Indian Economy: ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಕೊಡುಗೆ ಶೇ. 16ಕ್ಕಿಂತಲೂ ಹೆಚ್ಚಿರಲಿದೆ: ಐಎಂಎಫ್ ಅನಿಸಿಕೆ

IMF Projection: ಈ ವರ್ಷ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಕೊಡುಗೆ ಶೇ. 16ಕ್ಕಿಂತಲೂ ಹೆಚ್ಚಿರಲಿದೆ ಎಂದು ಐಎಂಎಫ್ ಇಂಡಿಯಾ ಮಿಷನ್​ನ ಡಾ. ನದಾ ಚೌವೇರಿ ಹೇಳಿದ್ದಾರೆ. ಹಲವು ಜಾಗತಿಕ ಅಡೆತಡೆಗಳ ನಡುವೆಯೂ ಭಾರತದ ಆರ್ಥಿಕತೆ ಉತ್ತಮವಾಗಿ ಬೆಳೆಯುತ್ತಿದೆ ಎಂದು ನದಾ ಹೇಳಿದ್ದಾರೆ. ಡಿಜಿಟೀಕರಣ ಮತ್ತು ಇನ್​ಫ್ರಾಸ್ಟ್ರಕ್ಚರ್ ವಲಯಗಳ ಮೇಲೆ ಸರ್ಕಾರ ಹೆಚ್ಚಿನ ಒತ್ತು ಕೊಟ್ಟಿರುವುದು ಭಾರತದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ.

Indian Economy: ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಕೊಡುಗೆ ಶೇ. 16ಕ್ಕಿಂತಲೂ ಹೆಚ್ಚಿರಲಿದೆ: ಐಎಂಎಫ್ ಅನಿಸಿಕೆ
ನದಾ ಚೌವೇರಿ
Follow us
|

Updated on: Dec 19, 2023 | 1:32 PM

ನವದೆಹಲಿ, ಡಿಸೆಂಬರ್ 19: ಅಂತಾರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್ ಭಾರತದ ಆರ್ಥಿಕ ಪ್ರಗತಿ (Indian economic growth) ಬಗ್ಗೆ ಶ್ಲಾಘನೆ ಮುಂದುವರಿಸಿದೆ. ಡಿಜಿಟೀಕರಣ (digitisation), ಇನ್​ಫ್ರಾಸ್ಟ್ರಕ್ಚರ್ ಮೊದಲಾದ ಪ್ರಮುಖ ವಲಯಗಳಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಂಡಿರುವುದರ ಫಲವಾಗಿ ಭಾರತದ ಆರ್ಥಿಕತೆ ಗಮನಾರ್ಹವಾಗಿದೆ. ಭಾರತ ಸ್ಟಾರ್ ಪರ್ಫಾರ್ಮರ್ ಆಗಿ ಹೊರಹೊಮ್ಮಿದೆ. ಈ ವರ್ಷದ ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಕೊಡುಗೆ ಶೇ. 16ಕ್ಕಿಂತಲೂ ಹೆಚ್ಚಿರಲಿದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.

‘ಅತಿಹೆಚ್ಚು ಬೆಳೆಯುತ್ತಿರುವ ಉದಯೋನ್ಮುಖ ಬೃಹತ್ ಆರ್ಥಿಕತೆಯ ದೇಶಗಳ ಪೈಕಿ ಭಾರತವೂ ಒಂದು. ನಮ್ಮ ಈಗಿನ ಅಂದಾಜು ಪ್ರಕಾರ ಈ ವರ್ಷದ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಕೊಡುಗೆ ಶೇ 16ಕ್ಕಿಂತಲೂ ಹೆಚ್ಚಿರಲಿದೆ,’ ಎಂದು ಐಎಂಎಫ್​ನಲ್ಲಿ ಭಾರತೀಯ ಮಿಷನ್​ನ ನದಾ ಚೌವೇರಿ (Nada Choueiri) ಹೇಳಿದ್ದಾರೆ.

