- Kannada News Photo gallery Infosys Joined Hand With Anti National Force To Destabilise Indian Economy Alleged In RSS Mouthpiece Pachajanya
Infosys: ಆರ್ಥಿಕತೆ ಅಸ್ಥಿರಗೊಳಿಸಲು ದೇಶದ್ರೋಹಿಗಳ ಜತೆ ಕೈ ಜೋಡಿಸಿದ ಇನ್ಫೋಸಿಸ್ ಎಂದ ಪಾಂಚಜನ್ಯ; ಏನಿದು ವಿವಾದ?
ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ದೇಶದ್ರೋಹಿ ಶಕ್ತಿಗಳ ಜತೆ ಇನ್ಫೋಸಿಸ್ ಕೈಜೋಡಿಸಿದೆ ಎಂಬ ಆರೆಸ್ಸೆಸ್ ಮುಖವಾಣಿ ಪಾಂಚಜನ್ಯ ನಿಯತಕಾಲಿಕೆ ಸುತ್ತಲ ಬೆಳವಣಿಗೆ ಬಗ್ಗೆ ವಿವರಗಳು ಇಲ್ಲಿವೆ.
Updated on:Sep 06, 2021 | 12:36 PM

ಬೆಂಗಳೂರು ಮೂಲದ ಸಾಫ್ಟ್ವೇರ್ ಕಂಪೆನಿಯಾದ ಇನ್ಫೋಸಿಸ್ ಕಳೆದ ಕೆಲ ತಿಂಗಳಿಂದ ಸುದ್ದಿಯಲ್ಲಿದೆ. ಅದರಲ್ಲೂ ಆದಾಯ ತೆರಿಗೆ ಪೋರ್ಟಲ್ ಮತ್ತು ಜಿಎಸ್ಟಿ ಪೋರ್ಟಲ್ನ ಹೊಸ ವೆಬ್ಸೈಟ್ನಲ್ಲಿ ತಾಂತ್ರಿಕ ಸಮಸ್ಯೆ ಮೊದಲ ದಿನದಿಂದಲೇ ಕಾಣಿಸಿಕೊಂಡ ಮೇಲೆ ಇದು ಉದ್ಭವಿಸಿದೆ. ಏಕೆಂದರೆ ಆ ವೆಬ್ಪೋರ್ಟಲ್ ಅಭಿವೃದ್ಧಿಯ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದು ಇನ್ಫೋಸಿಸ್ ಕಂಪೆನಿ. ಅದಕ್ಕಾಗಿ ಭಾರತ ಸರ್ಕಾರ ಕೋಟ್ಯಂತರ ರೂಪಾಯಿಯ ಒಪ್ಪಂದ ಸಹ ಮಾಡಿಕೊಂಡಿತ್ತು. ಆದರೆ ಆ ವೆಬ್ಪೋರ್ಟಲ್ ಬಳಕೆಗೆ ಬಿಡುಗಡೆಯಾದ ದಿನದಿಂದಲೇ ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ. ಇದು ಒತ್ತಟ್ಟಿಗಿರಲಿ, ಈಗ ಅದಕ್ಕೆ ರಾಜಕೀಯ ಬಣ್ಣ ಬಂದಿದೆ. ರಾಷ್ಟ್ರೀಯ ಸ್ವಯಂ ಸೇವಕ್ ಸಂಘ್ (ಆರೆಸ್ಸೆಸ್) ಮುಖವಾಣಿ ಪಾಂಚಜನ್ಯದಿಂದ ಇನ್ಫೋಸಿಸ್ ಕಂಪೆನಿಯನ್ನು ಸಿಕ್ಕಾಪಟ್ಟೆ ಟೀಕಿಸಲಾಗಿದೆ. ಭಾರತದ ಆರ್ಥಿಕ ಹಿತಾಸಕ್ತಿಗೆ ಧಕ್ಕೆ ತರುವ ಉದ್ದೇಶದಿಂದ ದೇಶದ್ರೋಹಿ ಶಕ್ತಿಗಳ ಜತೆಗೂಡಿ ಇನ್ಫೋಸಸ್ ಹೀಗೆ ಮಾಡಿದೆ ಎಂದು ಪಾಂಚಜನ್ಯದಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್, ಈ ಲೇಖನವೇ ದೇಶವಿರೋಧಿ ಹಾಗೂ ಅತಿರೇಕದ್ದು ಎಂದಿದ್ದಾರೆ.

