‘ನಾಲ್ವಡಿ ಕೃಷ್ಣರಾಜ ಒಡೆಯರ್ ಸೇವೆ ಎಂದಿಗೂ ಮರೆಯಲಾಗದು’: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಶಿಕ್ಷಣ ಸಂಸ್ಥೆಯ ಹೊಸ ಕಟ್ಟಡಕ್ಕೆ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಬ್ಲಾಕ್ ಎಂದು ಹೆಸರು ಇಡಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪಾಲ್ಗೊಂಡಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರು ಇಟ್ಟಿದ್ದಕ್ಕೆ ಸಂತಸ ಆಗಿದೆ ಎಂದು ಅವರು ಹೇಳಿದರು. ಬಳಿಕ ಮಾತನಾಡಿದ ಅವರು ಈ ಸಂಸ್ಥೆಯ ಕಾರ್ಯಗಳನ್ನು ಶ್ಲಾಘಿಸಿದರು.

ಡಾ. ಬಿಎನ್ವಿ ಜ್ಯೋತಿ ಮೆಮೋರಿಯಲ್ ಎಡ್ಯುಕೇಶನಲ್ ಟ್ರಸ್ಟ್ನ ಅಂಗ ಸಂಸ್ಥೆಯಾದ ‘ಜ್ಯೋತಿ ಇನ್ಸಿಟ್ಯೂಟ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್’ನ ಹೊಸ ಕಟ್ಟಡಕ್ಕೆ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಬ್ಲಾಕ್ ಅನ್ನು ಮೈಸೂರು ಸಂಸ್ಥಾನ ಅರಸರು ಮತ್ತು ಕೊಡಗು-ಮೈಸೂರು ಕ್ಷೇತ್ರದ ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಆ ಬಳಿಕ ಅವರು ಮಾತನಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ್ದ ಕೊಡುಗೆಯನ್ನು ಯದುವೀರ್ ಅವರು ಸ್ಮರಿಸಿದರು.
ನೂತನ ಕಟ್ಟಡದ ಉದ್ಘಾಟನೆ ಬಳಿಕ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತಾಡಿದರು. ‘ಈ ನೂತನ ಕಟ್ಟಡಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಇಟ್ಟಿರುವುದಕ್ಕೆ ಸಂತಸ ಆಗಿದೆ. ಅವರ ಹೆಸರು ಇಡೀ ಕರುನಾಡಿಗೆ ಹೆಮ್ಮೆಯ ವಿಷಯವಾಗಿದೆ. ತಮ್ಮ ಸಂಪೂರ್ಣ ಜೀವನವನ್ನು ಅವರು ಸಾಮಾಜಿಕ ಹಾಗೂ ಆರ್ಥಿಕ ನ್ಯಾಯಕ್ಕಾಗಿ ಮುಡುಪಾಗಿಟ್ಟಿದ್ದರು’ ಎಂದರು ಯದುವೀರ್.
‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವೆಯನ್ನು ಪರಿಗಣಿಸಿ, ಜ್ಯೋತಿ ಶಿಕ್ಷಣ ಸಂಸ್ಥೆಯ ಒಂದು ಕಟ್ಟಡಕ್ಕೆ ಅವರ ಹೆಸರನ್ನೇ ಇಡಲಾಗಿದೆ. ಸಂಸ್ಥೆಯು ಸಕರಾತ್ಮಕವಾಗಿ ಕೆಲಸಗಳನ್ನು ಮಾಡುತ್ತಿರುವುದಕ್ಕೆ ಶ್ಲಾಘಿಸಬೇಕಾದ ವಿಷಯ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ. ಜ್ಯೋತಿ ಸಂಸ್ಥೆಗೆ ಐಎಸ್ಓ ಪ್ರಮಾಣ ಪತ್ರ ಬಂದಿದೆ. ಇದು ಮುಂದೆ ದೊಡ್ಡ ಮಟ್ಟದಲ್ಲಿ ಬೆಳೆಯಬೇಕೆಂದು ಪ್ರಾರ್ಥನೆ ಮಾಡುತ್ತೇನೆ. ಇಲ್ಲಿಗೆ ಬಂದಾಗ ಸಕರಾತ್ಮಕವಾದ ಕಂಪನ ಬಂತು. ಇದೇ ರೀತಿಯಲ್ಲಿ ಉಳಿದ ಎಲ್ಲಾ ಸಂಸ್ಥೆಗಳು ಕೆಲಸ ಮಾಡಿದರೆ ಸಮಾಜದ ಏಳಿಗೆ ನಿಶ್ಚಿತವಾಗಿ ಆಗುತ್ತದೆ’ ಎಂದು ಯದುವೀರ್ ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಮಂತ್ರಾಲಯದ ರಾಯರ 353ನೇ ಆರಾಧನಾ ಮಹೋತ್ಸವ; ಸಂಸದ ಯದುವೀರ್ ಭಾಗಿ
ಇದೇ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ರಾಜೇಶ್ ಕೆ. ಅವರು ಮಾತನಾಡಿ, ಸಂಸ್ಥೆಯು ಬೆಳೆದು ಬಂದ ರೀತಿಯನ್ನು ಮೆಲುಕು ಹಾಕಿದರು. ಸುಂದರ ಅರ್ಥಪೂರ್ಣ ಸಮಾರಂಭದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಟ್ರಸ್ಟ್ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಬಿ.ವಿ. ಸೀತಾ, ನಿರ್ದೇಶಕರುಗಳು, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ, ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.