‘ಪ್ರತಿಯೊಬ್ಬರ ಮೇಲಿನ ಸಾತ್ವಿಕ ಪ್ರೇಮವೇ ಹಿಂದೂವಿನ ಮೂಲ ಸ್ವಭಾವ’: ಲಂಡನ್ನಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ಪ್ರಕೃತಿ ಮೇಲಿನ ಗೌರವವೇ ಹಿಂದೂ ಸಂಸ್ಕೃತಿ. ಪ್ರತಿಯೊಬ್ಬರ ಮೇಲೆ ಸಾತ್ವಿಕ ಪ್ರೇಮ ಹೊಂದಿರುವುದು ಹಿಂದೂವಿನ ಸಹಜ ಸ್ವಭಾವ ಎಂದು ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ. ಆರೆಸ್ಸೆಸ್ನ ಶತಾಬ್ದಿ ಆಚರಣೆಯ ಭಾಗವಾಗಿ ಬ್ರಿಟನ್ ಪ್ರವಾಸದಲ್ಲಿರುವ ಭಾಗವತ್, ಲಂಡನ್ನಲ್ಲಿ ಸೆಲಬ್ರೇಶನ್ ಆಫ್ ಒನ್ನೆಸ್ ಎನ್ನುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಲಂಡನ್, ಸೆಪ್ಟೆಂಬರ್ 6: “ಎಲ್ಲರ ಮೇಲಿನ ‘ಶುದ್ಧ ಸಾತ್ವಿಕ ಪ್ರೇಮ’ ಮತ್ತು ಪ್ರಕೃತಿಯ ಮೇಲಿನ ಗೌರವವೇ ಹಿಂದೂ ಸಂಸ್ಕೃತಿ ಹಾಗೂ ಪ್ರತಿಯೊಬ್ಬ ಹಿಂದೂವಿನ ಮೂಲ ಸ್ವಭಾವವಾಗಿದೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ. ಆರ್ಎಸ್ಎಸ್ನ ಶತಾಬ್ದಿ ಆಚರಣೆಯ ಭಾಗವಾಗಿ ಅಮೆರಿಕ ಮತ್ತು ಕೆನಡಾ ಪ್ರವಾಸ ಪೂರ್ಣಗೊಳಿಸಿ, ಬ್ರಿಟನ್ನ ಲಂಡನ್ನಲ್ಲಿ ಆಯೋಜಿಸಲಾಗಿದ್ದ ‘ಸೆಲೆಬ್ರೇಷನ್ ಆಫ್ ಒನ್ನೆಸ್’ (Celebration of Oneness) ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಂಘದ ಬಲ ‘ಸಾತ್ವಿಕ ಪ್ರೇಮ’: “ದ್ವೇಷ ಅಥವಾ ತೀವ್ರ ವಿರೋಧದ ಆಧಾರದ ಮೇಲೆ ಸಂಘ ಕಾರ್ಯನಿರ್ವಹಿಸುವುದಿಲ್ಲ. ಪ್ರತಿಯೊಬ್ಬರನ್ನೂ ಗೌರವಿಸುವ ‘ಶುದ್ಧ ಸಾತ್ವಿಕ ಪ್ರೇಮ’ವೇ ನಮ್ಮ ಕಾರ್ಯದ ಅಡಿಪಾಯ. ಸಮಾಜವನ್ನು ಒಂದಾಗಿ ಜೋಡಿಸುವುದು ಮತ್ತು ಸೇವಿಸುವುದು ಹಿಂದೂ ಧರ್ಮದ ಕಲ್ಪನೆಯಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ‘ಇಸ್ರೋ ಪ್ರಾಮುಖ್ಯತೆ ತಗ್ಗಲ್ಲ, ಖಾಸಗೀಕರಣವೂ ಆಗಲ್ಲ’- ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಹೆಚ್ಚು ಗುರುತರ ಜವಾಬ್ದಾರಿ?
ವಸುಧೈವ ಕುಟುಂಬಕಂ: ಹಿಂದೂ ಎಂಬ ಭಾವನೆ ಕೇವಲ ಒಂದು ನಿರ್ದಿಷ್ಟ ಗುಂಪಿಗೆ ಸೀಮಿತವಾಗಿಲ್ಲ. ಬದಲಿಗೆ ಕುಟುಂಬ, ಸಮಾಜ ಮತ್ತು ಇಡೀ ಮಾನವಕುಲವನ್ನು ಒಂದಾಗಿ ಕಾಣುವ ವಿಶಾಲ ಮನೋಭಾವವನ್ನು ಅದು ಪ್ರತಿನಿಧಿಸುತ್ತದೆ ಎಂದು ಮೋಹನ್ ಭಾಗವತ್ ಅವರು ಅಭಿಪ್ರಾಯಪಟ್ಟರು.
ಸಾಮಾಜಿಕ ಸೌಹಾರ್ದತೆಗೆ ಕರೆ: ಪ್ರತಿಯೊಬ್ಬರೂ ತಾವಿರುವ ದೇಶ ಮತ್ತು ಸಮಾಜದ ಏಳಿಗೆಗೆ ನಿಷ್ಕಾಮ ಸೇವೆಯ ಮೂಲಕ ಕೊಡುಗೆ ನೀಡಬೇಕು. ಪ್ರಕೃತಿಯ ಸಂರಕ್ಷಣೆ ಮತ್ತು ಕುಟುಂಬ ವ್ಯವಸ್ಥೆಯ ಬಲವರ್ಧನೆ ಪ್ರಸ್ತುತ ಜಾಗತಿಕ ಸವಾಲುಗಳಿಗೆ ಪರಿಹಾರವಾಗಿದೆ ಎಂದು ರಾ.ಸ್ವ.ಸಂಘದ ಸರಸಂಘಚಾಲಕರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬ್ರಿಟನ್ನ 310ಕ್ಕೂ ಹೆಚ್ಚು ವಿವಿಧ ಭಾರತೀಯ ಹಾಗೂ ಸಾಂಸ್ಕೃತಿಕ ಸಂಘಟನೆಗಳ ಪ್ರತಿನಿಧಿಗಳು ಮತ್ತು ಪ್ರಮುಖ ಸಮುದಾಯ ನಾಯಕರು ಭಾಗವಹಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