ಭಾರತದ ಬದಲಾವಣೆಯಲ್ಲಿ ಇನ್ಫೋಸಿಸ್ನಂಥ ಕಂಪೆನಿಯ ಪಾತ್ರವಿದೆ. ವಿಶ್ವದಲ್ಲಿ ಅದಕ್ಕೊಂದು ಸ್ಥಾನವಿದೆ. ಸರ್ಕಾರದ ಮೇಲಿನ ನಿಂದೆಯನ್ನು ವರ್ಗಾಯಿಸುವ ಪ್ರಯತ್ನ ಇದು. ಇದನ್ನು ಸಂಪೂರ್ಣವಾಗಿ ಖಂಡಿಸಬೇಕು ಎಂದು ಅವರು ಹೇಳಿದ್ದಾರೆ. ಅಂದಹಾಗೆ ಪಾಂಚಜನ್ಯ ಸಾಪ್ತಾಹಿಕದಿಂದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಕ್ಷಾ ರಾಮಯ್ಯ ಅವರನ್ನು ಸಹ ಟೀಕಿಸಲಾಗಿದೆ. ಪೋರ್ಟಲ್ಗಳಲ್ಲಿ ಹಲವು ಸಮಸ್ಯೆಗಳಿದ್ದು, ಬಳಕೆದಾರರು ನಾನಾ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಪೋರ್ಟಲ್ಗಳಲ್ಲಿ ಇರುವ ಗಂಭೀರ ದೋಷಗಳನ್ನು ಗಮನಿಸಿದರೆ ಇನ್ಫೋಸಿಸ್ನ ವಿಶ್ವಾರ್ಹತೆ ಪ್ರಶ್ನಾರ್ಹವಾಗಿದೆ ಎಂದು ಬರೆಯಲಾಗಿದೆ.

ಇಂಥ ಸಮಸ್ಯೆಗಳಿಂದ ಸರ್ಕಾರದ ಮೇಲಿರುವ ಸಾರ್ವಜನಿಕರ ನಂಬಿಕೆ ಮೇಲೆ ಪರಿಣಾಮ ಬೀರುತ್ತದೆ. ವಿದೇಶಗಳಲ್ಲಿ ಇಂಥ ಸೇವೆ ಒದಗಿಸುವುದರಲ್ಲಿ ಇನ್ಫೋಸಿಸ್ ಇಷ್ಟು ನಿರ್ಲಕ್ಷ್ಯ ವಹಿಸಲು ಸಾಧ್ಯವೇ? ಎಂದು ಪ್ರಶ್ನೆ ಮಾಡಲಾಗಿದೆ. ಈ ಲೇಖನಕ್ಕೆ, "ಖ್ಯಾತಿ ಮತ್ತು ಭಾರೀ ಹಾನಿ" ಎಂಬ ಶೀರ್ಷಿಕೆ ನೀಡಲಾಗಿದೆ. ಇನ್ಫೋಸಿಸ್ ಆಡಳಿತವು ಉದ್ದೇಶಪೂರ್ವಕವಾಗಿ ಭಾರತೀಯ ಆರ್ಥಿಕತೆಯನ್ನು ಅಸ್ಥಿರಗೊಳಿಸುವುದಕ್ಕೆ ಪ್ರಯತ್ನಿಸುತ್ತಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಹಲವು ತಜ್ಞರು ಸಾಮಾಜಿಕ ಮಾಧ್ಯಮದಲ್ಲಿ ಮುಕ್ತವಾಗಿ ತಮ್ಮ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಸೆಪ್ಟೆಂಬರ್ 5ನೇ ತಾರೀಕಿನ ಕವರ್ ಸ್ಟೋರಿಯಲ್ಲಿದೆ. ಈ ಲೇಖನದಲ್ಲಿ ವಾದಕ್ಕೆ ಪುಷ್ಟಿ ನೀಡುವುದಕ್ಕಾಗಿ, ಇನ್ಫೋಸಿಸ್ನಿಂದ ಈ ರೀತಿ ತಪ್ಪು ಮತ್ತೆ ಮತ್ತೆ ಆಗುತ್ತಿರುವುದೇ ಸಾಕ್ಷಿ ಎನ್ನಲಾಗಿದೆ.

