ಕರ್ನಾಟಕದಲ್ಲಿ ಮಳೆಗಾಲದಲ್ಲೇ ಹೆಚ್ಚಾಗಲಿದೆ ತಾಪಮಾನ! ಬೆಂಗಳೂರಿನಲ್ಲಿ ಈಗಾಗಲೇ 4 ಡಿಗ್ರಿ ಸೆಲ್ಶಿಯಸ್ ಹೆಚ್ಚಳ
ಕರ್ನಾಟಕದಲ್ಲಿ ಈ ವರ್ಷ ಮಳೆಗಾಲದಲ್ಲೇ ಬೇಸಿಗೆಯ ಅನುಭವ ಆಗಲಿದೆಯೇ? ಇಂಥದ್ದೊಂದು ಪ್ರಶ್ನೆ ಈಗ ಉದ್ಭವಿಸಿದೆ. ಮುಂಗಾರು ಮಳೆಯ ಕೊರತೆ, ಬಿಸಿಲಿನ ಝಳ ಹೆಚ್ಚಳದಿಂದ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ತಾಪಮನಾ ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ನಲ್ಲಿ ವಾಡಿಕೆಗಿಂತ 3-4 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಹೆಚ್ಚಿರಲಿದೆ.

ಮುಖ್ಯಾಂಶಗಳು
- ಬೆಂಗಳೂರಿನಲ್ಲಿ ಸಾಮಾನ್ಯಕ್ಕಿಂತ 4 ಡಿಗ್ರಿ ಹೆಚ್ಚು
- ರಾಜ್ಯದಲ್ಲಿ ಶೇ 26ರಷ್ಟು ಮಳೆ ಕೊರತೆ
- ಸೆಪ್ಟೆಂಬರ್ 16ರ ಬಳಿಕ ಮಳೆ ಚುರುಕು ಸಾಧ್ಯತೆ
ಬೆಂಗಳೂರು, ಸೆಪ್ಟೆಂಬರ್ 9: ಕರ್ನಾಟಕದಲ್ಲಿ ಮುಂಗಾರು ಮಳೆ ದುರ್ಬಲವಾಗಿರುವ ಬೆನ್ನಲ್ಲೇ ತಾಪಮಾನ ಏರಿಕೆಯಾಗುವ ಸಾಧ್ಯತೆ ಗೋಚರಿಸಿದೆ. ಮುಂದಿನ ಒಂದು ವಾರ ರಾಜ್ಯದ ಹಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಇರಲಿದ್ದು, ಇನ್ನೂ 2–3 ಡಿಗ್ರಿ ಸೆಲ್ಶಿಯಸ್ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ವಿಜ್ಞಾನಿ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮಳೆ ಕೊರತೆ, ಒಣಹವೆ ಪರಿಣಾಮ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಒಣಹವೆ ಮುಂದುವರಿದಿದೆ. ಮೋಡಗಳ ಪ್ರಮಾಣ ಕಡಿಮೆಯಾಗಿದ್ದು, ಆಕಾಶ ಹೆಚ್ಚು ನಿರ್ಮಲವಾಗಿರುವುದರಿಂದ ಹಗಲು ವೇಳೆಯಲ್ಲಿ ಭೂಮಿಗೆ ಹೆಚ್ಚಿನ ಪ್ರಮಾಣದ ಸೂರ್ಯನ ಬೆಳಕು ಬೀಳುತ್ತಿದೆ. ಇದರಿಂದ ಭೂಮಿಯ ಮೇಲ್ಮೈ ತಾಪಮಾನ ಏರಿಕೆಯಾಗುತ್ತಿದೆ ಎಂದು ಪಾಟೀಲ್ ವಿವರಿಸಿದ್ದಾರೆ. ಕಳೆದ ಒಂದು-ಎರಡು ವಾರಗಳಿಂದ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದು ಕೂಡ ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿದೆ. ಮಣ್ಣಿನಲ್ಲಿನ ತೇವಾಂಶ ಕಡಿಮೆಯಾಗಿರುವುದರಿಂದ ಭೂಮಿ ವೇಗವಾಗಿ ಬಿಸಿಯಾಗುತ್ತಿದೆ.
