AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

H1N1 Alert: ಕರ್ನಾಟಕದಲ್ಲಿ 4,000 ಗಡಿ ದಾಟಿದ H1N1 ಪ್ರಕರಣಗಳು!

ಕರ್ನಾಟಕದಲ್ಲಿ H1N1 ಸೋಂಕಿನ ಪ್ರಕರಣಗಳು 4,000ರ ಗಡಿ ದಾಟಿದ್ದು, ಆರೋಗ್ಯ ಇಲಾಖೆಯು ತೀವ್ರ ನಿಗಾ ವಹಿಸಿದೆ. ಹವಾಮಾನ ಬದಲಾವಣೆಯಿಂದ ಸೋಂಕು ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ಔಷಧ ಮತ್ತು ಪರೀಕ್ಷಾ ಕಿಟ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಸೂಚಿಸಲಾಗಿದೆ. ಜ್ವರ ಹಾಗೂ ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆಯಲು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

H1N1 Alert: ಕರ್ನಾಟಕದಲ್ಲಿ 4,000 ಗಡಿ ದಾಟಿದ H1N1 ಪ್ರಕರಣಗಳು!
ಸಾಂದರ್ಭಿಕ ಚಿತ್ರ Image Credit source: gettyimages.com
ಭಾವನಾ ಹೆಗಡೆ
|

Updated on: Aug 23, 2026 | 10:50 AM

Share

ಮುಖ್ಯಾಂಶಗಳು

  • ಕರ್ನಾಟಕದಲ್ಲಿ H1N1 ಸೋಂಕಿನ ಪ್ರಕರಣಗಳ ಸಂಖ್ಯೆ 4,000ರ ಗಡಿ ದಾಟಿದೆ.
  • ಪರಿಸ್ಥಿತಿ ನಿಯಂತ್ರಿಸಲು ಆರೋಗ್ಯ ಇಲಾಖೆಯಿಂದ ತೀವ್ರ ಪರಿಶೀಲನೆ ಮತ್ತು ಮುನ್ನೆಚ್ಚರಿಕೆ.
  • ಆಸ್ಪತ್ರೆಗಳಲ್ಲಿ ಔಷಧಿ ಮತ್ತು ಚಿಕಿತ್ಸಾ ಸೌಲಭ್ಯ ಸಿದ್ಧವಾಗಿಟ್ಟುಕೊಳ್ಳಲು ಇಲಾಖೆ ಸೂಚನೆ.

ಬೆಂಗಳೂರು, ಆಗಸ್ಟ್ 23: ರಾಜ್ಯದಲ್ಲಿ H1N1 (ಇನ್‌ಫ್ಲುಯೆಂಜಾ ಎ) ಸೋಂಕಿನ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿದ್ದು, ಪ್ರಕರಣಗಳ ಸಂಖ್ಯೆ 4,000ರ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಪರಾಮರ್ಶಿಸಲು ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಬಿಗಿಗೊಳಿಸಲು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮಗ್ರ ಪರಿಶೀಲನೆಗೆ ಮುಂದಾಗಿದೆ.

ಮಕ್ಕಳಲ್ಲಿ, ವೃದ್ಧರಲ್ಲಿ ಸೋಂಕಿನ ಲಕ್ಷಣಗಳು ಹೆಚ್ಚು

ರಾಜ್ಯಾದ್ಯಂತ ಹವಾಮಾನ ಬದಲಾವಣೆ ಮತ್ತು ಸಾಲು ಸಾಲು ಮಳೆಯಿಂದಾಗಿ ವೈರಲ್ ಸೋಂಕುಗಳು ವೇಗವಾಗಿ ಹರಡುತ್ತಿವೆ. ವಿಶೇಷವಾಗಿ ಬೆಂಗಳೂರು ನಗರ ಸೇರಿದಂತೆ ಹಲವು ಪ್ರಮುಖ ಜಿಲ್ಲೆಗಳಲ್ಲಿ H1N1 ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಸಣ್ಣ ಮಕ್ಕಳಲ್ಲಿ, ವೃದ್ಧರಲ್ಲಿ ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಲ್ಲಿ ಈ ಸೋಂಕಿನ ಲಕ್ಷಣಗಳು ತೀವ್ರವಾಗಿ ಕಂಡುಬರುತ್ತಿವೆ.

ಮಾದರಿ ಪರೀಕ್ಷಾ ಕಿಟ್‌ಗಳನ್ನಿಡಲು ನಿರ್ದೇಶನ

ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿರುವ ಆರೋಗ್ಯ ಇಲಾಖೆಯು, ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದೆ. ಆಸ್ಪತ್ರೆಗಳಲ್ಲಿ ಮಾದರಿ ಪರೀಕ್ಷಾ ಕಿಟ್‌ಗಳು, ‘ಟ್ಯಾಮಿಫ್ಲೂ’ (Tamiflu) ಸೇರಿದಂತೆ ಅಗತ್ಯ ಔಷಧಗಳು ಮತ್ತು ಐಸಿಯು ಹಾಸಿಗೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಲಾಗಿದೆ.

ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಸೂಚನೆ

ಸಾರ್ವಜನಿಕರು ತೀವ್ರ ಜ್ವರ, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ ಅಥವಾ ದೇಹದಂಡನೆ ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವಂತೆ ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸ್ವಯಂ ವೈದ್ಯಕೀಯ (Self-medication) ಚಿಕಿತ್ಸೆಯಿಂದ ದೂರವಿರಲು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ಕೈಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವಂತಹ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಸೂಚಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us