AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವತ್ತು ಆರ್​ಬಿಐ ಎಂಪಿಸಿ ಸಭೆ ಆರಂಭ; ಬಡ್ಡಿದರ ಬದಲು ಸಿಆರ್​ಆರ್ ಕಡಿಮೆ ಮಾಡುವ ಸಾಧ್ಯತೆ; ಇಲ್ಲಿದೆ ಕೆಲ ನಿರೀಕ್ಷೆಗಳು…

RBI MPC meeting: ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಆರು ಸದಸ್ಯರ ಮಾನಿಟರಿ ಪಾಲಿಸಿ ಕಮಿಟಿ ಸಭೆ ಡಿ. 4, ಇಂದು ಆರಂಭವಾಗಿದೆ. ಮೂರು ದಿನಗಳ ಈ ಸಭೆಯಲ್ಲಿ ಬಡ್ಡಿದರ ಇತ್ಯಾದಿ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಮೂಲಗಳ ಪ್ರಕಾರ ರಿಪೋ ದರ ಬದಲು ಸಿಆರ್​ಆರ್ ಅನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇವತ್ತು ಆರ್​ಬಿಐ ಎಂಪಿಸಿ ಸಭೆ ಆರಂಭ; ಬಡ್ಡಿದರ ಬದಲು ಸಿಆರ್​ಆರ್ ಕಡಿಮೆ ಮಾಡುವ ಸಾಧ್ಯತೆ; ಇಲ್ಲಿದೆ ಕೆಲ ನಿರೀಕ್ಷೆಗಳು...
ಆರ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 04, 2024 | 11:42 AM

Share

ನವದೆಹಲಿ, ಡಿಸೆಂಬರ್ 4: ಭಾರತೀಯ ರಿಸರ್ವ್ ಬ್ಯಾಂಕ್​ನ ಮಾನಿಟರಿ ಪಾಲಿಸಿ ಕಮಿಟಿ ಸಭೆ ಇಂದು ಬುಧವಾರ ಆರಂಭಗೊಂಡಿದೆ. ಮೂರು ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ರಿಪೋ ದರ ಅಥವಾ ಬಡ್ಡಿದರಗಳನ್ನು ಪರಿಷ್ಕರಿಸುವುದೂ ಸೇರಿದಂತೆ ವಿವಿಧ ವಿಚಾರಗಳನ್ನು ಅವಲೋಕಿಸಿ ನಿರ್ಧರಿಸಲಾಗುತ್ತದೆ. ಡಿಸೆಂಬರ್ 6, ಶುಕ್ರವಾರದಂದು ಸಭೆಯ ನಿರ್ಧಾರಗಳನ್ನು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಪ್ರಕಟಿಸಲಿದ್ದಾರೆ. ಆದರೆ, ಸರ್ಕಾರದಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರ ಚಿತ್ತವು ರಿಪೋ ದರ ವಿಚಾರದತ್ತ ನೆಟ್ಟಿರುತ್ತದೆ.

ರಿಪೋ ದರ ವಿಚಾರದಲ್ಲಿ ರಿಸರ್ವ್ ಬ್ಯಾಂಕ್​ನ ಎಂಪಿಸಿ ಈ ಬಾರಿ ಹೆಚ್ಚು ಸಂದಿಗ್ಧತೆ ಮತ್ತು ಒತ್ತಡಕ್ಕೆ ಸಿಲುಕಿದೆ. ಒಂದೆಡೆ ಹಣದುಬ್ಬರ ದರ ನಿರೀಕ್ಷೆಮೀರಿ ಹೆಚ್ಚುತ್ತಿದೆ. ಇನ್ನೊಂದೆಡೆ ಆರ್ಥಿಕತೆಯೂ ಕೂಡ ನಿರೀಕ್ಷಿತ ವೇಗದಲ್ಲಿ ಬೆಳವಣಿಗೆ ಹೊಂದುತ್ತಿಲ್ಲ. ರಿಪೋ ದರ ಒಂದು ರೀತಿಯಲ್ಲಿ ಅತ್ತ ಧರಿ ಇತ್ತ ಪುಲಿ ಎಂಬಂತಹ ಸ್ಥಿತಿಗೆ ಬಂದಿದೆ.

ಬಡ್ಡಿದರ ಇಳಿಸಿದರೆ ಹಣದುಬ್ಬರ ಇನ್ನಷ್ಟು ನಿಯಂತ್ರಣ ಕಳೆದುಕೊಂಡು ಏರಿಬಿಡಬಹುದು ಎನ್ನುವ ಭಯ ಇದೆ. ಬಡ್ಡಿದರ ಇಳಿಸದಿದ್ದರೆ ಜಿಡಿಪಿ ಬೆಳವಣಿಗೆ ಮತ್ತಷ್ಟು ಮಂದಗೊಳ್ಳಬಹುದು ಎಂಬ ಆತಂಕ ಇದೆ. ಬಡ್ಡಿದರ ಇಳಿಸುವುದು ಅನಿವಾರ್ಯ ಎಂದು ಕೇಂದ್ರ ಸಚಿವರೊಬ್ಬರು ಇತ್ತೀಚೆಗೆ ಹೇಳಿದ್ದರು. ಆದರೆ, ಸ್ವತಂತ್ರ ಸಂಸ್ಥೆಯಾದ ಆರ್​ಬಿಐ ಸರ್ಕಾರದ ಮಾತು ಕೇಳಲೇಬೇಕು ಎನ್ನುವ ನಿಬಂಧನೆ ಇಲ್ಲ. ಹಣಕಾಸು ಹರಿವು, ಹಣದುಬ್ಬರ ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆರ್​ಬಿಐ ತನ್ನ ನೀತಿಗಳನ್ನು ಪರಿಷ್ಕರಿಸುತ್ತದೆ.

