ಒಂದೇ ಏರಿಯಾ, ಬೇರೆ ಸ್ಥಳ: ಬೆಂಗಳೂರಿನ ಜನತೆಗೂ ಶುರುವಾಯ್ತು ಚಿರತೆ ಕಾಟ
ಇಷ್ಟು ದಿನ ಗುಡ್ಡ, ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಕಾಡು ಪ್ರಾಣಿಗಳು ಪ್ರತ್ಯಕ್ಷವಾಗಿರುವ ಪ್ರಕರಣಗಳು ಕೇಳಿದ್ದೇವೆ. ಆದ್ರೆ, ಇದೀಗ ಸದಾ ಜನದಟ್ಟಣೆಯಿಂದ ಕೂಡಿರುವ ಬೆಂಗಳೂರಿಗೆ ಚಿರತೆ ಲಗ್ಗೆ ಇಟ್ಟಿದೆ. ಹೌದು.. ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿ ಚಿರತೆ ಭೀತಿ ಕೊನೆಗೊಳ್ಳುವ ಲಕ್ಷಣಗಳೇ ಕಾಣಿಸ್ತಿಲ್ಲ. ಬೆಂಗಳೂರಿನ ಬನಶಂಕರಿ 5ನೇ ಹಂತದಲ್ಲಿ ಮತ್ತೊಮ್ಮೆ ಚಿರತೆ ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.ನಾಯಿಗಳ ಮೇಲೆ ದಾಳಿಗೆ ಯತ್ನಿಸಿರುವ ಈ ಒಂಟಿ ಚಿರತೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರು, ಸೆಪ್ಟೆಂಬರ್ 11): ಬೆಂಗಳೂರಿನ ಬನಶಂಕರಿ 5ನೇ ಹಂತದ 2ನೇ ಬ್ಲಾಕ್ ಹಾಗೂ 6ನೇ ಹಂತದ ಸುತ್ತಮುತ್ತ ಈಗ ಚಿರತೆಯದ್ದೇ ಸುದ್ದಿ. ನಿನ್ನೆ (ಸೆ.10) ಮುಂಜಾನೆ ಸರಿಯಾಗಿ 4 ಗಂಟೆಗೆ ಮನೆಯೊಂದರ ಮುಂದೆ ಒಂಟಿ ಚಿರತೆ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇಶವ್ ಎಂಬುವವರ ಮನೆಯ ಮುಂದೆ ಹೆಜ್ಜೆ ಹಾಕಿದ ಚಿರತೆ, ಅಲ್ಲಿದ್ದ ನಾಯಿಗಳ ಮೇಲೆ ದಾಳಿ ಮಾಡಲು ಮುಂದಾಗಿತ್ತು. ಆದರೆ, ನಾಯಿಗಳು ಜೋರಾಗಿ ಬೊಗಳಲು ಪ್ರಾರಂಭಿಸುತ್ತಿದ್ದಂತೆ ಆತಂಕಗೊಂಡ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ. ಬೆಳಗ್ಗೆ ಕೆಲಸಗಾರ ಬಂದು ಮನೆ ಮುಂಭಾಗದಲ್ಲಿ ಚಿರತೆಯ ಹೆಜ್ಜೆ ಗುರುತುಗಳನ್ನು ನೋಡಿ ಮಾಲೀಕ ಕೇಶವ್ ಅವರಿಗೆ ತಿಳಿಸಿದ್ದಾರೆ. ತಕ್ಷಣ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಚಿರತೆಯ ಓಡಾಟ ಸಾಬೀತಾಗಿದೆ.
ಇನ್ನೂ ಬನಶಂಕರಿ 5ನೇ ಹಂತದ ಜನರಿಗೆ ಇದು ಎರಡನೇ ಬಾರಿಯ ಆಘಾತ. ಜುಲೈ 25ರಂದು ಸಂಜೆ 7 ಗಂಟೆಗೆ ಇದೇ 2ನೇ ಬ್ಲಾಕ್ನಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಆ ಸಮಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಚಿರತೆಯನ್ನು ಕಾಡಿಗೆ ಅಟ್ಟಿದ್ದರು. ಆದರೆ, ಈಗ ಮತ್ತೆ ಅದೇ ಜಾಗದಲ್ಲಿ ಒಂಟಿ ಚಿರತೆ ಕಾಣಿಸಿಕೊಂಡಿರುವುದು ಜನರನ್ನು ಮನೆಯಿಂದ ಹೊರಬರದಂತೆ ಮಾಡಿದೆ. ಸಣ್ಣ ಮಕ್ಕಳನ್ನು ಇಟ್ಟುಕೊಂಡಿರುವ ಕುಟುಂಬಗಳು ತೀವ್ರ ಭೀತಿಯಲ್ಲಿ ದಿನ ಕಳೆಯುತ್ತಿದ್ದು, ಅರಣ್ಯ ಇಲಾಖೆ ಕೂಡಲೇ ಕಾರ್ಯಾಚರಣೆಗಿಳಿಯಬೇಕೆಂದು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಚಿರತೆ ಓಡಾಟ: ಭಯದಲ್ಲಿ ಮನೆಯಿಂದ ಹೊರಬರದ ಜನ
ಒಟ್ನಲ್ಲಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಪಟಾಕಿ ಸೌಂಡ್ಗೆ ಕಾಡಿಗೆ ಓಡಿದ್ದ ಚಿರತೆ, ಈಗ ಮತ್ತೆ ಬನಶಂಕರಿಯಲ್ಲಿ ಪ್ರತ್ಯಕ್ಷವಾಗಿ ನಿವಾಸಿಗಳ ನಿದ್ದೆಗೆಡಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೇವಲ ಪರಿಶೀಲನೆಗೆಷ್ಟೇ ಸೀಮಿತವಾಗದೆ, ಬೋನು ಇಟ್ಟು ಈ ಒಂಟಿ ಚಿರತೆಯನ್ನು ತಕ್ಷಣವೇ ಸೆರೆಹಿಡಿಯಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:14 pm, Fri, 11 September 26




