CSK vs RCB: ಸೋತರೂ ಖುಷಿಯಿದೆ: ಸಿಎಸ್ಕೆ ನಾಯಕನ ಶಾಕಿಂಗ್ ಹೇಳಿಕೆ
IPL 2025 CSK vs RCB: ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025ರ 8ನೇ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಆರ್ಸಿಬಿ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ಗಳಲ್ಲಿ 196 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್ಗಳಲ್ಲಿ 146 ರನ್ ಬಾರಿಸಿ 50 ರನ್ಗಳಿಂದ ಸೋಲೊಪ್ಪಿಕೊಂಡಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 8ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸಿದೆ. ಅದು ಸಹ ತನ್ನ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಬಗ್ಗು ಬಡಿಯುವ ಮೂಲಕ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಫಿಲ್ ಸಾಲ್ಟ್ 32 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 31 ರನ್ ಕಲೆಹಾಕಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ರಜತ್ ಪಾಟಿದಾರ್ 32 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 51 ರನ್ ಚಚ್ಚಿದರು. ಹಾಗೆಯೇ ಅಂತಿಮ ಓವರ್ನಲ್ಲಿ 3 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಟಿಮ್ ಡೇವಿಡ್ ಆರ್ಸಿಬಿ ತಂಡದ ಸ್ಕೋರ್ ಅನ್ನು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ಗೆ ತಂದು ನಿಲ್ಲಿಸಿದರು.
197 ರನ್ಗಳ ಗುರಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ಪರ ರಚಿನ್ ರವೀಂದ್ರ 41 ರನ್ ಬಾರಿಸಿದರೂ, ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಸಿಎಸ್ಕೆ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 146 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಆರ್ಸಿಬಿ ತಂಡ 50 ರನ್ಗಳ ಅಮೋಘ ಗೆಲುವು ದಾಖಲಿಸಿತು.
ಈ ಸೋಲಿನ ಬಳಿಕ ಮಾತನಾಡಿದ ಸಿಎಸ್ಕೆ ತಂಡದ ನಾಯಕ ರುತುರಾಜ್ ಸೋತರೂ ಖುಷಿಯಿದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಿಜ ಹೇಳಬೇಕೆಂದರೆ, ಈ ಪಿಚ್ನಲ್ಲಿ 170 ರನ್ಗಳನ್ನು ಚೇಸ್ ಮಾಡಬಹುದು ಎಂದು ಇನ್ನೂ ಅನಿಸುತ್ತಿದೆ. ಆದರೆ ನಾವು ಫೀಲ್ಡಿಂಗ್ನಲ್ಲಿ ಮಾಡಿದ ತಪ್ಪುಗಳಿಂದ ದೊಡ್ಡ ಬೆಲೆ ತೆರಬೇಕಾಯಿತು.
ಏಕೆಂದರೆ ನಮ್ಮ ತಪ್ಪುಗಳಿಂದ ನಾವು ಹೆಚ್ಚುವರಿ 20 ರನ್ಗಳನ್ನು ನೀಡಿದೆವು. ಹೀಗಾಗಿ ಬೃಹತ್ ಮೊತ್ತವನ್ನು ಚೇಸ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ದೊಡ್ಡ ಮೊತ್ತವನ್ನು ಬೆನ್ನತ್ತುವಾಗ ನಮ್ಮ ಬ್ಯಾಟಿಂಗ್ ಕೂಡ ವಿಭಿನ್ನವಾಗಿರುತ್ತದೆ. ಅದರಲ್ಲೂ ಪವರ್ಪ್ಲೇನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಆದರೆ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ ಎಂದು ರುತುರಾಜ್ ಗಾಯಕ್ವಾಡ್ ಹೇಳಿದ್ದಾರೆ.
