AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರೀಯ ಕ್ರೀಡಾ ದಿನದ ಹಿನ್ನೆಲೆಯಲ್ಲಿ ನಾಳೆ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ದೇಶದ ಕ್ರೀಡಾ ಪಯಣದಲ್ಲಿ ಯುವಜನತೆಯನ್ನು ತೊಡಗಿಸಿಕೊಳ್ಳುವ, ಅವರ ಆಕಾಂಕ್ಷೆಗಳನ್ನು ಹಂಚಿಕೊಳ್ಳುವ ಮತ್ತು ಕ್ರೀಡಾ ಕ್ಷೇತ್ರ ಹಾಗೂ ಯುವ ನೇತೃತ್ವದ 'ವಿಕಸಿತ ಭಾರತ'ಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ನಡೆಯಲಿರುವ 'ಖೇಲೋ ಇಂಡಿಯಾ ಸಂವಾದ'ದಲ್ಲಿ ಯುವಜನರೊಂದಿಗೆ ಸಂವಾದ ನಡೆಸಲಿದ್ದಾರೆ. 'ಖೇಲೋ ಇಂಡಿಯಾ ಸಂವಾದ'ದಲ್ಲಿ ಪ್ರಧಾನಿ ಮೋದಿ ಅವರ ವರ್ಚುವಲ್ ಭಾಷಣವು ಕ್ರೀಡೆ, ಒಲಿಂಪಿಕ್ ಆಕಾಂಕ್ಷೆಗಳು, ಯುವ ನೇತೃತ್ವ, ವಿಕಸಿತ ಭಾರತ ಮತ್ತು 'ನಶಾ ಮುಕ್ತ ಯುವಕರು' ಎಂಬ 5 ಮುಖ್ಯ ವಿಷಯಗಳ ಸುತ್ತ ರೂಪುಗೊಳ್ಳಲಿದೆ.

ರಾಷ್ಟ್ರೀಯ ಕ್ರೀಡಾ ದಿನದ ಹಿನ್ನೆಲೆಯಲ್ಲಿ ನಾಳೆ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ
Pm ModiImage Credit source: PTI
ಸುಷ್ಮಾ ಚಕ್ರೆ
|

Updated on: Aug 26, 2026 | 4:21 PM

Share

ನವದೆಹಲಿ, ಆಗಸ್ಟ್ 26: ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಹಿನ್ನೆಲೆಯಲ್ಲಿ ಸರ್ಕಾರದ ಯುವ ಸಬಲೀಕರಣ ಪ್ರಯತ್ನಗಳ ಭಾಗವಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ನಾಳೆ (ಗುರುವಾರ) ರಾಷ್ಟ್ರವ್ಯಾಪಿ ಕಾರ್ಯಕ್ರಮವಾದ ‘ಖೇಲೋ ಇಂಡಿಯಾ ಸಂವಾದ’ದ ಮೂಲಕ ದೇಶಾದ್ಯಂತದ ವಿದ್ಯಾರ್ಥಿಗಳು ಮತ್ತು ಯುವಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಕ್ರೀಡೆ, ಯುವ ನೇತೃತ್ವ ಮತ್ತು ನಾಗರಿಕ ಭಾಗವಹಿಸುವಿಕೆಯನ್ನು ಕೇಂದ್ರವಾಗಿಟ್ಟುಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

‘ಮೇರಾ ಯುವ ಭಾರತ’ (MY Bharat) ಆಯೋಜಿಸಿರುವ ಈ ಸಂವಾದ ಕಾರ್ಯಕ್ರಮವು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯಲಿದ್ದು, ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರತಿಯೊಂದು ಜಿಲ್ಲೆಯ ತಲಾ 2 ಕಾಲೇಜುಗಳ ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸುವ ನಿರೀಕ್ಷೆಯಿದೆ.

ದೇಶದ ಯುವ ಭಾರತೀಯರೊಂದಿಗೆ ನಿಕಟ ಬಾಂಧವ್ಯ ಬೆಳೆಸಲು ಮತ್ತು ಕ್ರೀಡೆ, ಫಿಟ್‌ನೆಸ್ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಸರ್ಕಾರ ಯತ್ನಿಸುತ್ತಿದೆ. ದೇಶದ ಕ್ರೀಡೆ ಮತ್ತು ಯುವ ವಿಕಸನದ ಭವಿಷ್ಯದ ಕುರಿತು ವಿದ್ಯಾರ್ಥಿಗಳು ತಮ್ಮ ಕಲ್ಪನೆಗಳು ಹಾಗೂ ಸಲಹೆಗಳನ್ನು ನೇರವಾಗಿ ಹಂಚಿಕೊಳ್ಳಲು ವೇದಿಕೆ ಕಲ್ಪಿಸುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ

ಭಾರತದ ಕ್ರೀಡಾ ಪರಿಸರ ವ್ಯವಸ್ಥೆ, ತರಬೇತಿ (ಕೋಚಿಂಗ್), ಸಮಗ್ರ ಭಾಗವಹಿಸುವಿಕೆಯನ್ನು ಸುಧಾರಿಸುವುದು ಮತ್ತು ವೈಜ್ಞಾನಿಕ ತಂತ್ರಜ್ಞಾನದ ಮೂಲಕ ಪ್ರತಿಭೆಗಳನ್ನು ಗುರುತಿಸಿ, ಪಾರದರ್ಶಕ ಆಯ್ಕೆ ಪ್ರಕ್ರಿಯೆಯೊಂದಿಗೆ 2036ರ ಒಲಿಂಪಿಕ್ಸ್ ಪಂದ್ಯಾವಳಿಗೆ ಪ್ರತಿಭೆಗಳನ್ನು ಪೋಷಿಸುವುದು ಈ ಸಂವಾದದ ಪ್ರಮುಖ ಉದ್ದೇಶಗಳಲ್ಲಿ ಸೇರಿವೆ.

ಈ ಕಾರ್ಯಕ್ರಮದ ಪ್ರಮುಖ ಭಾಗವೆಂದರೆ “ಯುವ ಸಂವಾದ”. ಇದರಲ್ಲಿ ಭಾಗವಹಿಸುವವರು ಕ್ರೀಡಾ ಮೂಲಸೌಕರ್ಯ ಮತ್ತು ತರಬೇತಿ ಸೌಲಭ್ಯಗಳಿಂದ ಹಿಡಿದು ನೇತೃತ್ವ, ಸ್ವಯಂಸೇವಕತನ ಮತ್ತು ಸಾಮಾಜಿಕ ಜವಾಬ್ದಾರಿಗಳವರೆಗಿನ ವಿವಿಧ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಈ ಚರ್ಚೆಗಳು ಮುಖ್ಯವಾಗಿ ಕ್ರೀಡಾ ಸೌಲಭ್ಯಗಳ ಲಭ್ಯತೆಯನ್ನು ಸುಧಾರಿಸುವುದು, ತರಬೇತಿ ಮತ್ತು ಕ್ರೀಡಾ ವಿಜ್ಞಾನ ಬೆಂಬಲ ವ್ಯವಸ್ಥೆಗಳನ್ನು ಬಲಪಡಿಸುವುದು, ದೀರ್ಘಕಾಲೀನ ಕ್ರೀಡಾಪಟುಗಳ ವಿಕಸನಕ್ಕಾಗಿ ಪ್ರತಿಭೆಗಳನ್ನು ಗುರುತಿಸುವುದು ಹಾಗೂ 2036ರ ಒಲಿಂಪಿಕ್ಸ್ ಸೇರಿದಂತೆ ಭವಿಷ್ಯದ ಒಲಿಂಪಿಕ್ ಮಹತ್ವಾಕಾಂಕ್ಷೆಗಳಿಗೆ ಭಾರತವನ್ನು ಸಿದ್ಧಪಡಿಸುವುದರ ಮೇಲೆ ಗಮನ ಹರಿಸಲಿವೆ.

ಇದನ್ನೂ ಓದಿ: ಇಂದಿನ ಆಚೆಗೆ ಯೋಚಿಸಿ, ಭವಿಷ್ಯದ ಭಾರತ ನಿರ್ಮಿಸಿ: ಉನ್ನತ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

ಇದರೊಂದಿಗೆ, ಮಾದಕದ್ರವ್ಯ ಮುಕ್ತ ಸಮಾಜದ ಹೋರಾಟದ ಮೇಲೆಯೂ ಈ ಕಾರ್ಯಕ್ರಮ ಬೆಳಕು ಚೆಲ್ಲಲಿದೆ. ಸರ್ಕಾರದ ಮಾದಕದ್ರವ್ಯ ವಿರೋಧಿ ಜಾಗೃತಿ ಪ್ರಯತ್ನಗಳನ್ನು ಬಲಪಡಿಸಲು ಹಾಗೂ ಯುವಜನರಲ್ಲಿ “ನಶಾ ಮುಕ್ತ ಯುವ” ಅಭಿಯಾನವನ್ನು ವಿಸ್ತರಿಸಲು ಕ್ರೀಡೆ ಮತ್ತು ಸಮುದಾಯ ಭಾಗವಹಿಸುವಿಕೆಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಭಾಗವಹಿಸುವವರು ಚರ್ಚಿಸಲಿದ್ದಾರೆ.

ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳಿಗೆ ಸಂಬಂಧಿಸಿದಂತೆ ದೇಶದ ಕೆಲವು ಭಾಗಗಳಲ್ಲಿ ವಿದ್ಯಾರ್ಥಿಗಳ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ಈ ಸಂವಾದ ನಡೆಯುತ್ತಿದ್ದು, ಯುವಕರೊಂದಿಗಿನ ಬಾಂಧವ್ಯಕ್ಕೆ ಪ್ರಮುಖ ಆದ್ಯತೆ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us