ಬಾಂಗ್ಲಾದಲ್ಲಿ ಹಿಂದೂ ಕುಟುಂಬದ ನಾಲ್ವರನ್ನು ಕೊಂದ ಬಳಿಕ ಅವರದ್ದೇ ಮನೆಯಲ್ಲಿ ಸ್ನಾನ, ಊಟ, ಪಾರ್ಟಿ
ಬಾಂಗ್ಲಾದೇಶದ ರಂಗ್ಪುರದಲ್ಲಿ ಹಿಂದೂ ಕುಟುಂಬದ ನಾಲ್ವರ ಭೀಕರ ಹತ್ಯೆ ನಡೆದಿದೆ. ಮಾದಕವಸ್ತು ಸೇವನೆಗೆ ಅಡ್ಡಿಪಡಿಸಿದ್ದೇ ಕೊಲೆಗೆ ಕಾರಣ. ಆದರೆ, ಹತ್ಯೆಯ ನಂತರ ಆರೋಪಿಗಳು ಅದೇ ಮನೆಯಲ್ಲಿ ಸ್ನಾನ ಮಾಡಿ, ಊಟ ಮಾಡಿ, ಡ್ರಗ್ಸ್ ಸೇವಿಸಿ ಪಾರ್ಟಿ ಮಾಡಿದ್ದು ಆಘಾತಕಾರಿ. ನೆರೆಮನೆಯ ಇಬ್ಬರು ಯುವಕರನ್ನು ಬಂಧಿಸಲಾಗಿದ್ದು, ಡಿಎನ್ಎ ಪರೀಕ್ಷೆ ಪ್ರಮುಖ ಸಾಕ್ಷಿಯಾಗಿದೆ. ಯಾಬಾ ಡ್ರಗ್ಸ್ ಹಾವಳಿಯ ಕರಾಳ ಮುಖ ಈ ಘಟನೆಯಿಂದ ಅನಾವರಣಗೊಂಡಿದೆ.

ಢಾಕಾ, ಆಗಸ್ಟ್ 24: ಬಾಂಗ್ಲಾದೇಶ(Bangladesh)ದ ರಂಗ್ಪುರ ನಗರದಲ್ಲಿ ನಿವೃತ್ತ ಹಿಂದೂ ಶಿಕ್ಷಕ ಹಾಗೂ ಅವರ ಇಡೀ ಕುಟುಂಬವನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಹಾಗೂ ವಿಕೃತ ಸತ್ಯಗಳು ಬಯಲಿಗೆ ಬಂದಿವೆ. ಕೃತ್ಯ ಎಸಗಿದ ಬಳಿಕ ಹಂತಕರು ಅದೇ ಮನೆಯಲ್ಲಿ ರಾತ್ರಿಯಿಡೀ ಉಳಿದು ಸ್ನಾನ ಮಾಡಿ, ಫ್ರಿಡ್ಜ್ನಲ್ಲಿದ್ದ ಆಹಾರ ತಿಂದು, ಮಾದಕ ದ್ರವ್ಯ ಸೇವಿಸಿ ವಿಕೃತಿ ಮೆರೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನೆರೆಮನೆಯವರಾದ ಸಿದ್ಧಾರ್ಥ ದಾಸ್ (19) ಹಾಗೂ ಮುಗ್ಧಾ ದಾಸ್ (23) ಎಂಬ ಇಬ್ಬರು ಯುವಕರನ್ನು ರಂಗ್ಪುರ ಮೆಟ್ರೋಪಾಲಿಟನ್ ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಸೇವನೆಗೆ ಅಡ್ಡಿ: ಗುರುವಾರ ತಡರಾತ್ರಿ ಆರೋಪಿಗಳು ‘ಯಾಬಾ’ಮಾದಕವಸ್ತು ಸೇವಿಸಲು ನಿವೃತ್ತ ಶಿಕ್ಷಕ ಗಣಪತಿ ಚಕ್ರವರ್ತಿ ಅವರ ಮನೆಯ ಛಾವಣಿ ಹತ್ತಿದ್ದರು. ಶಬ್ದ ಕೇಳಿ ಬಂದ ಗಣಪತಿ (65) ಅವರನ್ನು ಟವಲ್ನಿಂದ ಕುತ್ತಿಗೆ ಬಿಗಿದು ಕೊಲ್ಲಲಾಯಿತು.