ರಾಹುಲ್ ತ್ರಿಪಾಠಿಯಂತೆ ನಾನು ಸಹ ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದೆ. ಕೆಲವೊಮ್ಮೆ ನಮ್ಮ ಯೋಜನೆ ಕಾರ್ಯರೂಪಕ್ಕೆ ಬರುತ್ತದೆ, ಕೆಲವೊಮ್ಮೆ ಅದು ನಾವು ಅಂದುಕೊಂಡಂತೆ ಆಗುವುದಿಲ್ಲ. ಒಂದು ವೇಳೆ 170 ರನ್ ಅಸುಪಾಸಿನಲ್ಲಿ ಗುರಿ ಇದ್ದಿದ್ದರೆ ನಮ್ಮ ಯೋಜನೆ ಕೂಡ ಭಿನ್ನವಾಗಿರುತ್ತಿತ್ತು. ಆದರೆ ಹೆಚ್ಚುವರಿ 20 ಓವರ್ಗಳನ್ನು ನೀಡಿದರ ಪರಿಣಾಮ ನಮ್ಮೆಲ್ಲಾ ಯೋಜನೆಗಳು ತಲೆಕೆಳಗಾದವು ಎಂದು ರುತುರಾಜ್ ಗಾಯಕ್ವಾಡ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಸೋತರೂ, ನಾವು ನಾವು ದೊಡ್ಡ ಅಂತರದಿಂದ ಸೋಲಲಿಲ್ಲ ಎಂಬ ಖುಷಿಯಿದೆ. ಏಕೆಂದರೆ ನಾವು ಸೋತಿರುವುದು ಕೇವಲ 50 ರನ್ಗಳ ಅಂತರದಿಂದ ಅಷ್ಟೇ. ಹೀಗಾಗಿ ಈ ಸೋಲಿನಿಂದ ಯಾವುದೇ ಬೇಸರವಿಲ್ಲ. ಅಲ್ಲದೆ ಮುಂದಿನ ಪಂದ್ಯದಲ್ಲಿ ಕಂಬ್ಯಾಕ್ ಮಾಡುವ ವಿಶ್ವಾಸವಿದೆ ಎಂದು ರುತುರಾಜ್ ಗಾಯಕ್ವಾಡ್ ಹೇಳಿದ್ದಾರೆ.
ಕೇವಲ 50 ರನ್ಗಳಿಂದ ಸೋತಿರುವುದರಿಂದ ಖುಷಿಯಿದೆ ಎಂದಿರುವ ಸಿಎಸ್ಕೆ ನಾಯಕನ ಹೇಳಿಕೆಯು ಇದೀಗ ಟ್ರೋಲ್ ಆಗುತ್ತಿದೆ. ಅದರಲ್ಲೂ ಟಿ20 ಕ್ರಿಕೆಟ್ನಲ್ಲಿ, ಸ್ಪರ್ಧಾತ್ಮಕ ಪೈಪೋಟಿಯಿರುವಂತಹ ಪಂದ್ಯದಲ್ಲಿ ಐವತ್ತು ರನ್ಗಳು ಸಹ ಕೇವಲವಾಯಿತೇ ಎಂದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳೇ ಈಗ ಸಿಎಸ್ಕೆ ತಂಡದ ನಾಯಕನನ್ನು ಸೋಷಿಯಲ್ ಮೀಡಿಯಾ ಮೂಲಕ ಪ್ರಶ್ನಿಸುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11: ವಿರಾಟ್ ಕೊಹ್ಲಿ , ಫಿಲಿಪ್ ಸಾಲ್ಟ್ , ದೇವದತ್ ಪಡಿಕ್ಕಲ್ , ರಜತ್ ಪಾಟಿದಾರ್ (ನಾಯಕ) , ಲಿಯಾಮ್ ಲಿವಿಂಗ್ಸ್ಟೋನ್ , ಜಿತೇಶ್ ಶರ್ಮಾ (ವಿಕೆಟ್ ಕೀಪರ್) , ಟಿಮ್ ಡೇವಿಡ್ , ಕೃನಾಲ್ ಪಾಂಡ್ಯ , ಭುವನೇಶ್ವರ್ ಕುಮಾರ್ , ಜೋಶ್ ಹ್ಯಾಜಲ್ವುಡ್ , ಯಶ್ ದಯಾಳ್.
ಇದನ್ನೂ ಓದಿ: VIDEO: ಮೈದಾನಕ್ಕೆ ನುಗ್ಗಿದ ರಿಯಾನ್ ಪರಾಗ್ ಅಭಿಮಾನಿ: ಆಮೇಲೇನಾಯ್ತು ನೀವೇ ನೋಡಿ
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ರಚಿನ್ ರವೀಂದ್ರ , ರಾಹುಲ್ ತ್ರಿಪಾಠಿ , ರುತುರಾಜ್ ಗಾಯಕ್ವಾಡ್ (ನಾಯಕ) , ದೀಪಕ್ ಹೂಡಾ , ಸ್ಯಾಮ್ ಕರ್ರಾನ್ , ರವೀಂದ್ರ ಜಡೇಜಾ , ಎಂಎಸ್ ಧೋನಿ (ವಿಕೆಟ್ ಕೀಪರ್) , ರವಿಚಂದ್ರನ್ ಅಶ್ವಿನ್ , ನೂರ್ ಅಹ್ಮದ್ , ಮಥೀಶ ಪತಿರಣ , ಖಲೀಲ್ ಅಹ್ಮದ್.