ಸಚಿವ ಸ್ಥಾನ ವಂಚಿತ ಶಾಸಕರ ಬಂಡಾಯ ಶಮನಕ್ಕೆ ‘ಕೈ’ ಕಸರತ್ತು; ಕೃಷ್ಣಪ್ಪ, ಹೆಚ್ಕೆ ಪಾಟೀಲ್, ಜಯಚಂದ್ರ ಮನವೊಲಿಕೆ
ಸಚಿವ ಸ್ಥಾನ ವಂಚಿತ ಶಾಸಕರ ಅಸಮಾಧಾನ ಶಮನಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಡೆಸಿದ ಸಂಧಾನ ಮಾತುಕತೆ ಫಲ ನೀಡಿದೆ. ಕೆಲ ಶಾಸಕರು ರಾಜೀನಾಮೆ ವಾಪಸ್ ಪಡೆಯಲು ಮುಂದಾಗಿದ್ದರೆ, ಇನ್ನೂ ಕೆಲವರ ಅಸಮಾಧಾನ ಮುಂದುವರಿದಿದೆ.

ಮುಖ್ಯಾಂಶಗಳು
- ಸಚಿವ ಸ್ಥಾನ ವಂಚಿತರ ಅಸಮಾಧಾನ ಶಮನಕ್ಕೆ ಕಸರತ್ತು
- ಯಶವಂತರಾಯಗೌಡ ರಾಜೀನಾಮೆ ವಾಪಸ್ ಪಡೆಯಲು ನಿರ್ಧಾರ
- ಇನ್ನೂ ಕೆಲ ಶಾಸಕರ ಅಸಮಾಧಾನ ಮುಂದುವರಿಕೆ
ಬೆಂಗಳೂರು, ಆಗಸ್ಟ್ 6: ಸಚಿವ ಸ್ಥಾನ ಸಿಗದೆ ಬಂಡಾಯ ಎದ್ದಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಜ್ಜಾಗಿದ್ದರು. ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಸಂಪುಟ ವಿಸ್ತರಣೆ ಬೆನ್ನಲ್ಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಸಚಿವ ಸ್ಥಾನ ವಂಚಿತ ಶಾಸಕರ ಬಂಡಾಯ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಅಸಮಾಧಾನಿತರ ಮನವೊಲಿಸಲು ಖುದ್ದು ಡಿಕೆ ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ (Congress) ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅಖಾಡಕ್ಕಿಳಿದಿದ್ದರು. ಒಂದು ಹಂತದಲ್ಲಿ ಅತೃಪ್ತರ ಆಕ್ರೋಶ ತಣಿಸುವಲ್ಲಿ ಮುಖ್ಯಮಂತ್ರಿ ಯಶಸ್ವಿಯಾಗಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ತಮ್ಮ ರಾಜೀನಾಮೆ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ.
ಸಚಿವ ಸ್ಥಾನ ಸಿಗದೆ ಕೆಂಡಾಮಂಡಲರಾಗಿದ್ದ ಶಾಸಕ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಕೃಷ್ಣ ಅವರನ್ನೂ ಮನವೊಲಿಸಲಾಗಿದೆ. ಬುಧವಾರ ಕೃಷ್ಣಪ್ಪ ಅವರ ನಿವಾಸಕ್ಕೆ ಖುದ್ದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸುರ್ಜೇವಾಲ ತೆರಳಿದ್ದರು. ಸಚಿವರಾದ ಜಮೀರ್ ಅಹಮದ್, ಹೆಚ್.ಸಿ. ಬಾಲಕೃಷ್ಣ ಸೇರಿದಂತೆ ಹಲವರೂ ಭೇಟಿ ನೀಡಿದ್ದರು. ಪಕ್ಷದಿಂದ ತಪ್ಪಾಗಿರುವುದು ನಿಜ. ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ಅವರಿಗೆ ಸಿಎಂ ಡಿಕೆಶಿ ಮತ್ತು ಸುರ್ಜೇವಾಲ ಆಶ್ವಾಸನೆ ನೀಡಿದ್ದಾರೆ. ಯಾವುದೇ ಭಿನ್ನಮತ, ಅಸಮಾಧಾನ ಇಲ್ಲ ಎಂದು ಭೇಟಿ ಬಳಿಕ ಸಿಎಂ ಡಿಕೆಶಿ ಹಾಗೂ ಸುರ್ಜೇವಾಲ ಹೇಳಿದ್ದಾರೆ.