ಸಾಕ್ಷಿ ನಾಶಕ್ಕೆ ಒಂದಾದ ಮೇಲೊಂದರಂತೆ ಕೊಲೆ: ಗಲಾಟೆ ಕೇಳಿ ಬಂದ ಪತ್ನಿ ಪ್ರೀತಿಲತಾ (50), ಮಗಳು ಅಗಾಮಿ (23) ಹಾಗೂ ತಮ್ಮನ್ನು ಗುರುತಿಸಬಹುದೆಂಬ ಭಯದಿಂದ 12ವರ್ಷದ ಬಾಲಕ ಪ್ರಿಯಂ ಚಕ್ರವರ್ತಿಯನ್ನೂ ಹಗ್ಗದಿಂದ ಕುತ್ತಿಗೆ ಹಿಸುಕಿ ಸಾಯಿಸಲಾಯಿತು. ನಂತರ ಮುಖ ಗುರುತು ಸಿಗದಂತೆ ಬೆಂಕಿಯಿಂದ ಸುಟ್ಟು ಹಾಕಿದ್ದರು.
ಮತ್ತಷ್ಟು ಓದಿ:
ಬಾಂಗ್ಲಾದೇಶ: ಬೀಗ ಹಾಕಿದ ಮನೆಯಲ್ಲಿ ನಿವೃತ್ತ ಹಿಂದೂ ಶಿಕ್ಷಕ, ಪತ್ನಿ, ಇಬ್ಬರು ಮಕ್ಕಳ ಶವ ಪತ್ತೆ
ಬರ್ಬರ ಹತ್ಯೆಯ ನಂತರ ಮನೆಯಲ್ಲೇ ಪಾರ್ಟಿ ನಾಲ್ವರನ್ನು ಕೊಂದು ಶವಗಳನ್ನು ಬಚ್ಚಿಟ್ಟ ನಂತರ, ಹಂತಕರು ಅಲ್ಲಿಯೇ ಸ್ನಾನ ಮಾಡಿ, ಫ್ರಿಡ್ಜ್ನಲ್ಲಿದ್ದ ಖರ್ಜೂರ ಮತ್ತು ಸೌತೆಕಾಯಿಯನ್ನು ತಿಂದು ಮತ್ತೆ ಡ್ರಗ್ಸ್ ಸೇವಿಸಿದ್ದಾರೆ.
ಚಿನ್ನಾಭರಣ ದರೋಡೆ: ಬೆಳಗಾಗುವವರೆಗೆ ಕಾದಿದ್ದ ಆರೋಪಿಗಳು, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ, ಪೊಲೀಸರನ್ನು ದಾರಿತಪ್ಪಿಸಲು ಡ್ರಾಯರ್ಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದರು. ಸಾಕ್ಷ್ಯ ಸಿಗದಂತೆ ಮೊಬೈಲ್ ಫೋನ್ಗಳನ್ನು ಸರ್ಫ್,ಡಿಟರ್ಜೆಂಟ್ ನೀರಿನಲ್ಲಿ ಮುಳುಗಿಸಿ,ಪರಾರಿಯಾಗಿದ್ದರು.
ಆರೋಪಿಗಳು ತಿಂದು ಬಿಸಾಕಿದ್ದ ಖರ್ಜೂರದ ಬೀಜಗಳ ಮೇಲೆ ಸಿಕ್ಕ ಜೊಲ್ಲಿನ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದ್ದು, ಡಿಎನ್ಎ ಪರೀಕ್ಷೆಯು ಹಂತಕರನ್ನು ಕಾನೂನಿನ ಮುಂದೆ ಸಿಲುಕಿಸಲು ಪ್ರಮುಖ ಸಾಕ್ಷಿಯಾಗಿದೆ.
‘ಯಾಬಾ’ ಡ್ರಗ್ಸ್ ಹಾವಳಿ: ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಗಡಿ ಭಾಗದಲ್ಲಿ ಯುವಜನತೆಯನ್ನು ತೀವ್ರ ಅಪರಾಧ ಕೃತ್ಯಗಳತ್ತ ತಳ್ಳುತ್ತಿರುವ ‘ಯಾಬಾ’ ಮಾದಕ ದ್ರವ್ಯದ ಜಾಲದ ಕರಾಳ ಮುಖ ಈ ಭೀಕರ ದುರಂತದ ಮೂಲಕ ಮತ್ತೊಮ್ಮೆ ಅನಾವರಣಗೊಂಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




