TV9 Kannada News Live: ಬೆಳಗಾವಿ ವಂಚನೆ ಪ್ರಕರಣದಲ್ಲಿ ನೂರಾರು ಕೋಟಿ ಹಣ ಪತ್ತೆ! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು
ಬೆಳಗಾವಿಯ 4,500 ಕೋಟಿ ರೂ. ಮಹಾವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ, ಆರೋಪಿಯ 15 ಖಾತೆಗಳನ್ನು ಫ್ರೀಜ್ ಮಾಡಿದೆ. ಇತ್ತ ವಾರದಲ್ಲೇ ಎರಡನೇ ಬಾರಿ ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗಿದ್ದು ವಾಹನ ಸವಾರರು ಕಂಗಾಲಾಗಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನದ ಲಾಹೋರ್ನಲ್ಲಿ ರಸ್ತೆಗಳಿಗೆ ಹಳೆಯ ಹಿಂದೂ ಮತ್ತು ಸಿಖ್ ಹೆಸರುಗಳನ್ನು ಮರುಸ್ಥಾಪಿಸುವ ಐತಿಹಾಸಿಕ ಬದಲಾವಣೆ ನಡೆದಿದೆ. ಈ ಹೊತ್ತಿನ ಪ್ರಮುಖ ಸುದ್ದಿಗಳ ಸಮಗ್ರ ವರದಿ ಇಲ್ಲಿದೆ.

ಬೆಂಗಳೂರು, ಮೇ 19: ಬೆಳಗಾವಿಯ 4,500 ಕೋಟಿ ರೂ. ಮಹಾವಂಚನೆ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ, ನೂರಾರು ಕೋಟಿ ರೂ. ಪತ್ತೆ ಮಾಡಿದೆ. ಇತ್ತ ವಾರದಲ್ಲೇ ಎರಡನೇ ಬಾರಿ ಇಂಧನ (Petrol) ದರ ಏರಿಕೆಯಾಗಿದ್ದು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇವೆಲ್ಲದರ ನಡುವೆ, ಪಾಕಿಸ್ತಾನದ ಲಾಹೋರ್ನಲ್ಲಿ ಐತಿಹಾಸಿಕ ಸ್ಥಳಗಳಿಗೆ ಹಳೆಯ ಹಿಂದೂ ಮತ್ತು ಸಿಖ್ ಹೆಸರುಗಳನ್ನು ಮರುಸ್ಥಾಪಿಸುವ ಮಹತ್ವದ ಬದಲಾವಣೆ ನಡೆದಿದೆ.
ಮುಖ್ಯಾಂಶಗಳು
ಬೆಳಗಾವಿ ವಂಚನೆ ಪ್ರಕರಣದಲ್ಲಿ ಆರೋಪಿಯ ಹದಿನೈದು ಬ್ಯಾಂಕ್ ಖಾತೆಗಳನ್ನು ಸಿಐಡಿ ಫ್ರೀಜ್ ಮಾಡಿದೆ. ವಾರದಲ್ಲಿ ಎರಡನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪಾಕಿಸ್ತಾನದ ಲಾಹೋರ್ ರಸ್ತೆಗಳಿಗೆ ಹಳೆಯ ಹಿಂದೂ ಹಾಗೂ ಸಿಖ್ ಹೆಸರು ಮರುಸ್ಥಾಪಿಸಲಾಗುತ್ತಿದೆ.
ಆರೋಪಿ ಶಿವಾನಂದ ನೀಲಣ್ಣವರ್ಗೆ ಸೇರಿದ 15 ಬ್ಯಾಂಕ್ ಖಾತೆಗಳು ಫ್ರೀಜ್!
ಜಿಲ್ಲೆಯಲ್ಲಿ ನಡೆದಿರುವ ಬರೋಬ್ಬರಿ 4,500 ಕೋಟಿ ರೂ. ವಂಚನೆ ಆರೋಪ ಪ್ರಕರಣದ ತನಿಖೆಯನ್ನು ಸಿಐಡಿ (CID) ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಶಿವಾನಂದ ನೀಲಣ್ಣವರ್ಗೆ ಸೇರಿದ 15 ಬ್ಯಾಂಕ್ ಖಾತೆಗಳನ್ನು ಅಧಿಕಾರಿಗಳು ಪತ್ತೆಹಚ್ಚಿ ಫ್ರೀಜ್ ಮಾಡಿದ್ದಾರೆ. ಆಘಾತಕಾರಿ ವಿಷಯವೆಂದರೆ, ಈ ಪ್ರತಿಯೊಂದು ಖಾತೆಯಲ್ಲೂ ತಲಾ 100 ಕೋಟಿ, 80 ಕೋಟಿ, 50 ಕೋಟಿ ಹಾಗೂ 20 ಕೋಟಿ ರೂ.ವರೆಗೂ ಹಣ ಪತ್ತೆಯಾಗಿದೆ. ಸಾವಿರಾರು ಕೋಟಿ ರೂಪಾಯಿ ವರ್ಗಾವಣೆಯಾಗುತ್ತಿದ್ದರೂ ಇಡಿ (ED) ಅಥವಾ ಐಟಿ (IT) ಇಲಾಖೆಯ ಗಮನಕ್ಕೆ ತರದೆ, ಬ್ಯಾಂಕ್ ಖಾತೆಗಳನ್ನು ಯಾರಿಗೂ ಕಾಣದಂತೆ ಮುಚ್ಚಿಟ್ಟಿದ್ದ ಅಧಿಕಾರಿಗಳ ನಡೆ ಸಂಶಯ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, 5 ಪ್ರಮುಖ ಬ್ಯಾಂಕುಗಳಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ 4,500 ಕೋಟಿ ರೂ. ವಂಚನೆ ಕೇಸ್: ಆರೋಪಿ ಶಿವಾನಂದ ನೀಲಣ್ಣವರ್ 10 ದಿನ ಸಿಐಡಿ ಕಸ್ಟಡಿಗೆ
ಒಂದೇ ವಾರದಲ್ಲಿ ಎರಡನೇ ಬಾರಿ ಇಂಧನ ದರ ಏರಿಕೆ!