ಕರ್ನಾಟಕದಲ್ಲಿ ಮುಂದಿನ ವಾರವೂ ಬಿಸಿಲಿನ ತೀವ್ರತೆ
ಮುಂದಿನ ಒಂದು ವಾರ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದೆ. ಇನ್ನೂ 1–3 ಡಿಗ್ರಿ ಸೆಲ್ಶಿಯಸ್ವರೆಗೆ ತಾಪಮಾನ ಏರಿಕೆಯಾಗಬಹುದು. ಸೆಪ್ಟೆಂಬರ್ 16ರ ಬಳಿಕ ಮಳೆ ಪ್ರಮಾಣ ಸುಧಾರಿಸುವ ಸಾಧ್ಯತೆ ಇದೆ ಎಂದು ಸಿ.ಎಸ್. ಪಾಟೀಲ್ ಹೇಳಿದ್ದಾರೆ.
ಕರ್ನಾಟಕದಲ್ಲಿ ತಾಪಮಾನ ಏರಿಕೆಗೆ ನಿಖರ ಕಾರಣ ಏನು?
ಎಲ್ ನಿನೋ ಪರಿಣಾಮದ ಜೊತೆಗೆ ಇಂಡಿಯನ್ ಓಷನ್ ಡೈಪೋಲ್ (IOD) ಮತ್ತು ಮ್ಯಾಡೆನ್-ಜೂಲಿಯನ್ ಆಸಿಲೇಷನ್ (MJO) ಸೇರಿದಂತೆ ಪ್ರಾದೇಶಿಕ ಹವಾಮಾನ ವ್ಯವಸ್ಥೆಗಳು ದುರ್ಬಲವಾಗಿರುವುದೂ ಮಳೆ ಕಡಿಮೆಯಾಗಲು ಕಾರಣವಾಗಿದೆ. ಈ ವ್ಯವಸ್ಥೆಗಳು ಸದ್ಯ ಮಳೆಗೆ ಪೂರಕವಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದೆ.
ಬೆಂಗಳೂರಿನಲ್ಲಿ ಸಾಮಾನ್ಯಕ್ಕಿಂತ 4 ಡಿಗ್ರಿ ಹೆಚ್ಚು ಉಷ್ಣಾಂಶ
ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಗರಿಷ್ಠ ತಾಪಮಾನ ಸುಮಾರು 32–33 ಡಿಗ್ರಿ ಸೆಲ್ಶಿಯಸ್ ದಾಖಲಾಗುತ್ತಿದೆ. ಈ ಅವಧಿಯಲ್ಲಿ (ಅಂದರೆ ಸೆಪ್ಟೆಂಬರ್ ಸಮಯ) ಬೆಂಗಳೂರಿನ ಸಾಮಾನ್ಯ ಗರಿಷ್ಠ ತಾಪಮಾನ 28–29 ಡಿಗ್ರಿ ಸೆಲ್ಶಿಯಸ್ ಆಗಿದ್ದು, ಹೀಗಾಗಿ ನಗರದಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಸುಮಾರು 4 ಡಿಗ್ರಿ ಸೆಲ್ಶಿಯಸ್ ಹೆಚ್ಚಾಗಿದೆ.
ಮಳೆಗಾಲದಲ್ಲೇ ಸುಡಲಿದೆ ಉತ್ತರ ಕರ್ನಾಟಕ!
