AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರಂಜಾ ಜಲಾಶಯದಲ್ಲಿ ಮೀನು ಉತ್ಪಾದನೆ ಕುಸಿತ, ಬೀದರ್​ನಲ್ಲಿ ಬರಿದಾಗುತ್ತಿದೆ ಮೀನುಗಾರರ ಬದುಕು

Bidar News: ಬೀದರ್ ಜಿಲ್ಲೆಯ ಕಾರಂಜಾ ಜಲಾಶಯದಲ್ಲಿ ಮೀನು ಮರಿಗಳನ್ನು ಸಮರ್ಪಕವಾಗಿ ಬಿಡದಿರುವುದು ಹಾಗೂ ಅಕ್ರಮ ಮೀನುಗಾರಿಕೆಗೆ ಕಡಿವಾಣ ಬೀಳದ ಕಾರಣ ಸ್ಥಳೀಯ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲಾಖೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ಮೀನುಗಾರರು, ಕೂಡಲೇ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

ಕಾರಂಜಾ ಜಲಾಶಯದಲ್ಲಿ ಮೀನು ಉತ್ಪಾದನೆ ಕುಸಿತ, ಬೀದರ್​ನಲ್ಲಿ ಬರಿದಾಗುತ್ತಿದೆ ಮೀನುಗಾರರ ಬದುಕು
ಕಾರಂಜಾ ಜಲಾಶಯImage Credit source: tv9
ಸುರೇಶ್ ನಾಯಕ್
| Edited By: |

Updated on: Jul 24, 2026 | 2:54 PM

Share

ಬೀದರ್, ಜುಲೈ 24: ಬೀದರ್ (Bidar) ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಳ್ಳಿ (ಕೆ) ಗ್ರಾಮದ ಸಮೀಪದ ಕಾರಂಜಾ ಜಲಾಶಯವನ್ನು ಅವಲಂಬಿಸಿರುವ ನೂರಾರು ಮೀನುಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಲಾಶಯದಲ್ಲಿ ಸಮರ್ಪಕ ಪ್ರಮಾಣದಲ್ಲಿ ಮೀನು ಮರಿಗಳನ್ನು ಬಿಡದಿರುವುದರಿಂದ ಮೀನು ಉತ್ಪಾದನೆ ಗಣನೀಯವಾಗಿ ಕುಸಿದಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಇದೇ ವೇಳೆ ತೆಲಂಗಾಣದಿಂದ ಬರುವ ಕೆಲವರು ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

200ಕ್ಕೂ ಹೆಚ್ಚು ಮೀನುಗಾರರು ಸಂಕಷ್ಟದಲ್ಲಿ

ಜಲಾಶಯವನ್ನೇ ನಂಬಿಕೊಂಡು ಸುಮಾರು 200ಕ್ಕೂ ಹೆಚ್ಚು ಪರವಾನಗಿ ಪಡೆದ ಮೀನುಗಾರರು ಜೀವನ ಸಾಗಿಸುತ್ತಿದ್ದಾರೆ. ಆದರೆ ಕಳೆದ ಕೆಲವು ತಿಂಗಳಿಂದ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೆ ಬಲೆ ಹಾಕಿದರೂ ಸಮರ್ಪಕ ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಮೀನು ಮರಿಗಳನ್ನು ಬಿಡದೇ ಇರುವುದೇ ಸಮಸ್ಯೆ!