ದೇಶಾದ್ಯಂತ ಗ್ರಾಹಕರಿಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮತ್ತೊಂದು ಬೆಲೆ ಏರಿಕೆಯ ಶಾಕ್ ನೀಡಿವೆ. ಕಳೆದ ಶುಕ್ರವಾರವಷ್ಟೇ (ಮೇ 15) ಇಂಧನ ದರ 3 ರೂ. ಏರಿಕೆಯಾಗಿದ್ದ ಬೆನ್ನಲ್ಲೇ, ಇಂದು ಮುಂಜಾನೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಪ್ರತಿ ಲೀಟರ್ಗೆ ಸರಾಸರಿ 94 ಪೈಸೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ 4 ದಿನಗಳ ಹಿಂದೆ 106.17 ರೂ. ಇದ್ದ ಪೆಟ್ರೋಲ್ ಬೆಲೆ 107.16 ರೂ. ಗೆ ಹಾಗೂ 94.10 ರೂ. ಇದ್ದ ಡೀಸೆಲ್ ಬೆಲೆ 95.03 ರೂ. ಗೆ ತಲುಪಿದೆ. ಒಂದೇ ವಾರದಲ್ಲಿ ಎರಡು ಬಾರಿ ರೇಟ್ ಜಾಸ್ತಿ ಆಗಿರುವುದರಿಂದ ಸಾರ್ವಜನಿಕರ ಜೇಬಿಗೆ ಭಾರಿ ಕತ್ತರಿ ಬಿದ್ದಂತಾಗಿದೆ.
ಇದನ್ನೂ ಓದಿ ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ! ಬೆಳ್ಳಂಬೆಳಗ್ಗೆ ಗ್ರಾಹಕರಿಗೆ ಶಾಕ್
ಪಾಕಿಸ್ತಾನದಲ್ಲಿ ಲಾಹೋರ್ ರಸ್ತೆಗಳಿಗೆ ಹಳೇ ಹಿಂದೂ-ಸಿಖ್ ಹೆಸರು
ಭಾರತ ಮತ್ತು ಪಾಕಿಸ್ತಾನ ವಿಭಜನೆಯಾಗಿ 79 ವರ್ಷಗಳ ನಂತರ, ಪಾಕಿಸ್ತಾನ ಸರ್ಕಾರವು ಲಾಹೋರ್ನ ಇತಿಹಾಸವನ್ನು ಪುನಃ ಬರೆಯುವ ಮಹತ್ವದ ಕಾರ್ಯಕ್ಕೆ ಕೈಹಾಕಿದೆ. ದಶಕಗಳ ಹಿಂದೆ ಇಸ್ಲಾಮೀಕರಣದ ಭಾಗವಾಗಿ ಬದಲಾಗಿದ್ದ ರಸ್ತೆಗಳು ಮತ್ತು ಐತಿಹಾಸಿಕ ಸ್ಥಳಗಳಿಗೆ ಅವುಗಳ ಮೂಲ ಹಿಂದೂ, ಸಿಖ್ ಮತ್ತು ಬ್ರಿಟಿಷ್ ಯುಗದ ಹೆಸರುಗಳ ಸೈನ್ ಬೋರ್ಡ್ಗಳನ್ನು ಮರುಸ್ಥಾಪಿಸಲಾಗುತ್ತಿದೆ. ಕೇವಲ ಎರಡು ತಿಂಗಳಲ್ಲೇ 9 ಪ್ರಮುಖ ಸ್ಥಳಗಳು ತಮ್ಮ ಮೂಲ ಗುರುತನ್ನು ಪಡೆದಿವೆ. ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಪಂಜಾಬ್ ಸಿಎಂ ಮರ್ಯಮ್ ನವಾಜ್ ನೇತೃತ್ವದಲ್ಲಿ ‘ಲಾಹೋರ್ ಅಥಾರಿಟಿ ಫಾರ್ ಹೆರಿಟೇಜ್ ರಿವೈವಲ್’ ಸಂಸ್ಥೆಯು 50 ಬಿಲಿಯನ್ ಪಾಕಿಸ್ತಾನಿ ರೂಪಾಯಿ ವೆಚ್ಚದಲ್ಲಿ ಈ ನಗರ ಸಂರಕ್ಷಣಾ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:47 am, Tue, 19 May 26

