಿ ಶರ್ಮ

Updated on: Sep 13, 2024 | 11:42 AM

ಗದಗ, ಸೆಪ್ಟೆಂಬರ್ 13: ಗದಗ-ಬೆಟಗೇರಿ ನಗರಸಭೆಗೆ ಪೂರ್ಣ ಪ್ರಮಾಣದ ಪೌರಾಯುಕ್ತ ಇಲ್ಲದೇ ಇರುವುದು ಅವಳಿ ನಗರದ ಜನರ ಗೊಂದಲಕ್ಕೆ ಕಾರಣವಾಗಿದೆ. ಇನ್ನೂ ನೇಮಕವಾದ ಕಾರಣ ಪ್ರಭಾರಿ ಆಯುಕ್ತರು ಕಚೇರಿಯಲ್ಲಿ ಸಿಗುವುದಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗದಗ-ಬೆಟಗೇರಿ ಗ್ರೇಡ್ 1 ನಗರಸಭೆಯ ಗತಿ ಅಧೋಗತಿ ಎಂಬಂತಾಗಿದೆ. ಪೂರ್ಣ ಪ್ರಮಾಣದ ಪೌರಾಯುಕ್ತರು ಸಿಗದೇ ನಗರಸಭೆ ಆಡಳಿತ ಒದ್ದಾಡುತ್ತಿದೆ. ಪ್ರಭಾರಿ ಪೌರಾಯುಕ್ತರು ತಮ್ಮ ಮೂಲ ಇಲಾಖೆ ಕಾರ್ಯದಲ್ಲೇ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದು, ಅವಳಿ ನಗರದ ಸಮಸ್ಯೆ, ಜನರ ಗೋಳು ಕೇಳುವವರು ಇಲ್ಲದಂತಾಗಿದೆ.

ಮತ್ತೊಂದೆಡೆ ಸರ್ಕಾರ ಬೆಳಗ್ಗೆ ಒಬ್ಬ ಅಧಿಕಾರಿ ನೇಮಿಸಿ ಆದೇಶ ಮಾಡುತ್ತದೆ. ಸಂಜೆ ಮತ್ತೊಬ್ಬ ಅಧಿಕಾರಿಯನ್ನು ನೇಮಿಸಿ ಆದೇಶ ಮಾಡುತ್ತಿದೆ. ಸರ್ಕಾರ ಕೂಡ ಪೌರಾಯುಕ್ತರ ಹುದ್ದೆ ವಿಷಯದಲ್ಲಿ ಹಾವುಏಣಿ ಆಟವಾಡುತ್ತಿದೆ ಎಂದು ಜನರು ಸರ್ಕಾರದ ವಿರುದ್ಧ ಕೆಂಡ ಕಾರುತ್ತಿದ್ದಾರೆ.

ಪೌರಾಯುಕ್ತರಿಲ್ಲದೆ ಅಭಿವೃದ್ಧಿಯೂ ಇಲ್ಲ

ಒಂದೂವರೆ ವರ್ಷದಿಂದ ಪೌರಾಯುಕ್ತರು ಇಲ್ಲದೆ ಅವಳಿ ನಗರದಲ್ಲಿ ಅಭಿವೃದ್ಧಿ ಅನ್ನೋದು ಮರಿಚೀಕೆ ಆಗಿದೆ. ಈ ನಡುವೆ ಸರ್ಕಾರ ನಾಲ್ಕೈದು ಆಯುಕ್ತರನ್ನು ನೇಮಕ ಮಾಡಿ ಆದೇಶ ಮಾಡಿತ್ತು. ಆದರೆ, ಒಬ್ಬರೇ ಒಬ್ಬರು ಪೌರಾಯುಕ್ತರು ಗದಗ ನಗರಕ್ಕೆ ಬಂದು ಅಧಿಕಾರ ವಹಿಸಿಕೊಂಡಿಲ್ಲ. ನೇಮಿಸಿದ ಅಧಿಕಾರಿಗಳು ಬಾರದೇ ಇರಲು ಗದಗ-ಬೆಟಗೇರಿ ನಗರಸಭೆಯಲ್ಲಿನ ಭ್ರಷ್ಟಾಚಾರ, ಜನಪ್ರತಿನಿಧಿಗಳ ಒತ್ತಡವೇ ಕಾರಣ ಎಂದು ಬಿಜೆಪಿ ಆರೋಪ ಮಾಡಿದೆ.

ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಇನ್ನು ಸಚಿವ ಎಚ್​​ಕೆ ಪಾಟೀಲ್ ತವರು ಕ್ಷೇತ್ರದಲ್ಲೇ ಗ್ರೇಡ್ ಒನ್ ನಗರಸಭೆಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದ್ದು ವಿಪರ್ಯಾಸವೇ ಸರಿ. ಅವಳಿ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಪ್ರಭಾರಿ ಪೌರಾಯುಕ್ತರು ಜನರ ಕೈಗೆ ಸಿಗುತ್ತಿಲ್ಲ. ನಾಳೆ ಬನ್ನಿ ಎಂಬ ಸಿದ್ಧ ಉತ್ತರ ಜನರಿಗೆ ಸಿಗುತ್ತದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗಿನ ಸರ್ಕಾರ ಆಯುಕ್ತರ ತರಲು ಮುತುವರ್ಜಿ ವಹಿಸುತ್ತಿಲ್ಲ. ಯಾವುದೇ ಒಳ್ಳೆಯ ಕೆಲಸ ಮಾಡಬೇಕು ಅಂದರೆ ಅಲೆದಾಡಬೇಕಾಗುತ್ತದೆ. ಪ್ರಭಾರಿ ಪೌರಾಯುಕ್ತರಿಂದ ಯಾವುದೇ ಕೆಲಸ ಆಗುತ್ತಿಲ್ಲ. ಗದಗ-ಬೆಟಗೇರಿ ಅವಳಿ ನಗರ ಅಭಿವೃದ್ಧಿ ಮಾಡುವ ಇಚ್ಛಾಶಕ್ತಿ ಸಚಿವ ಎಚ್ ಕೆ ಪಾಟೀಲ್ರಿಗಿಲ್ಲ ಅಂತ ಬಿಜೆಪಿ ಮುಖಂಡ ಎಂ ಎಂ ಹಿರೇಮಠ ಕಿಡಿಕಾರಿದ್ದಾರೆ.

No Municipal Commissioner for Gadag-Betageri City Municipal Council, public suffering, Kannada news

ಸೆಪ್ಟೆಂಬರ್ 04-09-24 ರಂದು ಬೆಳಗ್ಗೆ ಉಸ್ತುವಾರಿ ಸಚಿವ ಎಚ್​​ಕೆ ಪಾಟೀಲರ ಉಲ್ಲೇಖ ಹಾಕಿ ಡಿಸಿ ಗೋವಿಂದರೆಡ್ಡಿ ಅವರು ಪ್ರಲ್ಹಾದ್ ಎಂಬ ಅಧಿಕಾರಿಯನ್ನು ನಗರಸಭೆ ಪ್ರಭಾರಿ ಪೌರಾಯುಕ್ತರನ್ನಾಗಿ ವರ್ಗ ಮಾಡಿ ಆದೇಶ ಮಾಡಿದ್ದರು. ಮತ್ತೆ ಅದೇ ದಿನ ಸಂಜೆ ಈ ಆದೇಶ ರದ್ದು ಮಾಡಿ ಮತ್ತೆ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಮಹೇಶ್ ರನ್ನ ಪೌರಾಯುಕ್ತರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು.

ಇದನ್ನೂ ಓದಿ: ಗದಗದಲ್ಲಿ ದೇಶದಲ್ಲೇ ಅತಿ ಎತ್ತರದ ಸ್ವಾಮಿ ವಿವೇಕಾನಂದ ಪುತ್ಥಳಿ ಅನಾವರಣ!

ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಭಿವೃದ್ಧಿ ಅನ್ನೋದು ಗಗನಕುಸುಮವಾಗಿದೆ. ಸ್ವಚ್ಛತೆ, ಹದಗೆಟ್ಟ ರಸ್ತೆಗಳು, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ಬಿಜೆಪಿ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ಹೀಗಾಗಿ ಗಂಡ ಹೆಂಡತಿ ನಡುವೆ ಕೂಸು ಬಡವಾಯಿತು ಎನ್ನುವಂತೆ ಕಾಂಗ್ರೆಸ್, ಬಿಜೆಪಿ ಗುದ್ದಾಟದಲ್ಲಿ ಅವಳಿ ನಗರದ ಜನರು ಮಾತ್ರ ನಿತ್ಯ ಒದ್ದಾಡುವಂತಾಗಿರುವುದು ವಿಪರ್ಯಾಸವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