ವಾಸ್ತು ಪ್ರಕಾರ ಅಡುಗೆಮನೆಯಲ್ಲಿ ಸಕ್ಕರೆ ಎಲ್ಲಿಡಬೇಕು?: ಆರ್ಥಿಕ ಬಿಕ್ಕಟ್ಟು ದೂರಾಗಲು ಈ ದಿಕ್ಕು ಅತ್ಯಂತ ಶುಭ!
ಸಕ್ಕರೆ ಕೇವಲ ಆಹಾರ ಪದಾರ್ಥವಲ್ಲ, ಇದು ಶುಕ್ರ ಗ್ರಹದ ಸಂಕೇತ. ಮನೆಯಲ್ಲಿ ಸಂಪತ್ತು, ನೆಮ್ಮದಿ ಹೆಚ್ಚಿಸಲು ಸಕ್ಕರೆಯನ್ನು ಸರಿಯಾದ ದಿಕ್ಕಿನಲ್ಲಿ, ಗಾಜಿನ ಪಾತ್ರೆಯಲ್ಲಿಡಬೇಕು. ದಾನ ಮಾಡುವುದರಿಂದ ಚಂದ್ರ-ಮಂಗಳ ಶಾಂತವಾಗಿ ಮಾನಸಿಕ ಶಾಂತಿ ಲಭಿಸುತ್ತದೆ. ಸೋಮವಾರ, ಹುಣ್ಣಿಮೆಯಂದು ದಾನ ಮಾಡುವುದು ಶ್ರೇಷ್ಠ, ಆದರೆ ಶುಕ್ರವಾರ ಮತ್ತು ಸೂರ್ಯಾಸ್ತದ ನಂತರ ದಾನ ಮಾಡುವುದನ್ನು ತಪ್ಪಿಸಿ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವಿಗೂ ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯದಲ್ಲಿ ಕೆಲವು ನಿರ್ದಿಷ್ಟ ನಿಯಮಗಳಿವೆ. ವಸ್ತುಗಳ ಖರೀದಿ, ಸಂಗ್ರಹಿಸುವ ಸ್ಥಳ ಹಾಗೂ ವಿನಿಮಯವು ವ್ಯಕ್ತಿಯ ಜೀವನದ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸಕ್ಕರೆಯನ್ನು ಕೇವಲ ದಿನನಿತ್ಯದ ಆಹಾರ ಪದಾರ್ಥವಾಗಿ ನೋಡದೆ, ಭೌತಿಕ ಸುಖ, ಸಂಪತ್ತು, ಸೌಂದರ್ಯ, ಪ್ರೀತಿ ಮತ್ತು ಸೌಕರ್ಯದ ಅಧಿಪತಿಯಾದ ಶುಕ್ರ ಗ್ರಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸಕ್ಕರೆಯು ಮನೆಯಲ್ಲಿ ಮಾಧುರ್ಯ ಹಾಗೂ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಅಡುಗೆಮನೆಯಲ್ಲಿ ಸಕ್ಕರೆ ಇಡಲು ಸೂಕ್ತ ವಾಸ್ತು ದಿಕ್ಕುಗಳು:
ಅಡುಗೆಮನೆಯ ದಕ್ಷಿಣ ಅಥವಾ ಆಗ್ನೇಯ (ಆಗ್ನೇಯ ಕೋನ) ಭಾಗವು ಸಕ್ಕರೆ ಮತ್ತು ಇತರ ಪಡಿತರ ದಿನಸಿ ವಸ್ತುಗಳನ್ನು ಇಡಲು ಅತ್ಯಂತ ಶುಭಪ್ರದ ಎಂದು ಪರಿಗಣಿಸಲಾಗಿದೆ. ಸಕ್ಕರೆಯನ್ನು ಯಾವಾಗಲೂ ಗಾಜಿನ ಅಥವಾ ಲೋಹದ ಪಾತ್ರೆಗಳಲ್ಲಿ ಮಾತ್ರ ಸಂಗ್ರಹಿಸಿಡಬೇಕು ಮತ್ತು ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಅಲ್ಲದೆ, ಸಕ್ಕರೆಯನ್ನು ಎಂದಿಗೂ ಮುಚ್ಚಳವಿಲ್ಲದೆ ತೆರೆದಿಡಬಾರದು ಅಥವಾ ಮನೆಯ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಹರಡಲು ಬಿಡಬಾರದು, ಏಕೆಂದರೆ ಇದು ಆರ್ಥಿಕ ನಷ್ಟ ಹಾಗೂ ನಕಾರಾತ್ಮಕತೆಗೆ ದಾರಿ ಮಾಡಿಕೊಡುತ್ತದೆ.
