ಶ್ರೇಯಸ್ ಅಯ್ಯರ್ಗೆ ನಾಯಕತ್ವ: ಏಕದಿನ ಸರಣಿಯಿಂದ ಔಟ್
2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ಜಪಾನ್ನ ಐಚಿ-ನಗೋಯಾದಲ್ಲಿ ನಡೆಯಲಿದೆ. ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿರುವ ಟಿ20 ಕ್ರಿಕೆಟ್ ಪಂದ್ಯಗಳು ಸೆಪ್ಟೆಂಬರ್ 17 ರಿಂದಲೇ ಆರಂಭವಾಗಲಿವೆ. ಮೊದಲಿಗೆ ಮಹಿಳಾ ಟಿ20 ಟೂರ್ನಿ ಶುರುವಾಗಲಿದ್ದು, ಆ ಬಳಿಕ ಪುರುಷರ ಕ್ರಿಕೆಟ್ ಪಂದ್ಯಗಳು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 3ರವರೆಗೆ ಜಪಾನ್ನ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆಯಲಿವೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಹಾಗೂ ಕ್ರಿಕೆಟ್ ಪ್ರೇಮಿಗಳು ಅಪರೂಪದ ವೇಳಾಪಟ್ಟಿ ಸಂಘರ್ಷಕ್ಕೆ ಸಾಕ್ಷಿಯಾಗಲಿದ್ದಾರೆ. 2026ರ ಏಷ್ಯನ್ ಗೇಮ್ಸ್ ಪಂದ್ಯಾವಳಿ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಏಕಕಾಲದಲ್ಲಿ ಎದುರಾಗಿರುವುದರಿಂದ, ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ.
ಜಪಾನ್ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನ ಟಿ20 ಕ್ರಿಕೆಟ್ ಸರಣಿಗೆ ಬಿಸಿಸಿಐ ಶ್ರೇಯಸ್ ಅಯ್ಯರ್ ಅವರನ್ನು ಭಾರತ ತಂಡದ ನಾಯಕನನ್ನಾಗಿ ನೇಮಿಸಿರುವುದು ಈ ಮಹತ್ವದ ಬದಲಾವಣೆಗೆ ಪ್ರಮುಖ ಕಾರಣವಾಗಿದೆ.
ಅಪರೂಪದ ಸರಣಿ ಸಂಘರ್ಷ:
2026ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಭಾರತೀಯ ಕ್ರಿಕೆಟ್ ಒಂದೇ ಸಮಯದಲ್ಲಿ ಎರಡು ವಿಭಿನ್ನ ದೇಶಗಳಲ್ಲಿ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
- ವೆಸ್ಟ್ ಇಂಡೀಸ್ ಏಕದಿನ ಸರಣಿ: ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 3, 2026 ರವರೆಗೆ ಭಾರತದಲ್ಲಿ ನಡೆಯಲಿದೆ.
- ಏಷ್ಯನ್ ಗೇಮ್ಸ್ ಕ್ರಿಕೆಟ್: ಸೆಪ್ಟೆಂಬರ್ ಕೊನೆಯ ವಾರದಿಂದ ಆರಂಭವಾಗಲಿದ್ದು, ಪದಕದ ಸುತ್ತಿನ (ಫೈನಲ್) ಪಂದ್ಯಗಳು ಅಕ್ಟೋಬರ್ 3, 2026 ರಂದು ಜಪಾನ್ನಲ್ಲಿ ನಡೆಯಲಿವೆ
ಒಂದು ವೇಳೆ ಶ್ರೇಯಸ್ ಅಯ್ಯರ್ ನೇತೃತ್ವದ ಟಿ20 ತಂಡವು ಏಷ್ಯನ್ ಗೇಮ್ಸ್ನಲ್ಲಿ ಫೈನಲ್ ತಲುಪಿದರೆ, ಬಿಸಿಸಿಐ ಅಕ್ಟೋಬರ್ 3 ರ ಒಂದೇ ದಿನ ಎರಡು ಸೀನಿಯರ್ ಭಾರತೀಯ ತಂಡಗಳನ್ನು (ಒಂದು ನ್ಯೂ ಚಂಡೀಗಢದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ, ಮತ್ತೊಂದು ಜಪಾನ್ನಲ್ಲಿ) ಮೈದಾನಕ್ಕಿಳಿಸಲಿದೆ.
ರುತುರಾಜ್ಗೆ ಚಾನ್ಸ್?
ಶ್ರೇಯಸ್ ಅಯ್ಯರ್ ಅಲಭ್ಯತೆಯಿಂದಾಗಿ ಭಾರತ ಏಕದಿನ ತಂಡದ ಅತ್ಯಂತ ಜವಾಬ್ದಾರಿಯುತ 4ನೇ ಕ್ರಮಾಂಕದ ಬ್ಯಾಟಿಂಗ್ ಸ್ಥಾನವು ತೆರವಾಗಲಿದೆ. ಸದ್ಯದ ಮಾಹಿತಿ ಪ್ರಕಾರ, ಭರವಸೆಯ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಬ್ಯಾಟಿಂಗ್ ಚಾಕಚಕ್ಯತೆಯನ್ನು ನಿರೂಪಿಸಲು ಬಿಸಿಸಿಐ ಈ ಸರಣಿಯಲ್ಲಿ ದೊಡ್ಡ ಜವಾಬ್ದಾರಿ ನೀಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಅಯ್ಯರ್ ಅವರ ಸ್ಥಾನದಲ್ಲಿ ರುತುರಾಜ್ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.
ಇದನ್ನೂ ಓದಿ: ನ್ಯೂಝಿಲೆಂಡ್ನಲ್ಲಿ ‘ಟೀಮ್ ಇಂಡಿಯಾ ಎಫೆಕ್ಟ್’




