ಪಾಕಿಸ್ತಾನದ ಮಸೀದಿ ಬಳಿ ಭೀಕರ ಸ್ಫೋಟ; 15 ಜನ ಸಾವು, 50ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕೋಹಾತ್ನಲ್ಲಿ ಶುಕ್ರವಾರದ ಪ್ರಾರ್ಥನೆಯ ವೇಳೆ ಹಳೆಯ ಪೊಲೀಸ್ ಲೈನ್ಸ್ ಬಳಿ ಭೀಕರ ಸ್ಫೋಟ ಸಂಭವಿಸಿದ್ದು, 15 ಜನರು ಮೃತಪಟ್ಟಿದ್ದಾರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಸ್ಫೋಟಕಗಳನ್ನು ತುಂಬಿದ ವಾಹನವನ್ನು ಹಳೆಯ ಪೊಲೀಸ್ ಲೈನ್ಸ್ಗೆ ಡಿಕ್ಕಿ ಹೊಡೆಸಲಾಗಿದೆ ಎಂದು ಪ್ರಾಥಮಿಕ ತನಿಖೆಗಳು ತಿಳಿಸಿವೆ. ಆದರೆ ಈ ಸ್ಫೋಟದ ಕಾರಣ ಮತ್ತು ದುಷ್ಕರ್ಮಿಗಳ ಗುರುತು ಇನ್ನೂ ತಿಳಿದುಬಂದಿಲ್ಲ.

ಕೋಹಾತ್, ಸೆಪ್ಟೆಂಬರ್ 18: ಪಾಕಿಸ್ತಾನದ ಕೋಹಾತ್ನಲ್ಲಿ ಇಂದು (ಶುಕ್ರಾವರ) ಪ್ರಾರ್ಥನೆಯ ವೇಳೆ ಮಸೀದಿಯೊಂದರ ಸಮೀಪ ಸಂಭವಿಸಿದ ಭೀಕರ ಸ್ಫೋಟದಲ್ಲಿ 15 ಜನರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಐವರು ಸೈನಿಕರು ಕೂಡ ಸೇರಿದ್ದಾರೆ. ಈ ಘಟನೆ ತಿಳಿಯುತ್ತಿದ್ದಂತೆಯೇ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಈ ಸ್ಫೋಟವು ಕೋಹಾತ್ನ ಹಳೆಯ ಪೊಲೀಸ್ ಲೈನ್ಸ್ ಕಾಂಪೌಂಡ್ನ ಒಳಗಿರುವ ಮಸೀದಿಯ ಬಳಿ ಸಂಭವಿಸಿದೆ. ಘಟನೆಯ ಬೆನ್ನಲ್ಲೇ ಪೊಲೀಸ್ ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿದ್ದು, ತುರ್ತು ಕಾರ್ಯಾಚರಣೆ ಕೈಗೊಂಡಿವೆ.
ಬಾಂಬ್ ಸ್ಫೋಟದ ಬಗ್ಗೆ ಮಾಹಿತಿ ಪಡೆದ ನಂತರ ತಂಡಗಳು ಸ್ಥಳಕ್ಕೆ ಆಗಮಿಸಿವೆ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ರೆಸ್ಕ್ಯೂ 1122 ವಕ್ತಾರ ಬಿಲಾಲ್ ಅಹ್ಮದ್ ಫೈಜಿ ತಿಳಿಸಿದ್ದಾರೆ. ಜನರು ಮಸೀದಿಯಲ್ಲಿ ಇಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಸ್ಫೋಟವು ಎಷ್ಟು ಪ್ರಬಲವಾಗಿತ್ತೆಂದರೆ ಅದು ಇಡೀ ಪ್ರದೇಶವನ್ನು ನಡುಗಿಸಿತು. ಮಸೀದಿ ಸೇರಿದಂತೆ ಹತ್ತಿರದ ಹಲವಾರು ಕಟ್ಟಡಗಳು ಹಾನಿಗೊಳಗಾದವು. ಅನೇಕ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಭಾರತದ ನಿಷೇಧಿತ ಉಗ್ರ ಸಂಘಟನೆಯ ಪಟ್ಟಿಗೆ ಸೇರಿದ ಪಾಕಿಸ್ತಾನದ ಶಹಜಾದ್ ಭಟ್ಟಿ ನೆಟ್ವರ್ಕ್; ಸರ್ಕಾರ ಘೋಷಣೆ
