ಓರ್ವ ವ್ಯಕ್ತಿ 19 ಖಾತೆಗಳ ಮೂಲಕ 11.48 ಕೋಟಿ ರೂ ವ್ಯವಹಾರ: ಪೊಲೀಸರ ರೋಚಕ ಕಾರ್ಯಚರಣೆ
ಶಿವಮೊಗ್ಗ ಸೈಬರ್ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸುವ ಮೂಲಕ ಆನ್ಲೈನ್ ವಂಚಕನನ್ನು ಬಂಧಿಸಿದ್ದಾರೆ. ವಿವಿಧ ಬ್ಯಾಂಕ್ಗಳಲ್ಲಿ ಬಳಕೆ ಆಗದ 19 ಖಾತೆಗಳನ್ನು ದುರ್ಬಳಿಕೆ ಮಾಡಿಕೊಂಡು ಆ ಮೂಲಕ ಕೋಟ್ಯಂತರ ರೂ ವ್ಯವಹಾರ ಮಾಡಿರುವುದು ಬೆಳಕಿಗೆ ಬಂದಿದೆ. ಸೈಬರ್ ವಂಚಕರ ಜೊತೆ ಸಂಪರ್ಕ ಹೊಂದಿದ್ದ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಶಿವಮೊಗ್ಗ, ಫೆಬ್ರವರಿ 09: ಶಿವಮೊಗ್ಗ (shivamogga) ಸೈಬರ್ ಪೊಲೀಸರು ಕಾರ್ಯಾಚರಣೆ ನಡೆಸಿ ಆನ್ಲೈನ್ ವಂಚಕ (cyber crime) ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶರತ್ ಕುಮಾರ್ ಕೆ ಬಂಧಿತ ಆರೋಪಿ. ಸದ್ಯ ಬಂಧಿತನಿಂದ ಬಳಕೆ ಆಗದ ಬೇರೆ ಬೇರೆ ಜನರ ವಿವಿಧ ಬ್ಯಾಂಕ್ಗಳ 18 ಪಾಸ್ ಬುಕ್, 07 ಚೆಕ್ ಬುಕ್, 25 ಎಟಿಎಂ ಕಾರ್ಡ್, ಎರಡು ಮೊಬೈಲ್ ಸೇರಿದಂತೆ ಎರಡು ಕ್ಯೂ ಆರ್ ಕೋಡ್ ಸ್ಕ್ಯಾನರ್ ಸೀಜ್ ಮಾಡಿದ್ದಾರೆ. ಸೈಬರ್ ವಂಚನೆ ಕೇಸ್ನಲ್ಲಿ ಆರೋಪಿಗೆ ಸದ್ಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
19 ಖಾತೆ, 96ಕ್ಕೂ ಹೆಚ್ಚು ಪ್ರಕರಣ, 55.43 ಕೋಟಿ ರೂ ವ್ಯವಹಾರ
ನಿತ್ಯ ಒಂದಲ್ಲಾ ಒಂದು ಆನ್ಲೈನ್ ವಂಚನೆ ಪ್ರಕರಣಗಳು ದಾಖಲಾಗುತ್ತಿವೆ. ಜನರು ಯಾವುದೋ ಆಮಿಷಕ್ಕೊಳಗಾಗಿ ತಮ್ಮ ಖಾತೆಯಿಂದ ಲಕ್ಷಾಂತರ ರೂ ಕಳೆದುಕೊಳ್ಳುತ್ತಾರೆ. ಎಲ್ಲೋ ದೂರದಲ್ಲಿ ಕುಳಿತು ಜನರನ್ನು ವಂಚನೆ ಮಾಡುವ ದೊಡ್ಡ ಜಾಲವೇ ಇದೆ. ಈ 19 ಖಾತೆಗಳ ಕುರಿತು ದೇಶದಲ್ಲಿ 96ಕ್ಕೂ ಹೆಚ್ಚು ಪ್ರಕರಣಗಳಿವೆ. ಈ ಖಾತೆಗಳ ಮೂಲಕ 55.43 ಕೋಟಿ ರೂ ಹಣಕಾಸಿನ ವ್ಯವಹಾರ ಆಗಿದೆ.
ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವರ್ಗಾವಣೆ: ಏನಿದು ಹಣದ ರಹಸ್ಯ?
ಇತ್ತ ಶಿವಮೊಗ್ಗ ಸೈಬರ್ ಪೊಲೀಸರಿಗೆ ಅನೇಕ ಆನ್ಲೈನ್ ವಂಚನೆ ಪ್ರಕರಣಗಳ ಬಗ್ಗೆ ದೂರು ಬಂದಿದ್ದವು. ಸೈಬರ್ ಪೊಲೀಸ್ ತಂಡವು ಈ ವಂಚಕನ ಬೆನ್ನುಬಿದ್ದಿತ್ತು. ಶಿವಮೊಗ್ಗ ಹಳೇ ತುಂಗಾ ನಗರದ ಶರತ್ ಕುಮಾರ್ ಎಂಬ ವ್ಯಕ್ತಿ ಸೈಬರ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಓದಿದ್ದು ಕೇವಲ ಎಸ್ಎಸ್ಎಲ್ಸಿ ಮಾತ್ರ. ತನ್ನ ಬುದ್ಧಿವಂತಿಕೆಯಿಂದ ಬಳಕೆ ಮಾಡದ 19 ವಿವಿಧ ಬ್ಯಾಂಕ್ಗಳ ಖಾತೆಯನ್ನು ತಾನು ಬಳಕೆ ಮಾಡಿದ್ದಾನೆ. ಈ ಖಾತೆಗಳನ್ನು ತನ್ನದ ಎಂದು ನಿರ್ವಹಣೆ ಮಾಡಿದ್ದಾನೆ. ಈ ವಿವಿಧ 19 ಖಾತೆಗಳಿಂದ ಈತ 11.48 ಕೋಟಿ ರೂ ಹಣ ವರ್ಗಾವಣೆ ಮಾಡಿದ್ದಾನೆ.
