AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸಕೋಟೆ ದಮ್ ಬಿರಿಯಾನಿ ಕ್ರೇಜ್‌ಗೆ ಅಪಘಾತ, ಗಲಾಟೆ ನಂಟು: 4 ಗಂಟೆ ಬಿರಿಯಾನಿಗೆ ಬ್ರೇಕ್!

Hosakote Biryani: ಹೊಸಕೋಟೆಯಲ್ಲಿ ಬೆಳ್ಳಂಬೆಳಗ್ಗೆ ಸಿಗುವ ಬಿಸಿ ಬಿಸಿ ದಮ್​​ ಬಿರಿಯಾನಿ ಮಾರಾಟಕ್ಕೆ ಸದ್ಯ ಪೊಲೀಸರು ಬ್ರೇಕ್​ ಹಾಕಿದ್ದಾರೆ. ಆ ಮೂಲಕ ಅಪಘಾತ ಹಾಗೂ ಗಲಾಟೆ ಪ್ರಕರಣಗಳನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಇದು ಬಿರಿಯಾನಿ ಪ್ರಿಯರು ಮತ್ತು ಹೋಟೆಲ್ ಮಾಲೀಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಹೊಸಕೋಟೆ ದಮ್ ಬಿರಿಯಾನಿ ಕ್ರೇಜ್‌ಗೆ ಅಪಘಾತ, ಗಲಾಟೆ ನಂಟು: 4 ಗಂಟೆ ಬಿರಿಯಾನಿಗೆ ಬ್ರೇಕ್!
ಹೊಸಕೋಟೆ ದಮ್ ಬಿರಿಯಾನಿImage Credit source: tv9 kannada
ನವೀನ್ ಕುಮಾರ್ ಟಿ
| Edited By: |

Updated on: Aug 23, 2026 | 5:01 PM

Share

ಮುಖ್ಯಾಂಶಗಳು

  • ಹೊಸಕೋಟೆಯಲ್ಲಿ ಮುಂಜಾನೆ 4 ಗಂಟೆಗೆ ಬಿರಿಯಾನಿ ಸೆಂಟರ್ ಓಪನ್​​ಗೆ ಬ್ರೇಕ್
  • ಗಲಾಟೆ ಪ್ರಕರಣ ಹಾಗೂ ಅಪಘಾತಗಳು ಹೆಚ್ಚಳ ಹಿನ್ನೆಲೆ ಖಡಕ್​ ಆದೇಶ
  • ಬೆಳಿಗ್ಗೆ 4 ಗಂಟೆ ಬದಲು 6 ಗಂಟೆಗೆ ಹೋಟೆಲ್ ತೆರೆಯಲು ಸೂಚನೆ

ದೇವನಹಳ್ಳಿ, ಆಗಸ್ಟ್​ 23: ಹೊಸಕೋಟೆ ಎಂದ ತಕ್ಷಣ ಆಹಾರ ಪ್ರಿಯರಿಗೆ ನೆನಪಾಗುವುದೇ ಬೆಳ್ಳಂಬೆಳಗ್ಗೆ ಸಿಗುವ ಬಿಸಿ ಬಿಸಿ ದಮ್ ಬಿರಿಯಾನಿ (Hosakote Biryani). ವಾರಾಂತ್ಯ ಬಂತೆಂದರೆ ಸಾಕು, ಸೂರ್ಯ ಹುಟ್ಟುವುದಕ್ಕೂ ಮುನ್ನವೇ ಸಿಟಿ ಜನರು ಬಿರಿಯಾನಿ ಸವಿಯಲು ಹೊಸಕೋಟೆಯ ಹೋಟೆಲ್‌ಗಳ ಮುಂದೆ ಕ್ಯೂ ನಿಲ್ಲುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಮುಂಜಾನೆಯ ಬಿರಿಯಾನಿ ಕ್ರೇಜ್​ನಿಂದ ಹೆದ್ದಾರಿಯಲ್ಲಿ ಮೋಜು-ಮಸ್ತಿ, ಅಪಘಾತ ಹಾಗೂ ಗಲಾಟೆಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆ ಅಲರ್ಟ್ ಆದ ಹೊಸಕೋಟೆ ಪೊಲೀಸರು, ಮುಂಜಾನೆ 4 ಗಂಟೆಗೆ ಬಿರಿಯಾನಿ ಮಾರಾಟಕ್ಕೆ ಬ್ರೇಕ್ ಹಾಕಿ ಬೆಳಿಗ್ಗೆ 6 ಗಂಟೆಗೆ ಹೋಟೆಲ್ ತೆರೆಯುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಬಿರಿಯಾನಿಗೂ ಅಪಘಾತಕ್ಕೂ ಹೇಗೆ ಸಂಬಂಧ?