ಸಕ್ಕರೆ ದಾನ ಮಾಡುವುದರ ಜ್ಯೋತಿಷ್ಯ ಪ್ರಯೋಜನಗಳು:
ಧಾರ್ಮಿಕ ಮತ್ತು ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ದೇವಾಲಯಕ್ಕೆ ಅಥವಾ ನಿರ್ಗತಿಕ ವ್ಯಕ್ತಿಗೆ ಸಕ್ಕರೆಯನ್ನು ದಾನ ಮಾಡುವುದರಿಂದ ಜಾತಕದಲ್ಲಿ ಚಂದ್ರ ಹಾಗೂ ಮಂಗಳ ಗ್ರಹಗಳು ಶಾಂತವಾಗುತ್ತವೆ. ಸಕ್ಕರೆಯು ತನ್ನ ಸಿಹಿ ಗುಣದಿಂದ ಮಂಗಳನ ಹಾಗೂ ಬಿಳಿ ಬಣ್ಣದಿಂದ ಚಂದ್ರನ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ. ಸಕ್ಕರೆ ದಾನ ಮಾಡುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ, ಮನಸ್ಸಿನ ಅನಗತ್ಯ ಕೋಪ ನಿಯಂತ್ರಣಕ್ಕೆ ಬರುತ್ತದೆ. ಗುಪ್ತ ನವರಾತ್ರಿಯಂತಹ ಪವಿತ್ರ ಧಾರ್ಮಿಕ ಆಚರಣೆಗಳಲ್ಲಿ ಬ್ರಾಹ್ಮಣರಿಗೆ ಅಥವಾ ದೇವತೆಗಳಿಗೆ ಸಕ್ಕರೆಯನ್ನು ಅರ್ಪಿಸಿ ದಾನ ಮಾಡುವುದರಿಂದ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಲಭಿಸುತ್ತದೆ.
ಇದನ್ನೂ ಓದಿ: ಮನಿ ಪ್ಲಾಂಟ್ಗಿಂತಲೂ ಪವರ್ಫುಲ್ ಈ ಗಿಡ; ಮನೆಯಲ್ಲಿದ್ದರೆ ಕುಬೇರನ ಕೃಪೆಯಿಂದ ಅದೃಷ್ಟ ಖುಲಾಯಿಸುವುದು ಖಚಿತ!
ಸಕ್ಕರೆ ದಾನ ಮಾಡಲು ಶುಭ ದಿನಗಳು:
ಸೋಮವಾರ ಅಥವಾ ಹುಣ್ಣಿಮೆಯ ದಿನಗಳಲ್ಲಿ ಸಕ್ಕರೆ ದಾನ ಮಾಡುವುದು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಸೋಮವಾರದಂದು ಸಕ್ಕರೆ, ಅಕ್ಕಿ ಮತ್ತು ಹಾಲಿನಂತಹ ಬಿಳಿ ವಸ್ತುಗಳನ್ನು ದಾನ ಮಾಡುವುದರಿಂದ ಜಾತಕದಲ್ಲಿ ಚಂದ್ರನು ಬಲಗೊಂಡು ಮನಸ್ಸಿಗೆ ನಿಮ್ಮದ ದೊರೆಯುತ್ತದೆ. ಹುಣ್ಣಿಮೆ ಅಥವಾ ಯಾವುದೇ ಧಾರ್ಮಿಕ ಆಚರಣೆ ಮತ್ತು ಗ್ರಹಣದ ನಂತರ ಅಗತ್ಯವಿರುವವರಿಗೆ ಸಕ್ಕರೆ ಅಥವಾ ಬಿಳಿ ಧಾನ್ಯಗಳನ್ನು ದಾನ ಮಾಡುವುದು ಶುಭ ತರುತ್ತದೆ. ಇದರ ಜೊತೆಗೆ ಮನೆಯ ಹೊರಗೆ ಅಥವಾ ಉದ್ಯಾನವನದಲ್ಲಿ ಇರುವೆಗಳಿಗೆ ಹಿಟ್ಟು ಮತ್ತು ಸಕ್ಕರೆಯ ಮಿಶ್ರಣವನ್ನು ಹಾಕುವುದು ವಾಸ್ತು ದೋಷಗಳನ್ನು ನಿವಾರಿಸಿ ದೈವಿಕ ಆಶೀರ್ವಾದ ತರುತ್ತದೆ.
ಯಾವ ದಿನ ಸಕ್ಕರೆ ದಾನ ಮಾಡಬಾರದು?
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಶುಕ್ರವಾರದಂದು ಸಕ್ಕರೆಯನ್ನು ಬೇರೆಯವರಿಗೆ ದಾನ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಶುಕ್ರವಾರವು ಲಕ್ಷ್ಮಿ ದೇವಿ ಹಾಗೂ ಶುಕ್ರ ಗ್ರಹಕ್ಕೆ ಅರ್ಪಿತವಾದ ದಿನವಾಗಿರುವುದರಿಂದ, ಈ ದಿನ ಸಕ್ಕರೆ ದಾನ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ಎದುರಾಗಬಹುದು ಮತ್ತು ಸಂಪತ್ತಿನ ನಷ್ಟವಾಗಬಹುದು. ವಾಸ್ತು ಪ್ರಕಾರ ಸೂರ್ಯಾಸ್ತದ ನಂತರ ಅಥವಾ ರಾತ್ರಿಯ ಸಮಯದಲ್ಲಿ ಯಾರಿಗೂ ಸಕ್ಕರೆಯನ್ನು ನೀಡಬಾರದು. ಮುಸ್ಸಂಜೆಯ ನಂತರ ಸಕ್ಕರೆ ವಹಿವಾಟು ಮಾಡುವುದರಿಂದ ಮನೆಯ ಶಾಂತಿ ಮತ್ತು ನೆಮ್ಮದಿ ಹಾಳಾಗಿ ಸಾಲದ ಬಾಧೆ ಹೆಗಲೇರಬಹುದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




