ಕ್ಲಿಷ್ಟಕರ ಖನಿಜಗಳನ್ನು ಆಯುಧವಾಗಿಸುವುದು ಜಾಗತಿಕ ಪ್ರಗತಿಗೆ ಅಡ್ಡಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಎಚ್ಚರಿಕೆ
ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಷಣ ಮಾಡಿದ ನರೇಂದ್ರ ಮೋದಿ, ತಂತ್ರಜ್ಞಾನ ಮತ್ತು ಖನಿಜಗಳನ್ನು ಅಸ್ತ್ರವನ್ನಾಗಿಸಿಕೊಳ್ಳಬಾರದು ಎಂದು ಎಚ್ಚರಿಸಿದ್ದಾರೆ. ಇವು ಕೆಲವೇ ದೇಶಗಳಿಗೆ ಸೀಮಿತವಾಗದೆ ಉದಯೋನ್ಮುಖ ಆರ್ಥಿಕತೆಗಳಿಗೂ ಲಭ್ಯ ಆಗಬೇಕು ಎಂದು ಮೋದಿ ಅವರು ಸಲಹೆ ನೀಡಿದ್ದಾರೆ. ಬ್ರಿಕ್ಸ್ ದೇಶಗಳ ಮಧ್ಯೆ ಪ್ರಬಲ ಸಹಕಾರ ಇರಬೇಕು ಎಂದೂ ಕರೆ ನೀಡಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 13: ಕ್ಲಿಷ್ಟಕರ ಖನಿಜಗಳು (Critical Minerals) ಮತ್ತು ತಂತ್ರಜ್ಞಾನವನ್ನು ಆಯುಧವಾಗಿಸುವುದರಿಂದ ಜಾಗತಿಕ ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ (BRICS) ಶೃಂಗಸಭೆಯ 2ನೇ ದಿನದ ಅಧಿವೇಶನದಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು, ಬ್ರಿಕ್ಸ್ ದೇಶಗಳು ಜಾಗತಿಕ ಸವಾಲುಗಳನ್ನು ಎದುರಿಸಲು ಪರಸ್ಪರ ಪೂರ್ಣ ಸಹಕಾರ ಹೊಂದಿರಬೇಕು ಎಂದು ಕರೆ ನೀಡಿದ್ದಾರೆ.
ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯು ‘ಸ್ಥಿರತೆ’ (Resilience), ‘ಆವಿಷ್ಕಾರ’ (Innovation), ‘ಸಹಕಾರ’ (Cooperation) ಮತ್ತು ‘ಸುಸ್ಥಿರತೆ’ (Sustainability) ಎಂಬ ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ಗಮನ ಹರಿಸಿದೆ ಎಂದು ಪ್ರಧಾನಿಗಳು ತಮ್ಮ ಭಾಷಣದಲ್ಲಿ ಹೇಳಿದರು.
ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆ: ಮೋದಿ ಆಯೋಜಿಸಿದ್ದ ಭೋಜನಕೂಟದಿಂದ ದೂರ ಉಳಿದ ಚೀನಾ ಅಧ್ಯಕ್ಷ ಷಿ
ಪೂರೈಕೆ ಸರಪಳಿ ಹಾಗೂ ಆರೋಗ್ಯ ತುರ್ತುಸ್ಥಿತಿ: ಸಾಂಕ್ರಾಮಿಕ ರೋಗಗಳು ಮತ್ತು ಭೌಗೋಳಿಕ ರಾಜಕೀಯ ಸಂಘರ್ಷಗಳಿಂದ ಕಚ್ಚಾವಸ್ತುಗಳ ಪೂರೈಕೆ ಸರಪಳಿ (Supply Chain) ಬಾಧಿತವಾಗುತ್ತಿದೆ. ಇದನ್ನು ಎದುರಿಸಲು ಬ್ರಿಕ್ಸ್ ಸಂಯೋಜಿತ ಮುನ್ನೆಚ್ಚರಿಕೆ ವ್ಯವಸ್ಥೆ ಮತ್ತು ಬಲವಾದ ಪೂರೈಕೆ ಜಾಲವನ್ನು ರೂಪಿಸಲು ಒಪ್ಪಿಗೆ ಸೂಚಿಸಲಾಗಿದೆ ಎಂದವರು ತಿಳಿಸಿದರು.
ತಂತ್ರಜ್ಞಾನ ಹಂಚಿಕೆ, ಸ್ಟಾರ್ಟಪ್, ರೈತರಿಗೆ ಪ್ರೋತ್ಸಾಹ
ತಂತ್ರಜ್ಞಾನ ಹಾಗೂ ಪ್ರಮುಖ ಖನಿಜಗಳು ಕೇವಲ ಕೆಲವು ದೇಶಗಳ ಹಿತಾಸಕ್ತಿಗೆ ಸೀಮಿತವಾಗದೆ, ಜಾಗತಿಕ ದಕ್ಷಿಣ (Global South) ರಾಷ್ಟ್ರಗಳಿಗೂ ಸುಲಭವಾಗಿ ತಲುಪುವಂತಾಗಬೇಕು. ಬ್ರಿಕ್ಸ್ ಸ್ಟಾರ್ಟ್ಅಪ್ ಆವಿಷ್ಕಾರ ನಿಧಿ (BRICS Startup Innovation Fund) ಮತ್ತು ಡಿಜಿಟಲ್ ಕೃಷಿ ಜಾಲದ ಮೂಲಕ ಕೃತಕ ಬುದ್ಧಿಮತ್ತೆ (AI) ಹಾಗೂ ಆಧುನಿಕ ತಂತ್ರಜ್ಞಾನವನ್ನು ಸಾಮಾನ್ಯ ರೈತರಿಗೆ ತಲುಪಿಸಲು ಒತ್ತು ನೀಡಲಾಗಿದೆ ಎಂದು ನರೇಂದ್ರ ಮೋದಿ ಮಾಹಿತಿ ನೀಡಿದರು.
ಇದನ್ನೂ ಓದಿ: ಬ್ರಿಕ್ಸ್ ಕುತೂಹಲ ಮೂಡಿಸಿರುವ ಮೋದಿ-ತೋಕಾಯೇವ್ ಭೇಟಿ; ಮಧ್ಯ ಏಷ್ಯಾಗೆ ಭಾರತದ ದಾರಿ ಸುಲಭಗೊಳ್ಳುವ ನಿರೀಕ್ಷೆ
ಆರ್ಥಿಕ ಸವಾಲುಗಳು ಮತ್ತು ರಾಜಕೀಯ ಉದ್ವಿಗ್ನತೆಗಳ ನಡುವೆ ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸಲು ಸದಸ್ಯ ರಾಷ್ಟ್ರಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮೋದಿ ಬ್ರಿಕ್ಸ್ ಸಮಿಟ್ನಲ್ಲಿ ಮಾಡಿದ ಭಾಷಣದಲ್ಲಿ ಪ್ರತಿಪಾದಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