19 ವಿವಿಧ ಬ್ಯಾಂಕ್ ಖಾತೆದಾರರನ್ನು ತನ್ನ ಬುದ್ದಿವಂತಿಕೆಯಿಂದ ಬಳಕೆ ಮಾಡಿಕೊಂಡಿದ್ದಾನೆ. ಹೀಗೆ ಯಾವುದೇ ಹಣಕಾಸಿನ ವ್ಯವಹಾರ ಇರದೇ ಇರುವ 19 ಖಾತೆಗಳನ್ನು ಈತ ಗುರುತಿಸಿದ್ದಾನೆ. ಬಳಿಕ ಅವರಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಅವರಿಂದ ಪಾಸ್ ಬುಕ್ ಮತ್ತು ಬ್ಯಾಂಕ್ ಕೊಟ್ಟಿರುವ ಸಿಮ್ಗಳನ್ನು ಪಡೆದಿದ್ದಾನೆ. ಬಡ ಮತ್ತು ಖಾತೆ ಬಳಕೆ ಮಾಡಲು ಬಾರದ ಅನಕ್ಷರಸ್ಥರನ್ನು ಈತ ಟಾರ್ಗೆಟ್ ಮಾಡಿದ್ದ. ಹೀಗೆ 19 ಖಾತೆಗಳನ್ನು ಈತ ಆಪರೇಟ್ ಮಾಡುತ್ತಿದ್ದ.
ಲಕ್ಷಾಂತರ ರೂ ವರ್ಗಾವಣೆ
ದೇಶದಲ್ಲಿ ಅನೇಕ ಆನ್ಲೈನ್ ದೋಖಾ ಕೇಸ್ಗಳು ನಡೆದಿವೆ. ಈ ಕೇಸ್ಗಳಲ್ಲಿ ಬಳಕೆ ಮಾಡಿದ್ದು ಇದೇ 19 ಖಾತೆಗಳು. ಸದ್ಯ ಸೈಬರ್ ಪೊಲೀಸರು ವಂಚನೆ ಕೇಸ್ಗಳ ತನಿಖೆ ಸಂದರ್ಭದಲ್ಲಿ ಶರತ್ ಕುಮಾರ್ ವಂಚನೆ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ. ಈತ ಮತ್ತೊಬ್ಬರ ಖಾತೆ ಬಳಕೆ ಮಾಡಿ ಅವರ ಖಾತೆಯಲ್ಲಿ ಲಕ್ಷಾಂತರ ರೂ ಹಣದ ವರ್ಗಾವಣೆ ಮಾಡಿದ್ದಾನೆ. ಈ ವಿಷಯ ಖಾತೆದಾರರನಿಗೆ ಗೊತ್ತಾಗುತ್ತಿದ್ದಂತೆ ಆತ ಶಾಕ್ ಆಗಿದ್ದ. ಮೋಸ ಹೋದ ವ್ಯಕ್ತಿಯೂ ಸೈಬರ್ ಪೊಲೀಸರಿಗೆ ದೂರು ಕೊಟ್ಟಿದ್ದ. ಸದ್ಯ ಸೈಬರ್ ಪೊಲೀಸರು ಆನ್ಲೈನ್ ದೋಖಾ ಮಾಡುತ್ತಿದ್ದ ಶರತ್ ಕುಮಾರ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಾತೆ ನೀಡಿವರಿಗೂ ಸಂಕಷ್ಟ
ಓದಿದ್ದು ಎಸ್ಎಸ್ಎಲ್ಸಿ, ಈತ ವ್ಯವಹಾರ ಮಾಡಿದ್ದು ಮಾತ್ರ ಕೋಟಿ ಕೋಟಿ. ಯಾರದೋ ದುಡ್ಡನ್ನು ಈತ ಮತ್ತು ಈತನ ವಂಚಕರ ಜಾಲ ಯಲ್ಲಮ್ಮನ ಜಾತ್ರೆ ಮಾಡಿದೆ. ಈಗ ಒಬ್ಬ ವಂಚಕ ಬಲೆಗೆ ಬಿದ್ದಿದ್ದಾನೆ. 19 ಖಾತೆ, 55 ಕೋಟಿಗೂ ಅಧಿಕ ವ್ಯವಹಾರದ ನಂಟಿನ ತನಿಖೆ ಚುರುಗೊಂಡಿದೆ. ಒಂದಿಷ್ಟು ಹಣದಾಸೆಗೆ ಖಾತೆ ವ್ಯವಹಾರವನ್ನು ಬಿಟ್ಟುಕೊಟ್ಟ ಖಾತೆದಾರರು ಈಗ ಸಂಕಷ್ಟಕ್ಕೆ ಸಿಲುಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:56 pm, Mon, 9 February 26