ಸ್ಫೋಟದ ನಿಖರ ಸ್ವರೂಪ ಮತ್ತು ಕಾರಣ ತಕ್ಷಣವೇ ಸ್ಪಷ್ಟವಾಗಿಲ್ಲವಾದರೂ, ಅಧಿಕಾರಿಗಳು ಸಂಪೂರ್ಣ ಪ್ರದೇಶವನ್ನು ಮುತ್ತಿಗೆ ಹಾಕಿ ಪೊಲೀಸ್ ಲೈನ್ಸ್ ಸುತ್ತಮುತ್ತಲಿನ ರಸ್ತೆಗಳನ್ನು ವಾಹನ ಸಂಚಾರಕ್ಕೆ ಬಂದ್ ಮಾಡಿದ್ದಾರೆ. ಆರಂಭಿಕ ವರದಿಗಳಲ್ಲಿ ಮೃತರ ಸಂಖ್ಯೆಯ ಬಗ್ಗೆ ಬೇರೆ ಬೇರೆ ಅಂಕಿ-ಅಂಶಗಳು ಬಂದಿದ್ದವು. ಆದರೆ, ಸ್ಥಳೀಯ ಅಧಿಕಾರಿಗಳ ನಂತರದ ಮಾಹಿತಿಯಂತೆ, ಸ್ಫೋಟದಲ್ಲಿ ಮೃತರ ಸಂಖ್ಯೆ 15ಕ್ಕೇರಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
#PAKISTAN : KOHAT POLICE LINES MOSQUE BLAST
पाकिस्तान के खैबर पख्तूनख्वा के कोहाट में Police Lines के पास मस्जिद में जोरदार धमाका।
शुरुआती रिपोर्टों के अनुसार धमाका शुक्रवार की नमाज के दौरान हुआ।
धमाके के बाद इलाके में गोलीबारी की भी खबरें सामने आईं।
ताज़ा रिपोर्टों में कम से… pic.twitter.com/dQS3wzTnjB
— Abhishek Dwivedi /अभिषेक द्विवेदी 🇮🇳 (@Dubeyjilive) September 18, 2026
ಖೈಬರ್ ಪಖ್ತುನ್ಖ್ವಾ ಮುಖ್ಯಮಂತ್ರಿ ಸೊಹೈಲ್ ಅಫ್ರಿದಿ ಈ ಘಟನೆಯನ್ನು ಖಂಡಿಸಿದ್ದಾರೆ. ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡಿರುವುದು ವಿಷಾದಕರ ಮತ್ತು ಹೇಯ ಕೃತ್ಯ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸ್ಫೋಟದ ತನಿಖೆಗೆ ಆದೇಶಿಸಿ, ಸಂಬಂಧಿತ ಪೊಲೀಸ್ ಅಧಿಕಾರಿಗಳಿಂದ ವಿವರವಾದ ವರದಿ ಕೇಳಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಇಂಧನದ ಬಿಕ್ಕಟ್ಟಿಗೆ ಕಂಗೆಟ್ಟ ಪಾಕಿಸ್ತಾನ; ಅಧಿಕಾರಿಗಳ ವಿದೇಶ ಪ್ರವಾಸ ನಿಷೇಧ, ಮದುವೆಗೆ ಒಂದೇ ಖಾದ್ಯ
ರಕ್ಷಣಾ ಕಾರ್ಯಾಚರಣೆ ಚುರುಕು:
ಗಾಯಾಳುಗಳನ್ನು ತಕ್ಷಣವೇ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ರವಾನಿಸಲಾಗಿದ್ದು, ರೋಗಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈ ಸ್ಥಳದಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ, ಹಾಗೂ ಕೋಹಾತ್-ಹಂಗು ರಸ್ತೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂದ್ ಮಾಡಲಾಗಿದೆ. ತನಿಖಾ ಸಂಸ್ಥೆಗಳು ಸ್ಫೋಟಕ್ಕೆ ಕಾರಣವಾದ ಅಂಶಗಳ ಕುರಿತು ಶೋಧ ಆರಂಭಿಸಿದ್ದು, ತನಿಖೆ ಮುಂದುವರಿದಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