ಕಾರ್ಪೊರೇಟ್ ವ್ಯವಹಾರಗಳ ವೆಬ್ಸೈಟ್ ಅನ್ನು ಸಹ ಇನ್ಫೋಸಿಸ್ ಸಿದ್ಧಪಡಿಸಿತು ಮತ್ತು ಅದು ಸಿದ್ಧವಾದ ಮೇಲೆ ಉದ್ಯಮಿಗಳು ಹಾಗೂ ವರ್ತಕರ ಬದುಕು ಸುಲಭ ಆಗುವ ಬದಲು ಮತ್ತೂ ದುರ್ಭರ ಆಯಿತು ಎಂದು ಲೇಖನದಲ್ಲಿ ಆರೋಪಿಸಿದೆ. ಭಾರತದ ಆರ್ಥಿಕ ಹಿತಾಸಕ್ತಿಗೆ ಹಾನಿ ಮಾಡುವುದರ ಸಲುವಾಗಿ ದೇಶ ವಿರೋಧಿ ಶಕ್ತಿಗಳು ಇನ್ಫೋಸಿಸ್ ಜತೆಗೂಡಿರುವ ಸಾಧ್ಯತೆ ಇದೆ ಎಂದು ಆರೋಪ ಮಾಡಲಾಗಿದೆ. ಸರ್ಕಾರದ ಹಲವು ಸೂಕ್ಷ್ಮ ವೆಬ್ಸೈಟ್ಗಳ ಗುತ್ತಿಗೆಯನ್ನು ಇನ್ಫೋಸಿಸ್ ಕಂಪೆನಿಯು ಅತ್ಯಂತ ಕಡಿಮೆ ಬಿಡ್ ಮಾಡಿ ಪಡೆದಿದೆ. ಲೇಖನದಲ್ಲಿ ಮುಂದುವರಿದು, ಅನುಮಾನಕ್ಕೆ ಇದು ಕೂಡ ಮುಖ್ಯ ಕಾರಣ. ಸರ್ಕಾರದ ಮುಖ್ಯ ಗುತ್ತಿಗೆಗಳನ್ನು ಕಂಪೆನಿಯು ಏಕಾಗಿ ಅಷ್ಟು ಕಡಿಮೆ ಬಿಡ್ಗೆ ಪಡೆಯುತ್ತಿದೆ? ಅದು ಜಿಎಸ್ಟಿ ಅಥವಾ ಆದಾಯ ತೆರಿಗೆ ಪೋರ್ಟಲ್ ಇರಲಿ, ಇವೆರಡರಲ್ಲಿನ ತಾಂತ್ರಿಕ ದೋಷಗಳು ತೆರಿಗೆ ಪಾವತಿದಾರರಿಹೆ ಆರ್ಥಿಕತೆಯಲ್ಲಿನ ವಿಶ್ವಾಸಾರ್ಹತೆ ಮುರಿದಿವೆ. ಭಾರತೀಉ ಆರ್ಥಿಕ ಹಿತಾಸಕ್ತಿಯನ್ನು ಇನ್ಫೋಸಿಸ್ ಮೂಲಕವಾಗಿ ದೇಶದ್ರೋಹಿ ಶಕ್ತಿಗಳು ಧಕ್ಕೆ ಮಾಡಲು ಪ್ರಯತ್ನಿಸುತ್ತಿವೆಯೇ? ಇದನ್ನು ಹೇಳಲು ನಮ್ಮ ಬಳಿ ಗಟ್ಟಿ ಸಾಕ್ಷ್ಯಗಳಿಲ್ಲ. ಆದರೆ ಕಂಪೆನಿಯ ಇತಿಹಾಸ ಮತ್ತು ಸನ್ನಿವೇಶ ನೋಡಿದರೆ, ಕೆಲ ವಾಸ್ತವಿಕ ಅಂಶಗಳು ಈ ಆರೋಪದಿಂದ ಗೊತ್ತಾಗುತ್ತದೆ ಎಂದು ಹೇಳಲಾಗಿದೆ.