ಎಂ. ಕೃಷ್ಣಪ್ಪ ಮಾತನಾಡಿ, ‘ತಪ್ಪಾಗಿದೆ, ಸರಿಪಡಿಸುತ್ತೇವೆ’ ಎಂದು ಸಿಎಂ ಭರವಸೆ ನೀಡಿದ್ದಾರೆ. ಸಚಿವ ಸ್ಥಾನ ಹೊರತುಪಡಿಸಿ ಬೇರೆ ಏನು ಕೊಟ್ಟರೂ ಒಪ್ಪಿಗೆ ಇಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಹೆಚ್.ಕೆ. ಪಾಟೀಲ್ ಅವರಿಗೂ ಈ ಬಾರಿ ಸಚಿವ ಸ್ಥಾನ ಕೈತಪ್ಪಿದೆ. ಮುನಿಸಿಕೊಂಡಿದ್ದ ಹೆಚ್.ಕೆ. ಪಾಟೀಲ್ ಅವರ ನಿವಾಸಕ್ಕೆ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಬಿ.ಕೆ. ಹರಿಪ್ರಸಾದ್ ಭೇಟಿ ನೀಡಿ ಅತೃಪ್ತಿ ತಣಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಹಾಗೂ ಹಂಗಾಮಿ ಸ್ಪೀಕರ್ ಆಫರ್ ತಿರಸ್ಕರಿಸಿರುವ ಶಿರಾ ಕ್ಷೇತ್ರದ ಶಾಸಕ ಟಿ.ಬಿ. ಜಯಚಂದ್ರ ಅವರ ನಿವಾಸಕ್ಕೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭೇಟಿ ನೀಡಿದ್ದಾರೆ. ಕೆಲಹೊತ್ತು ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಅಸಮಾಧಾನಿತ ಶಾಸಕರಾದ ಅಶೋಕ್ ಪಟ್ಟಣ್, ಎನ್.ವೈ. ಗೋಪಾಲಕೃಷ್ಣ ಅವರಿಗೂ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಸಮಾಧಾನ ಹೇಳಿದ್ದಾರೆ.
ಇದೆಲ್ಲದರ ನಡುವೆ ಆಳಂದ ಶಾಸಕ ಬಿ.ಆರ್. ಪಾಟೀಲ್ ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನು ಗುಬ್ಬಿ ಶ್ರೀನಿವಾಸ್ ಅವರಿಗೆ ಸಿಎಂ ಕರೆ ಮಾಡಿ ಮನವೊಲಿಸಿದರೂ ಅಸಮಾಧಾನ ತಣಿದಿಲ್ಲ. ಅತ್ತ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹಾಗೂ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕೂಡ ಇನ್ನೂ ಅಸಮಾಧಾನ ಹೊರಹಾಕುತ್ತಿದ್ದಾರೆ.
ಇಂದು ಬಂಗಾರಪೇಟೆ ಬಂದ್ಗೆ ಕರೆ; ಶಿವಣ್ಣನವರ್ ಪರ ಹಾವೇರಿಯಲ್ಲಿ ಪ್ರತಿಭಟನೆ
ಎಸ್.ಎನ್. ನಾರಾಯಣಸ್ವಾಮಿ ಅವರ ಬೆಂಬಲಿಗರು ಇಂದು ಬಂಗಾರಪೇಟೆ ಪಟ್ಟಣ ಬಂದ್ಗೆ ಕರೆ ನೀಡಿದ್ದಾರೆ. ಮತ್ತೊಂದೆಡೆ ಹಾವೇರಿಯಲ್ಲಿ ಕುರುಬ ಸಮುದಾಯದ ಶಾಸಕ ಶಿವಣ್ಣನವರ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಬೆಂಬಲಿಗರು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
‘ಇದೊಂದು ಪೇಮೆಂಟ್ ಸಂಪುಟ’ ಎಂದು ವಿಪಕ್ಷ ನಾಯಕ ಅಶೋಕ್ ಕಿಡಿ
ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಹೈಕಮಾಂಡ್ ನಾಯಕರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆಡಿಯೋ ವೈರಲ್ ಆಗಿದ್ದು, ಇದು ವಿಪಕ್ಷ ನಾಯಕರಿಗೆ ಅಸ್ತ್ರವಾಗಿದೆ. ಇದನ್ನು ಉಲ್ಲೇಖಿಸಿ ವಿಪಕ್ಷ ನಾಯಕ ಅಶೋಕ್, ‘ಇದು ಪೇಮೆಂಟ್ ಸಂಪುಟ’ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಅಸಮಾಧಾನಿತ ಹಿರಿಯ ಶಾಸಕನ ಮನವೊಲಿಕೆಗೆ ಅಖಾಡಕ್ಕಿಳಿದ ಹೈಕಮಾಂಡ್
ಅದೇನೇ ಇರಲಿ, ಸಚಿವ ಸ್ಥಾನ ವಂಚಿತ ಶಾಸಕರ ಬಂಡಾಯ ಸದ್ಯಕ್ಕೆ ತಣ್ಣಗಾಗಿರಬಹುದು. ಆದರೆ, ಬೂದಿ ಮುಚ್ಚಿದ ಕೆಂಡದಂತೆ ಯಾವಾಗ ಬೇಕಾದರೂ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