ಇದನ್ನೂ ಓದಿ: ಟೆಲಿಕಮ್ಯೂನಿಕೇಶನ್ಸ್ ಬಿಲ್; ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆಗೆ ಹೊಸ ವಿಧಾನ ಸೇರಿ ಹಲವು ಸುಧಾರಣೆಗಳು

ಅಂತಾರಾಷ್ಟ್ರೀಯವಾಗಿ ಹೆಚ್ಚಿರುವ ಬಿರುಕುಗಳಿಂದ ಜಾಗತಿಕ ಬೆಳವಣಿಗೆ ಕುಂಠಿತಗೊಂಡಿದೆ. ಇಂತಹ ಜಾಗತಿಕವಾಗಿ ಅಡೆತಡೆಗಳ ಮಧ್ಯೆಯೂ ಭಾರತದ ಆರ್ಥಿಕತೆ ಬೆಳೆಯುತ್ತಿದೆ. ಇನ್​ಫ್ರಾಸ್ಟ್ರಕ್ಚರ್​ನಲ್ಲಿ ಸರ್ಕಾರ ಹೂಡಿಕೆ ಮಾಡುತ್ತಿದೆ. ಲಾಜಿಸ್ಟಿಕ್ಸ್ ಅಭಿವೃದ್ಧಿಗೆ ಗಮನ ಕೊಟ್ಟಿದೆ. ಈ ಅಂಶಗಳು ಬಳವಣಿಗೆಗೆ ಭದ್ರ ಅಡಿಪಾಯ ಹಾಕುತ್ತವೆ ಎಂದಿದ್ದಾರೆ ನದಾ ಚೌವೇರಿ.

‘ಭಾರತದಲ್ಲಿ ಬಹಳ ದೊಡ್ಡ ಯುವ ಜನಸಂಖ್ಯೆ ಇದೆ. ರಚನಾತ್ಮಕ ಸುಧಾರಣೆಗಳ ಮೂಲಕ ಈ ಜನಸಂಖ್ಯೆಯ ಶಕ್ತಿಯನ್ನು ಚೆನ್ನಾಗಿ ಬಳಕೆ ಮಾಡಿದರೆ ಬಹಳ ಗಣನೀಯ ವೇಗದಲ್ಲಿ ಭಾರತ ಬೆಳೆಯಬಹುದು’ ಎಂದು ಡಾ. ನದಾ ಹೇಳಿದ್ದಾರೆ.

ಯಾರು ಈ ನದಾ ಚೌವೇರಿ?

ಡಾ. ನದಾ ಚೌವೇರಿ ಅವರು ಐಎಂಎಫ್​ನಲ್ಲಿ ಇಂಡಿಯಾ ಮಿಷನ್ ಮುಖ್ಯಸ್ಥೆ. ಲೆಬನಾನ್ ಸಂಜಾತೆಯಾದ ಇವರು ಐಎಂಎಫ್​ನಲ್ಲಿ 22 ವರ್ಷಕ್ಕೂ ಹೆಚ್ಚು ಕಾಲದಿಂದ ವಿವಿಧ ಮಿಷನ್​ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: CP Gurnani: ಎಐ ತಂತ್ರಜ್ಞಾನದಿಂದ ಉದ್ಯೋಗನಷ್ಟಕ್ಕಿಂತ ಉದ್ಯೋಗಸೃಷ್ಟಿ ಹೆಚ್ಚು ಎಂದ ಟೆಕ್ ಮಹೀಂದ್ರ ನಿರ್ಗಮಿತ ಸಿಇಒ

ರಾಜಕೀಯ ಸ್ಥಿರತೆ ಮುಖ್ಯ ಎನ್ನುವ ನದಾ

ಜಾಗತಿಕವಾಗಿ ಹಣಕಾಸು ಬಿಕ್ಕಟ್ಟು ಇದ್ದರೂ ಅದರ ಬಿಸಿ ಭಾರತದ ಹಣಕಾಸು ವಲಯಕ್ಕೆ ತಾಕಿಲ್ಲ. ಅದರೆ ಭಾರತದಲ್ಲಿ ಹೂಡಿಕೆ ಮತ್ತು ಬೆಳವಣಿಗೆ ಮುಂದುವರಿಯಬೇಕಾದರೆ ರಾಜಕೀಯ ಸ್ಥಿರತೆ ಅವಶ್ಯಕ. ಭಾರತದ ಬಜೆಟ್ ಕೊರತೆ ಕಡಿಮೆ ಆಗಿದೆಯಾದರೂ ಸಾರ್ವಜನಿಕ ಸಾಲ ಪ್ರಮಾಣ ಹೆಚ್ಚಿದೆ. ಹಣಕಾಸು ತಾಳಿಕೆ ಶಕ್ತಿಯನ್ನು ಮರು ನಿರ್ಮಿಸುವ ಅಗತ್ಯವಿದೆ ಎಂದು ಡಾ. ನದಾ ಚೌವೇರಿ ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