ವೀಕೆಂಡ್ ಬಂತೆಂದರೆ ಬೆಂಗಳೂರಿನ ಐಟಿ ಉದ್ಯೋಗಿಗಳು ಹಾಗೂ ಯುವಜನರು ನಂದಿಬೆಟ್ಟ ಸೇರಿದಂತೆ ಹೊರವಲಯದ ಹೆದ್ದಾರಿಗಳಲ್ಲಿ ಲಾಂಗ್ ಡ್ರೈವ್​​ಗೆ ಹೋಗುತ್ತಾರೆ. ರಾತ್ರಿಯಿಡೀ ನಂದಿಬೆಟ್ಟ-ಕೋಲಾರ ಹೆದ್ದಾರಿಯಲ್ಲಿ ಸುತ್ತಾಡಿ ಮೋಜು ಮಸ್ತಿ ಮಾಡುವ ಯುವಕರು, ನಂತರ ಮುಂಜಾನೆ 4 ಗಂಟೆಗೆ ಬಿರಿಯಾನಿ ತಿನ್ನಲು ಹೊಸಕೋಟೆಗೆ ಬರುತ್ತಾರೆ.

ಇದನ್ನೂ ಓದಿ: Hoskote Biryani: ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!

ಈ ರೀತಿ ಬರುವವರ ಪೈಕಿ ಹಲವರು ರಾತ್ರಿಯಿಡೀ ಮದ್ಯಪಾನ ಮಾಡಿ ನಶೆಯಲ್ಲಿ ವಾಹನ ಚಲಾಯಿಸುವುದೇ ಇದೀಗ ದೊಡ್ಡ ಕಂಟಕವಾಗಿದೆ. ನಿದ್ರೆಗೆಟ್ಟು, ಮದ್ಯದ ಅಮಲಿನಲ್ಲಿ ಅತಿವೇಗವಾಗಿ ವಾಹನ ಚಲಾಯಿಸುವುದರಿಂದ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಇದರ ಜೊತೆಗೆ, ನಶೆಯಲ್ಲೇ ಹೋಟೆಲ್ ಬಳಿ ಬರುವ ಕಿಡಿಗೇಡಿಗಳು ಸಣ್ಣಪುಟ್ಟ ವಿಚಾರಗಳಿಗೂ ಸಾರ್ವಜನಿಕವಾಗಿ ಹೊಡೆದಾಟಕ್ಕಿಳಿದ ಘಟನೆಗಳು ನಡೆದಿವೆ.