ಇನ್ಫೋಸಿಸ್ನಿಂದ ನಕ್ಸಲರು, ಎಡಪಂಥೀಯರು, ತುಕ್ಡೆ ತುಕ್ಡೆ ಗ್ಯಾಂಗ್ ಬೆಂಬಲಿಸಲಾಗುತ್ತಿದೆ ಮತ್ತು ದೇಶದಲ್ಲಿ ಅಡತಡೆ ಒಡ್ಡುವ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಾಗಿದೆ ಎಂದು ಲೇಖನದಲ್ಲಿ ಆರೋಪ ಮಾಡಲಾಗಿದೆ. ಇನ್ಫೋಸಿಸ್ನಿಂದ ಸಾಫ್ಟ್ವೇರ್ ತಯಾರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರೂ ಜಾತಿ ದ್ವೇಷವನ್ನು ಬಿತ್ತುವ ಕೆಲವು ಸಂಸ್ಥೆಗಳು ಇನ್ಫೋಸಿಸ್ ದತ್ತಿ ನಿಧಿಯ ಫಲಾನುಭವಿಗಳಾಗಿವೆ. ಹೀಗೆ ದೇಶ ದ್ರೋಹಿ ಮತ್ತು ಅರಾಜಕತೆ ಸೃಷ್ಟಿಸುವ ಸಂಸ್ಥೆಗಳಿಗೆ ಏಕೆ ಹಣಕಾಸು ನೆರವು ನೀಡಲಾಗುತ್ತಿದೆ ಎಂದು ಇನ್ಫೋಸಿಸ್ನ ಸಂಸ್ಥಾಪಕರು ಪ್ರಶ್ನೆ ಕೇಳಬೇಕಲ್ಲವಾ? ಇಂತಹ ಅನುಮಾನಾಸ್ಪದವಾದ ಕಂಪೆನಿಗೆ ಸರ್ಕಾರದ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ನೀಡಬೇಕಾ? ಎಂದು ಪ್ರಶ್ನಿಸಲಾಗಿದೆ. ಕಳೆದ ತಿಂಗಳ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರನ್ನು ಭೇಟಿ ಆಗಿ, ಆದಾಯ ತೆರಿಗೆ ಪೋರ್ಟಲ್ನಲ್ಲಿನ ತಾಂತ್ರಿಕ ಸಮಸ್ಯೆಗಳ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದ್ದರು. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಸೆಪ್ಟೆಂಬರ್ 15ನೇ ತಾರೀಕಿನ ಗಡುವು ನೀಡಿದ್ದರು.

ಇನ್ಫೋಸಿಸ್ ಬಗ್ಗೆ ಪಾಂಚಜನ್ಯ ನಿಯತಕಾಲಿಕೆಯಲ್ಲಿ ಬಂದ ಲೇಖನದ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಅಂತರವನ್ನು ಕಾಯ್ದುಕೊಂಡಿದೆ. ಆರೆಸ್ಸೆಸ್ನ ಅಖಿಲ ಭಾರತ ಪ್ರಚಾರ ಪ್ರಮುಖ್ ಆದ ಸುನೀಲ್ ಅಂಬೇಕರ್ ಮಾತನಾಡಿ, ಪಾಂಚಜನ್ಯವು ಆರೆಸ್ಸೆಸ್ನ ಮುಖವಾಣಿ ಅಲ್ಲ. ಆ ಲೇಖನವು ಲೇಖಕರ ಅಭಿಪ್ರಾಯವನ್ನು ತಿಳಿಸುತ್ತದೆ ಹೊರತು ಸಂಘಟನೆಯದ್ದನ್ನಲ್ಲ ಎಂದು ಹೇಳಿದ್ದಾರೆ.
Published On - 12:03 pm, Mon, 6 September 21