ಮೀನುಗಾರರ ಪ್ರಕಾರ, ಪ್ರತಿವರ್ಷ ಜಲಾಶಯದಲ್ಲಿ ನಿಯಮಿತವಾಗಿ ಮೀನು ಮರಿಗಳನ್ನು ಬಿಡಬೇಕಾದ ಮೀನುಗಾರಿಕೆ ಇಲಾಖೆ ಈ ಬಾರಿ ಆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಇದರ ಪರಿಣಾಮವಾಗಿ ಮೀನುಗಳ ಸಂಖ್ಯೆ ಕಡಿಮೆಯಾಗಿದ್ದು, ಮೀನುಗಾರಿಕೆ ವೃತ್ತಿಯನ್ನೇ ನಂಬಿಕೊಂಡಿರುವ ಕುಟುಂಬಗಳ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಸಾವಿರಾರು ರೂಪಾಯಿ ವೆಚ್ಚ ಮಾಡಿ ಸರ್ಕಾರದಿಂದ ಅಧಿಕೃತ ಪರವಾನಗಿ ಪಡೆದಿರುವ ಮೀನುಗಾರರು ಬಲೆ, ದೋಣಿ, ಡೀಸೆಲ್ ಸೇರಿದಂತೆ ದಿನನಿತ್ಯದ ವೆಚ್ಚವನ್ನು ಭರಿಸುತ್ತಿದ್ದರೂ, ಆದಾಯ ಮಾತ್ರ ಶೂನ್ಯಕ್ಕೆ ಸಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೀನುಗಾರರ ಹೇಳಿಕೆಯಂತೆ, ಹಿಂದೆ ಪ್ರತಿದಿನ ಉತ್ತಮ ಪ್ರಮಾಣದಲ್ಲಿ ಮೀನು ದೊರೆಯುತ್ತಿತ್ತು. ಅದರಿಂದ ಕುಟುಂಬ ನಿರ್ವಹಣೆ ಸುಗಮವಾಗಿತ್ತು. ಆದರೆ ಈಗ ಹಲವು ದಿನಗಳಿಂದ ಬಲೆಗೆ ಕೆಲವೇ ಮೀನುಗಳು ಬೀಳುತ್ತಿದ್ದು, ಕೆಲ ದಿನಗಳಲ್ಲಿ ಒಂದೂ ಮೀನು ಸಿಗದೇ ಖಾಲಿ ಕೈಯಲ್ಲಿ ಮನೆಗೆ ಮರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ತೆಲಂಗಾಣದಿಂದ ಬಂದು ಅಕ್ರಮ ಮೀನುಗಾರಿಕೆ

ಇದರ ಜೊತೆಗೆ ತೆಲಂಗಾಣದಿಂದ ಬರುವ ಕೆಲ ಮೀನುಗಾರರು ರಾತ್ರಿ ವೇಳೆ ನಿಯಮ ಉಲ್ಲಂಘಿಸಿ ಜಲಾಶಯದಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಸ್ಥಳೀಯ ಪರವಾನಗಿ ಪಡೆದ ಮೀನುಗಾರರಿಗೆ ಇನ್ನಷ್ಟು ನಷ್ಟ ಉಂಟಾಗುತ್ತಿದೆ ಎಂದು ಅವರು ದೂರಿದ್ದಾರೆ.

ಮೀನುಗಾರರ ಒತ್ತಾಯವೇನು?

ಈ ಕುರಿತು ಹಲವು ಬಾರಿ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ. ಕಾರಂಜಾ ಜಲಾಶಯದಲ್ಲಿ ಗುಣಮಟ್ಟದ ಮೀನು ಮರಿಗಳನ್ನು ನಿಯಮಿತವಾಗಿ ಬಿಡಬೇಕು. ಜೊತೆಗೆ ಅಕ್ರಮ ಮೀನುಗಾರಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬೀದರ್​: ಕಾರಂಜಾ ಕಾಲುವೆ ದುರಸ್ತಿಗೆ 181 ಕೋಟಿ ರೂ ಬಿಡುಗಡೆಗೆ ಸಂಪುಟ ಅಸ್ತು; ಈಗಲಾದ್ರೂ ಸಿಗುತ್ತಾ ರೈತರಿಗೆ ನೀರು?

ಮೀನುಗಾರಿಕೆ ಇಲಾಖೆಯ ನಿರ್ಲಕ್ಷ್ಯದಿಂದ ಸರ್ಕಾರಕ್ಕೂ ಆದಾಯ ತರುವ ಮೀನುಗಾರಿಕೆ ಕ್ಷೇತ್ರವೇ ಹಿನ್ನಡೆ ಅನುಭವಿಸುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಕಾರಂಜಾ ಜಲಾಶಯದಲ್ಲಿ ಮೀನು ಮರಿಗಳನ್ನು ಬಿಡುವುದು, ಅಕ್ರಮ ಮೀನುಗಾರಿಕೆಗೆ ಕಡಿವಾಣ ಹಾಕುವುದು ಹಾಗೂ ಪರವಾನಗಿ ಪಡೆದ ಸ್ಥಳೀಯ ಮೀನುಗಾರರ ಹಿತಾಸಕ್ತಿಯನ್ನು ರಕ್ಷಿಸುವುದು ಈಗ ಅತ್ಯಗತ್ಯವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಮೀನುಗಾರಿಕೆ ಇಲಾಖೆ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us