AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ZIM: ಲಕ್ಷ್ಮಣ್ ಸಾರಥ್ಯದಲ್ಲಿ ಜಿಂಬಾಬ್ವೆ ತಲುಪಿದ ಟೀಂ ಇಂಡಿಯಾ

India vs Zimbabwe T20: ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ಟಿ20 ತಂಡ 7 ಪಂದ್ಯಗಳಲ್ಲಿ ಗೆಲುವು ಕಂಡಿಲ್ಲ. ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಸರಣಿಯು ಶ್ರೇಯಸ್‌ಗೆ ಮೊದಲ ಗೆಲುವಿಗೆ ನಿರ್ಣಾಯಕವಾಗಿದೆ. ವಿವಿಎಸ್ ಲಕ್ಷ್ಮಣ್ ತರಬೇತಿಯಲ್ಲಿ ತಂಡ ಅಭ್ಯಾಸ ನಡೆಸುತ್ತಿದ್ದು, ವೈಭವ್ ಸೂರ್ಯವಂಶಿ ಮತ್ತು ರಿಂಕು ಸಿಂಗ್‌ಗೂ ಇದು ಮಹತ್ವದ ಸರಣಿ. ಶ್ರೇಯಸ್ ಗೆಲುವಿನ ಓಟ ಆರಂಭಿಸುವುದೇ ಕಾದು ನೋಡಬೇಕು.

IND vs ZIM: ಲಕ್ಷ್ಮಣ್ ಸಾರಥ್ಯದಲ್ಲಿ ಜಿಂಬಾಬ್ವೆ ತಲುಪಿದ ಟೀಂ ಇಂಡಿಯಾ
Team India
ಪೃಥ್ವಿಶಂಕರ
|

Updated on: Jul 20, 2026 | 6:05 PM

Share

ಶ್ರೇಯಸ್ ಅಯ್ಯರ್ (Shreyas Iyer) ಭಾರತ ಟಿ20 ತಂಡದ ನಾಯಕನಾದ ಬಳಿಕ ತಂಡ 7 ಪಂದ್ಯಗಳನ್ನಾಡಿದೆ. ಆದರೆ ಈ 7 ಪಂದ್ಯಗಳಲ್ಲೂ ತಂಡಕ್ಕೆ ಒಂದೇ ಒಂದು ಗೆಲುವು ಸಿಕ್ಕಿಲ್ಲ. ಶ್ರೇಯಸ್ ನಾಯಕನಿಗೆ ಮೊದಲಿಗೆ ಐರ್ಲೆಂಡ್ ವಿರುದ್ಧ ಕಣಕ್ಕಿಳಿದಿದ್ದರು. ಐರ್ಲೆಂಡ್ ವಿರುದ್ಧವೇ ಶ್ರೇಯಸ್ ಅವರ ಗೆಲುವಿನ ಓಟ ಆರಂಭವಾಗಬೇಕಿತ್ತು. ಆದರೆ ಐರ್ಲೆಂಡ್ ಟೀಂ ಇಂಡಿಯಾಕ್ಕೆ ಮರ್ಮಾಘಾತ ನೀಡಿ ಸರಣಿಯ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತು. ಈ ಆಘಾತದ ಜೊತೆಗೆ ಇಂಗ್ಲೆಂಡ್‌ ಪ್ರವಾಸ ಮಾಡಿದ ಟೀಂ ಇಂಡಿಯಾಕ್ಕೆ ಆಂಗ್ಲರು ಮತ್ತೊಂದು ಹೊಡೆತ ನೀಡಿದರು. ಸರಣಿಯ ಒಂದು ಪಂದ್ಯ ಮಳೆಯಿಂದ ರದ್ದಾದರೆ ಉಳಿದ 4 ಪಂದ್ಯಗಳನ್ನು ಇಂಗ್ಲೆಂಡ್‌ ಗೆದ್ದುಕೊಂಡಿತು. ಹೀಗಾಗಿ ಇಂಗ್ಲೆಂಡ್‌ ಪ್ರವಾಸದಲ್ಲೂ ಶ್ರೇಯಸ್​ಗೆ ಯಶಸ್ಸು ಸಿಗಲಿಲ್ಲ. ಹೀಗಾಗಿ ಶ್ರೇಯಸ್ ಇದೀಗ ಯಶಸ್ಸಿನ ಹುಡುಕಾಟದೊಂದಿಗೆ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದಾರೆ.

