ಖ್ಯಾತಿಯಿಂದ ಹೆಚ್ಚಿತು ಅಶಾಂತಿ; ಚಿತ್ರರಂಗ ತೊರೆದೇ ಬಿಟ್ಟ ನಟಿ
ಬಿಗ್ ಬಾಸ್ ಹಿಂದಿ ಸೀಸನ್ 17 ರ ಸ್ಪರ್ಧಿ ಹಾಗೂ ನಟಿ ಸೋನಿಯಾ ಬನ್ಸಲ್ ಅವರು ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ. ಹಣ ಮತ್ತು ಖ್ಯಾತಿಗಿಂತ ಆಂತರಿಕ ಶಾಂತಿ ಮುಖ್ಯ ಎಂದು ಅವರು ಹೇಳಿದ್ದಾರೆ. ಚಿತ್ರರಂಗದಲ್ಲಿ ಯಶಸ್ಸು ಕಂಡರೂ ಶಾಂತಿ ಸಿಗದಿರುವುದು ಅವರ ನಿರ್ಧಾರಕ್ಕೆ ಕಾರಣ.ಈಗ ಅವರು ಆಧ್ಯಾತ್ಮಿಕತೆಯತ್ತ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.

‘ಬಿಗ್ ಬಾಸ್ ಹಿಂದಿ ಸೀಸನ್ 17’ (Bigg Boss) ಸ್ಪರ್ಧಿ ಹಾಗೂ ನಟಿ ಸೋನಿಯಾ ಬನ್ಸಲ್ ಅವರು ಈಗ ಚಿತ್ರರಂಗ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ನಟನೆಯಿಂದ ದೂರ ಹೋಗಲು ಅವರು ಕಾರಣ ನೀಡಿದ್ದಾರೆ. ಚಿತ್ರರಂಗದಿಂದ ಅವರಿಗೆ ಖ್ಯಾತಿ ಏನೋ ಸಿಕ್ಕಿತು. ಆದರೆ, ಶಾಂತಿ ಸಿಕ್ಕಿಲ್ಲ ಎಂಬುದು ಅವರ ಅಭಿಪ್ರಾಯ ಆಗಿದೆ. ಅವರ ಮಾತನ್ನು ಕೇಳಿ ಅನೇಕರಿಗೆ ಶಾಕ್ ಆಗಿದೆ. ನಟಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದು ಹೇಳಿದ್ದಾರೆ.
ಚಿತ್ರರಂಗಕ್ಕೆ ಬಂದು ಖ್ಯಾತಿ ಪಡೆಯಬೇಕು ಎಂದು ಅಂದುಕೊಳ್ಳುವವರು ಕೆಲವರು. ಇನ್ನೂ ಕೆಲವರು ಚಿತ್ರರಂಗದಲ್ಲಿ ಖ್ಯಾತಿ ಸಿಕ್ಕ ಹೊರತಾಗಿಯೂ ನಟನೆಯಲ್ಲಿ ಮುಂದುವರೆಯೋದಿಲ್ಲ. ಇದಕ್ಕೆ ನಾನಾ ಕಾರಣ ನೀಡುತ್ತಾರೆ. ಕೆಲವರಿಗೆ ಕಿರುಕುಳ ಸಿಕ್ಕಿರುತ್ತದೆ. ಇನ್ನೂ ಕೆಲವರಿಗೆ ಖ್ಯಾತಿ ಸಿಕ್ಕ ಹೊರತಾಗಿಯೂ ಆಫರ್ಗಳು ಬಂದಿರೋದಿಲ್ಲ. ನಟಿ ಸೋನಿಯಾ ಬನ್ಸಲ್ಗೆ ಆಫರ್ ಸಿಕ್ಕಿದೆ. ಆದರೆ, ಶಾಂತಿ ಇಲ್ಲ.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸೋನಿಯಾ ಮಾತನಾಡಿದರು. ‘ಹಣ, ಖ್ಯಾತಿ ಹಾಗೂ ಜನಪ್ರಿಯತೆ ಪಡೆದುಕೊಳ್ಳುವ ಭರದಲ್ಲಿ ನನ್ನನ್ನು ನಾನು ಕಳೆದುಕೊಂಡೆ. ನನಗೆ ಶಾಂತಿ ಅನ್ನೋದು ಸಿಗಲೇ ಇಲ್ಲ. ಶಾಂತಿ ಇಲ್ಲ ಎಂದಮೇಲೆ ಹಣ ಇದ್ದು ಏನು ಪ್ರಯೋಜನ? ಹೊರಗೆ ಎಲ್ಲವೂ ಇದ್ದು ಒಳಗೆ ಖಾಲಿ ಎಂದರೆ ಏನು ಮಾಡೋಕೆ ಆಗುತ್ತದೆ? ಅದು ನಿಜಕ್ಕೂ ಇರಲು ಸಾಧ್ಯವಾಗದ ಜಾಗ’ ಎಂದಿದ್ದಾರೆ ಅವರು.
ಹಾಗಾದರೆ ನಟಿ ಜೀವನಕ್ಕಾಗಿ ಏನು ಮಾಡುತ್ತಾರೆ? ಅದಕ್ಕೂ ಅವರ ಬಳಿ ಉತ್ತರ ಇದೆ. ‘ನಾನು ಜೀವನದ ಪಾಠ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ. ಅಂದರೆ, ಆಧ್ಯಾತ್ಮದ ಆಲೋಚನೆಗಳನ್ನು ಅವರು ಜನರಿಗೆ ತಲುಪಿಸಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸಿನಿಮಾಗಳು ಸೋಲುತ್ತಿರುವುದೇಕೆ? ಚಿತ್ರರಂಗದ ಹುಳುಕು ತೆರೆದಿಟ್ಟ ಆಮಿರ್ ಖಾನ್
‘ನಾಟಿ ಗ್ಯಾಂಗ್’ ಸಿನಿಮಾದಿಂದ ಸೋನಿಯಾ ಬನ್ಸಲ್ ಅವರು ಬಣ್ಣದ ಬದಕು ಆರಂಭಿಸಿದರು. ಆ ಬಳಿಕ ಅವರು, ‘ಡುಬ್ಕಿ’, ‘ಗೇಮ್ 100 ಕ್ರೋರ್ ಕಾ’, ‘ಶೋರ್ವೀರ್’ ರೀತಿಯ ಸಿನಿಮಾ ಮಾಡಿದರು. ಅವರು ‘ಧೀರ’ ಹೆಸರಿನ ತೆಲುಗು ಸಿನಿಮಾ ಮಾಡಿದರು. 2023ರಲ್ಲಿ ಸಲ್ಮಾನ್ ಖಾನ್ ಅವರು ನಡೆಸಿಕೊಡೋ ‘ಬಿಗ್ ಬಾಸ್’ನಲ್ಲಿ ಭಾಗವಹಿಸಿದರು. ಮೊದಲ ವಾರವೇ ಅವರು ಮನೆಯಿಂದ ಹೊರಹೋಗಬೇಕಾಯಿತು. ಇದು ಅವರಿಗೆ ಆಘಾತ ತಂದಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.