ಕೋಟಿ ಕೋಟಿ ವಂಚನೆ ಪ್ರಕರಣ; ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ ದೂರು
ಕನ್ನಡದ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ 'ಫಿನಿಕ್ಸ್' ಸಿನಿಮಾ ನಿರ್ಮಾಣದ ಹೆಸರಿನಲ್ಲಿ 3.85 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಹಣ ವಾಪಸ್ ನೀಡದೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಭಾಸ್ಕರ್ ಶೆಟ್ಟಿ ಎಂಬುವವರು ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಿದ್ದಾರೆ.

ಮುಖ್ಯಾಂಶಗಳು
- ಸಿನಿಮಾ ನಿರ್ಮಾಣದ ಹೆಸರಲ್ಲಿ 3.85 ಕೋಟಿ ರೂ. ಪಡೆದು ವಂಚನೆ
- ಓಂ ಪ್ರಕಾಶ್ ರಾವ್ ವಿರುದ್ಧ ದೂರು
- ಪೊಲೀಸ್ ಆಯುಕ್ತರ ಮೊರೆ ಹೋದ ದೂರುದಾರ ಭಾಸ್ಕರ್ ಶೆಟ್ಟಿ
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಅವರು (Om Prakash Rao) ಇದೀಗ ಹೊಸ ವಿವಾದವೊಂದಕ್ಕೆ ಸಿಲುಕಿದ್ದಾರೆ. ಸಿನಿಮಾ ನಿರ್ಮಾಣದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಭಾಸ್ಕರ್ ಶೆಟ್ಟಿ ಎಂಬುವವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ವಂಚನೆಯ ಆರೋಪದ ಹಿನ್ನೆಲೆ
‘ಫಿನಿಕ್ಸ್’ ಎಂಬ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿ ಓಂ ಪ್ರಕಾಶ್ ರಾವ್ ಅವರು ಭಾಸ್ಕರ್ ಶೆಟ್ಟಿ ಅವರಿಂದ ಒಟ್ಟು 3 ಕೋಟಿ 85 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ. ಸೆಪ್ಟೆಂಬರ್ 23ರಂದು ಈ ಹಣಕಾಸಿನ ವ್ಯವಹಾರ ನಡೆದಿದ್ದು, ಕೇವಲ ಆರು ತಿಂಗಳೊಳಗೆ ಸಂಪೂರ್ಣ ಹಣವನ್ನು ಹಿಂದಿರುಗಿಸುವುದಾಗಿ ಓಂ ಪ್ರಕಾಶ್ ಭರವಸೆ ನೀಡಿದ್ದರು. ಆದರೆ, ವ್ಯವಹಾರ ನಡೆದು ಮೂರು ವರ್ಷ ಕಳೆದರೂ ಹಣ ವಾಪಸ್ ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆದರಿಕೆ ಮತ್ತು ಕಾಲಹರಣ
‘ಹಣ ವಾಪಸ್ ಕೇಳಿದಾಗಲೆಲ್ಲಾ ನಿರ್ದೇಶಕರು ವಿವಿಧ ಕಾರಣಗಳನ್ನು ನೀಡಿ ಕಾಲಹರಣ ಮಾಡುತ್ತಿದ್ದಾರೆ. ಅಲ್ಲದೆ, ಇತ್ತೀಚೆಗೆ ಅವರು ಸಂಪರ್ಕಕ್ಕೂ ಸಿಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ನನಗೆ ಸೇರಿದ ಹಣವನ್ನು ಕೇಳಲು ಓಂ ಪ್ರಕಾಶ್ ಅವರ ಮನೆಗೆ ತೆರಳಿದ್ದಾಗ, ಅಲ್ಲಿ ಬೆದರಿಕೆ ಹಾಕಲಾಗಿದೆ. ಜೊತೆಗೆ ದೂರುದಾರರ ಮೇಲೆಯೇ ಗಲಾಟೆ ಮಾಡಿದ ಆರೋಪ ಹೊರಿಸಿ ಅವರನ್ನು ಭಯಭೀತರನ್ನಾಗಿಸುವ ಪ್ರಯತ್ನ ನಡೆದಿದೆ’ ಎಂದು ದೂರುದಾರ ಭಾಸ್ಕರ್ ಶೆಟ್ಟಿ ಆರೋಪಿಸಿದ್ದಾರೆ.
ಇದನ್ನೂ ಓದಿ: ‘ಭೀಮಾತೀರದಲ್ಲಿ’ ರೀ-ರಿಲೀಸ್; ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ಪೊಲೀಸ್ ಆಯುಕ್ತರಿಗೆ ದೂರು
ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಭಾಸ್ಕರ್ ಶೆಟ್ಟಿ ಅವರು ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದು, ಓಂ ಪ್ರಕಾಶ್ ರಾವ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಗಂಭೀರ ಆರೋಪಗಳ ಬಗ್ಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