ತಂಡಕ್ಕೆ ಲಕ್ಷ್ಮಣ್ ಸಾರಥ್ಯ

ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ಟಿ20 ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ ಈಗಾಗಲೇ ಜಿಂಬಾಬ್ವೆ ತಲುಪಿದ್ದು, ಅಲ್ಲಿ ವಿವಿಎಸ್ ಲಕ್ಷ್ಮಣ್ ಅವರ ತರಬೇತಿಯಲ್ಲಿ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. ವಾಸ್ತವವಾಗಿ ಈ ಪ್ರವಾಸಕ್ಕೆ ಲಕ್ಷ್ಮಣ್ ಅವರನ್ನು ತಂಡದ ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಖಾಯಂ ಕೋಚ್ ಗೌತಮ್ ಗಂಭೀರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಗಂಭೀರ್ ತರಬೇತಿಯಲ್ಲಿ ಟೀಂ ಇಂಡಿಯಾಕ್ಕೆ ಕಳೆದ 7 ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ಧಕ್ಕಿಲ್ಲ. ಇದೀಗ ಲಕ್ಷ್ಮಣ್ ಸಾರಥ್ಯದಲ್ಲಿ ತಂಡದ ಅದೃಷ್ಟ ಬದಲಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

ವೈಭವ್, ರಿಂಕುಗೆ ಅಗ್ನಿಪರೀಕ್ಷೆ

ಇನ್ನು ಈ ಸರಣಿಯಲ್ಲಿಯೂ ಎಲ್ಲರ ಕಣ್ಣುಗಳು ಮತ್ತೊಮ್ಮೆ ವೈಭವ್ ಸೂರ್ಯವಂಶಿ ಮೇಲೆ ಇರುತ್ತವೆ. ಏಕೆಂದರೆ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ವೈಭವ್​ಗೆ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿತು. ಆದರೆ ವೈಭವ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಈಗ, ವೈಭವ್​ಗೆ ಈ ಸರಣಿಯಲ್ಲಿ ತಮ್ಮನ್ನು ತಾವು ಸಾಬೀತುಪಡಿಸಲು ಉತ್ತಮ ಅವಕಾಶವಿದೆ. ವೈಭವ್ ಜೊತೆಗೆ ರಿಂಕು ಸಿಂಗ್ ಕೂಡ ಟಿ20 ತಂಡಕ್ಕೆ ಆಯ್ಕೆಯಾಗಿದ್ದು, ಅವರಿಗೂ ಕೂಡ ಈ ಸರಣಿ ನಿರ್ಣಾಯಕವಾಗಿದೆ.

IND vs ENG: ‘ನಾನು ಸಂತೋಷವಾಗಿದ್ದೇನೆ’; ಹೀನಾಯ ಸೋಲಿನ ನಂತರ ಶ್ರೇಯಸ್ ಹೇಳಿದ್ದಿದು

3 ಪಂದ್ಯಗಳ ಟಿ20 ಸರಣಿ ವೇಳಾಪಟ್ಟಿ

  • ಭಾರತ vs ಜಿಂಬಾಬ್ವೆ: ಮೊದಲನೇ ಪಂದ್ಯ – ಜುಲೈ 23, ಹರಾರೆ ಸ್ಪೋರ್ಟ್ಸ್ ಕ್ಲಬ್, ಸಂಜೆ 4:30
  • ಭಾರತ vs ಜಿಂಬಾಬ್ವೆ: ಎರಡನೇ ಪಂದ್ಯ – ಜುಲೈ 25, ಹರಾರೆ ಸ್ಪೋರ್ಟ್ಸ್ ಕ್ಲಬ್, ಸಂಜೆ 4:30
  • ಭಾರತ vs ಜಿಂಬಾಬ್ವೆ: ಮೂರನೇ ಪಂದ್ಯ – ಜುಲೈ 26, ಹರಾರೆ ಸ್ಪೋರ್ಟ್ಸ್ ಕ್ಲಬ್, ಸಂಜೆ 4:30

ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಪ್ರಭ್ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಾಯಾಂಕ್ ಯಾದವ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us