ಪಾರ್ಕಿಂಗ್ ವಿಚಾರಕ್ಕೆ ಕಿರಿಕ್: ಎಫ್‌ಐಆರ್ ದಾಖಲು

ಇದಕ್ಕೆ ತಾಜಾ ಉದಾಹರಣೆ ಎಂದರೆ ಇತ್ತೀಚೆಗೆ ಮಣಿ ದಮ್ ಬಿರಿಯಾನಿ ಬಳಿ ಬಂದಿದ್ದ ರೌಡಿಶೀಟರ್ ಯಶಸ್ವಿನಿ ಗೌಡ ಮತ್ತು ತಂಡ ಕಾರು ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ ತೆಗೆದು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಈ ಘಟನೆ ಸಂಬಂಧ ಹೊಸಕೋಟೆ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿತ್ತು. ಹೀಗೆ ಬಿರಿಯಾನಿ ಹೋಟೆಲ್‌ಗಳು ಮದ್ಯವ್ಯಸನಿಗಳ ಅಡ್ಡಾ ಹಾಗೂ ಗಲಾಟೆಯ ಕೇಂದ್ರಗಳಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಹೋಟೆಲ್ ಮಾಲೀಕರ ಸಭೆ ಕರೆದು ಮುಂಜಾನೆ 4 ಗಂಟೆ ಬದಲಿಗೆ 6 ಗಂಟೆಗೆ ಬಾಗಿಲು ತೆರೆಯುವಂತೆ ಸೂಚಿಸಿದ್ದಾರೆ.

ಪೊಲೀಸರ ಆದೇಶಕ್ಕೆ ಕ್ಯಾರೆ ಎನ್ನದ ಹೋಟೆಲ್‌ ಮಾಲೀಕರು; ನೋಟಿಸ್ ಜಾರಿ

ಪೊಲೀಸರು ಬೆಳಿಗ್ಗೆ 6 ಗಂಟೆಗೆ ತೆರೆಯುವಂತೆ ಆದೇಶಿಸಿದ್ದರೂ, ಹೋಟೆಲ್ ಮಾಲೀಕರು ಆದೇಶವನ್ನು ಗಾಳಿಗೆ ತೂರಿ ಬೆಳಿಗ್ಗೆ 4:30ರ ಸುಮಾರಿಗೆ ಎಂದಿನಂತೆ ವ್ಯಾಪಾರ ಮುಂದುವರಿಸಿದ್ದರು. ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿರುವ ಇನ್ಸ್‌ಪೆಕ್ಟರ್ ಗೋವಿಂದ್, ಎಲ್ಲಾ ಬಿರಿಯಾನಿ ಹೋಟೆಲ್‌ಗಳಿಗೂ ನೋಟಿಸ್ ಜಾರಿ ಮಾಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ ಬಿರಿಯಾನಿ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದು, ‘6 ಗಂಟೆಗೆ ಹೋಟೆಲ್ ತೆರೆದರೆ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತದೆ, ಕನಿಷ್ಠ 5 ಗಂಟೆಗಾದರೂ ಅವಕಾಶ ನೀಡಿದರೆ ಒಳ್ಳೆಯದು’ ಎನ್ನುತ್ತಿದ್ದಾರೆ.

ಇದನ್ನೂ ಓದಿ: AC ರಿಪೇರಿ ಮಾಡ್ತಿದ್ದವನಿಗೆ ಪಾಕ್ ಗ್ಯಾಂಗ್​ಸ್ಟರ್​​ಗಳ​​​​ ನಂಟು: ಇವನ ಕಥೆ ಕೇಳಿದ್ರೆ ಶಾಕ್ ಆಗ್ತೀರಿ

ಒಟ್ಟಾರೆ ಬಿರಿಯಾನಿ ಹೆಸರಲ್ಲಿ ಮೋಜು-ಮಸ್ತಿ ಮಾಡುತ್ತಾ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿರುವುದಕ್ಕೆ ಬ್ರೇಕ್ ಹಾಕಲು ಹೊಸಕೋಟೆ ಪೊಲೀಸರು ಮುಂದಾಗಿದ್ದಾರೆ. ಇನ್ನೂ ಮುಂದಿನ ವಾರದಿಂದ ಆದರೂ ಪೊಲೀಸರ ಆದೇಶವನ್ನ ಬಿರಿಯಾನಿ ಹೋಟೆಲ್ ಮಾಲೀಕರು ಪಾಲನೆ ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us