‘ನನಗೆ ಬರೋಕಾಗಲ್ಲ, ವಿನಾಯಿತಿ ಕೊಡಿ’; ಬೆನ್ನು ನೋವಿನ ಕಾರಣ ಹೇಳಿ ಕೋರ್ಟ್ಗೆ ಗೈರಾದ ದರ್ಶನ್
ರೇಣುಕಾ ಸ್ವಾಮಿ ಕೊಲೆ ಪ್ರಕರಣದ 17 ಆರೋಪಿಗಳು ಏಪ್ರಿಲ್ 8ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳು ಹಾಜರಾಗಿದ್ದಾರೆ. ಆದರೆ ನಟ ದರ್ಶನ್ ಬೆನ್ನು ನೋವಿನ ಕಾರಣ ಗೈರಾಗಿದ್ದಾರೆ. ಅವರ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಅವರು 'ಡೆವಿಲ್' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ರೇಣುಕಾ ಸ್ವಾಮಿ (Renuuka Swamy ) ಕೊಲೆ ಕೇಸ್ನ 17 ಆರೋಪಿಗಳು ಇಂದು (ಏಪ್ರಿಲ್ 8) ಕೋರ್ಟ್ಗೆ ಹಾಜರಾಗಬೇಕಿತ್ತು. ಈಗಾಗಲೇ ಪವಿತ್ರಾ ಗೌಡ ಸೇರಿದಂತೆ ಕೆಲವು ಆರೋಪಿಗಳು ಬೆಂಗಳೂರಿನ ಸಿಸಿಹೆಚ್ 57ನೇ ಕೋರ್ಟ್ಗೆ ಹಾಜರಾಗಿದ್ದಾರೆ. ಆದರೆ, ನಟ ದರ್ಶನ್ ಅವರು ಕೋರ್ಟ್ಗೆ ಇಂದು ಗೈರಾಗಿದ್ದಾರೆ. ಬೆನ್ನು ನೋವಿನ ಕಾರಣ ನೀಡಿ ಅವರು ವಿನಾಯಿತಿ ಕೇಳಿದ್ದಾರೆ. ಅವರ ಪರ ವಕೀಲರು ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ಈ ವೇಳೆ ಕೋರ್ಟ್ ಜಡ್ಜ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಬೇಕಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಇತರರಾದ ವಿನಯ್, ನಾಗರಾಜ್, ನಂದಿಶ್, ಜಗದೀಶ್, ಪವನ್, ಲಕ್ಷ್ಮಣ, ದೀಪಕ್, ಪ್ರದೋಶ್, ಕಾರ್ತಿಕ್, ಕೇಶವ ಮೂರ್ತಿ ಸೇರಿ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ದರ್ಶನ್ ಮಾತ್ರ ಗೈರಾಗಿದ್ದಾರೆ. ಬೆಂಗಳೂರು ವ್ಯಾಪ್ತಿ ಬಿಟ್ಟು ತೆರಳಲು ದರ್ಶನ್ಗೆ ಹೈಕೋರ್ಟ್ ಅನುಮತಿ ನೀಡಿತ್ತು. ಈ ಆದೇಶ ಪ್ರತಿಯನ್ನು ದರ್ಶನ್ ಪರ ವಕೀಲರು ಸಿಸಿಹೆಚ್ 57ನೇ ಕೋರ್ಟ್ಗೆ ಸಲ್ಲಿಕೆ ಮಾಡಿದರು. ಇದನ್ನು ಜಡ್ಜ್ ಪರಿಶೀಲನೆ ಮಾಡಿದ್ದಾರೆ.
ದರ್ಶನ್ಗೆ ಬೆನ್ನು ನೋವು
ದರ್ಶನ್ ಜೈಲಿನಲ್ಲಿ ಇದ್ದ ಬಳಿಕ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತು. ಇದೇ ಕಾರಣ ನೀಡಿ ಅವರು ಜಾಮೀನಿಗೆ ಮನವಿ ಮಾಡಿದ್ದರು. ಆಪರೇಷನ್ ಮಾಡಿಸಿಕೊಳ್ಳಬೇಕು ಎಂದು ಅವರು ಮಧ್ಯಂತರ ಜಾಮೀನು ಪಡೆದರು. ಆ ಬಳಿಕ ಆಸ್ಪತ್ರೆ ಸೇರಿದರು. ನಂತರ ಪೂರ್ಣ ಪ್ರಮಾಣದ ಜಾಮೀನು ಸಿಕ್ಕ ಬಳಿಕ ಅವರು ಆಸ್ಪತ್ರೆಯಿಂದ ರಿಲೀಸ್ ಆದರು. ಈ ವರೆಗೆ ದರ್ಶನ್ ಆಪರೇಷನ್ ಮಾಡಿಸಿಕೊಂಡಿಲ್ಲ.
‘ಡೆವಿಲ್’ ಸಿನಿಮಾ ಶೂಟ್ನಲ್ಲಿ ಬ್ಯುಸಿ
ದರ್ಶನ್ ಅವರು ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ‘ಡೆವಿಲ್’ ಶೂಟ್ ಮಾಡಲಾಯಿತು. ಆ ಬಳಿಕ ಚಿತ್ರತಂಡ ರಾಜಸ್ಥಾನಕ್ಕೆ ತೆರಳಿದೆ. ಅಲ್ಲಿ ಕೆಲವು ದಿನ ಶೂಟ್ ಮಾಡಿ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಹೈದರಾಬಾದ್ಗೆ ತೆರಳುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ: 50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
‘ಡೆವಿಲ್’ ಬಗ್ಗೆ
‘ಮಿಲನ’ ಪ್ರಕಾಶ್ ಅವರು ‘ಡೆವಿಲ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್ ಅವರು ಜೈಲಿನಲ್ಲಿ ಇದ್ದ ಕಾರಣಕ್ಕೆ ಹಾಗೂ ಬೆನ್ನು ನೋವಿನ ಸಮಸ್ಯೆಯಿಂದ ಈ ಚಿತ್ರದ ಶೂಟಿಂಗ್ ವಿಳಂಬ ಆಗಿದೆ. ಈಗ ಚಿತ್ರಕ್ಕೆ ಭರದಿಂದ ಶೂಟಿಂಗ್ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.