ಇದನ್ನೂ ಓದಿ: ಬ್ಯಾಂಕಿಂಗ್ ಕಾನೂನಿಗೆ ತಿದ್ದುಪಡಿ, ಬ್ಯಾಂಕಿಂಗ್ ವಲಯ ಇನ್ನಷ್ಟು ಪ್ರಬಲ: ನಿರ್ಮಲಾ ಸೀತಾರಾಮನ್

ಆರ್​ಬಿಐಗೆ ಹಣದುಬ್ಬರವನ್ನು ಶೇ. 4ಕ್ಕೆ ತರುವುದು ಮುಖ್ಯ ಗುರಿಯಾಗಿದೆ. ಕೆಲ ತಿಂಗಳು ಹಣದುಬ್ಬರ ಶೇ. 5ರ ಒಳಗೆ ಬಂದಿತ್ತಾದರೂ, ಸದ್ಯ ಅಕ್ಟೋಬರ್​ನಲ್ಲಿ ಅದು ಶೇ. 6.21ಕ್ಕೆ ಉಬ್ಬಿ ನಿಂತಿದೆ. ಇದನ್ನು ಕರಗಿಸುವುದು ಆರ್​ಬಿಐ ಮುಂದಿರುವ ಸವಾಲು. ಇಷ್ಟು ಹಣದುಬ್ಬರ ಏರಲು ಪ್ರಮುಖವಾಗಿ ಕಾರಣವಾಗಿರುವುದು ಆಹಾರವಸ್ತುಗಳ ಬೆಲೆ ಏರಿಕೆ. ಈ ಬಾರಿ ಮುಂಗಾರು ಬೆಳೆಯ ಫಸಲು ಚೆನ್ನಾಗಿ ಬಂದಿರುವುದರಿಂದ ನವೆಂಬರ್, ಡಿಸೆಂಬರ್​ನಲ್ಲಿ ಆಹಾರಬೆಲೆಗಳು ತಗ್ಗುವ ನಿರೀಕ್ಷೆ ಇದೆ. ಹಾಗೇನಾದರೂ ಆದಲ್ಲಿ ಹಣದುಬ್ಬರ ಮತ್ತೆ ಶೇ. 5ರ ಒಳಗೆ ಬರುವ ಸಾಧ್ಯತೆ ಇದೆ.

ರಿಪೋ ದರ ಬದಲು ಸಿಆರ್​ಆರ್ ದರ ಇಳಿಕೆ ಸಾಧ್ಯತೆ

ಸದ್ಯ ರಿಪೋ ದರ ಶೇ. 6.5ರಲ್ಲಿದೆ. ಕಳೆದ 20 ತಿಂಗಳಿಂದ ಇದೇ ದರ ಮುಂದುವರಿಯುತ್ತಾ ಬಂದಿದೆ. ಈ ಬಾರಿಯೂ ಅದು ಮುಂದುವರಿಯಬಹುದು. ಇದೇ ವೇಳೆ, ಕ್ಯಾಷ್ ರಿಸರ್ವ್ ರೇಶಿಯೋ ಅಥವಾ ಸಿಆರ್​ಆರ್ ಅನ್ನು ಆರ್​ಬಿಐ ಕಡಿತಗೊಳಿಸಬಹುದು. ಅಥವಾ ಓಪನ್ ಮಾರ್ಕೆಟ್ ಆಪರೇಶನ್ಸ್ ಅನ್ನಾದರೂ ಕಡಿತಗೊಳಿಸಬಹುದು.

ಇದನ್ನೂ ಓದಿ: ಭಾರತವನ್ನು ಪ್ರಯೋಗಶಾಲೆ ಎಂದ ಬಿಲ್ ಗೇಟ್ಸ್; ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆ

ಆರು ಸದಸ್ಯರಿರುವ ಆರ್​ಬಿಐನ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ರಿಪೋ ದರ ಮಾತ್ರವಲ್ಲ ಇನ್ನೂ ಹಲವು ವಿಚಾರಗಳನ್ನು ಅವಲೋಕಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಹಣದುಬ್ಬರ ಎಷ್ಟಿರಬಹುದು, ಜಿಡಿಪಿ ಬೆಳವಣಿಗೆ ಹೇಗೆ ಸಾಗಬಹುದು ಎಂಬುದನ್ನು ಅಂದಾಜು ಮಾಡಲಾಗುತ್ತದೆ. ಬ್ಯಾಂಕುಗಳ ನಿಯಮಗಳಲ್ಲಿ ಪರಿಷ್ಕರಣೆಯ ಅಗತ್ಯ ಇದ್ದರೆ ಆ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಂತಿಮವಾಗಿ ಎಲ್ಲರ ಚಿತ್ತವು ಸಾಮಾನ್ಯವಾಗಿ ರಿಪೋ ದರದತ್ತ ನೆಟ್ಟಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