ಉತ್ತರ ಒಳನಾಡು ಕರ್ನಾಟಕದಲ್ಲಿ ತಾಪಮಾನ ಏರಿಕೆ ಇನ್ನಷ್ಟು ತೀವ್ರವಾಗಿದೆ. ಕಲಬುರಗಿಯಲ್ಲಿ ಸುಮಾರು 36 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದ್ದು, ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ 4–5 ಡಿಗ್ರಿ ಸೆಲ್ಶಿಯಸ್ ಹೆಚ್ಚಿನ ತಾಪಮಾನ ದಾಖಲಾಗಿದೆ. ದಕ್ಷಿಣ ಒಳನಾಡು ಕರ್ನಾಟಕದಲ್ಲಿಯೂ ತಾಪಮಾನ ಸಾಮಾನ್ಯಕ್ಕಿಂತ ಸುಮಾರು 4 ಡಿಗ್ರಿ ಸೆಲ್ಶಿಯಸ್ ಹೆಚ್ಚಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಶೇ 26 ಮಳೆ ಕೊರತೆ
ಈ ವರ್ಷ ಇದುವರೆಗೆ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಸುಮಾರು ಶೇ 26ರಷ್ಟು ಕಡಿಮೆ ಮಳೆಯಾಗಿದೆ. ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಮುಂದುವರಿದಿದ್ದು, ಬೆಂಗಳೂರಿನಲ್ಲಿ ಮಾತ್ರ ಮಳೆ ಪ್ರಮಾಣ ಸಾಮಾನ್ಯಕ್ಕಿಂತ ಸುಮಾರು ಶೇ 40–50ರಷ್ಟು ಕಡಿಮೆಯಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.
ಸೆಪ್ಟೆಂಬರ್ 11, 12, 14ರಂದು ಬೆಂಗಳೂರಿಗೆ ತುಂತುರು ಮಳೆ ಮುನ್ಸೂಚನೆ
#GBA ಮಳೆ ನಕ್ಷೆ: 08th ಸೆಪ್ಟೆಂಬರ್ 2026 8.30AM ರಿಂದ 09th ಸೆಪ್ಟೆಂಬರ್ 2026ರ 8.30AM ರವರೆಗೆ, ಅತ್ಯಧಿಕ 12.5ಮಿಮೀ ಮಳೆ @ಬೆಂಗಳೂರು_ಬೊಮ್ಮನಹಳ್ಳಿ_ಬೇಗೂರು.#KSNDMC #ಮುಂಗಾರುಮಳೆ #ಸುರಕ್ಷಿತವಾಗಿರಿ #ಮುನ್ನೆಚ್ಚರಿಕೆವಹಿಸಿ@KarnatakaVarthe #BengaluruRains pic.twitter.com/3ZeQ6jkJHf
— Karnataka State Natural Disaster Monitoring Centre (@KarnatakaSNDMC) September 9, 2026
ಒಣಹವೆ ಮುಂದುವರಿದಿದ್ದರೂ ಬೆಂಗಳೂರಿನಲ್ಲಿ ಸೆಪ್ಟೆಂಬರ್ 11, 12 ಮತ್ತು 14ರಂದು ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಆದರೆ ರಾಜ್ಯದಲ್ಲಿ ಹೆಚ್ಚು ಮಳೆ ಸೆಪ್ಟೆಂಬರ್ 16ರ ಬಳಿಕ ಆಗುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಒಂದು ವಾರ ಬಿಸಿಲಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ಬಳಿಕ ಮಳೆ ಚಟುವಟಿಕೆ ಸುಧಾರಿಸುವ ನಿರೀಕ್ಷೆಯಿದೆ.
ಮುಂದಿನ ತಿಂಗಳುಗಳಲ್ಲೂ ತಾಪಮಾನ ಏರಿಕೆ ಸಾಧ್ಯತೆ
ಜಲಾಶಯಗಳು, ಕೆರೆಗಳು ಹಾಗೂ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿರುವುದು ಮತ್ತು ಸಸ್ಯವರ್ಗದ ಪ್ರಮಾಣ ಇಳಿಕೆಯಾಗಿರುವುದು ಮುಂದಿನ ತಿಂಗಳುಗಳಲ್ಲಿಯೂ ತಾಪಮಾನ ಹೆಚ್ಚಾಗಲು ಕಾರಣವಾಗಬಹುದು ಎಂದು ಪಾಟೀಲ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:22 am, Wed, 9 September 26




