AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

97 ಎಸೆತಗಳಲ್ಲಿ ‘ಶತಕ’ ಪೂರೈಸಿದ ಮೊಹಮ್ಮದ್ ಸಿರಾಜ್!

ದೇಶಿ ಕ್ರಿಕೆಟ್‌ನ ಪ್ರತಿಷ್ಠಿತ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಸಿರಾಜ್ ಅಚ್ಚರಿಯ ಆಘಾತ ಎದುರಿಸಿದ್ದಾರೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಈಸ್ಟ್ ಝೋನ್ ವಿರುದ್ಧದ ಪಂದ್ಯದಲ್ಲಿ ಸೌತ್ ಝೋನ್ ಪರ ಕಣಕ್ಕಿಳಿದ ಸಿರಾಜ್, ಎದುರಾಳಿ ಬ್ಯಾಟರ್‌ಗಳ ಅಬ್ಬರಕ್ಕೆ ಸಂಪೂರ್ಣ ತತ್ತರಿಸಿದ್ದಾರೆ.

97 ಎಸೆತಗಳಲ್ಲಿ 'ಶತಕ' ಪೂರೈಸಿದ ಮೊಹಮ್ಮದ್ ಸಿರಾಜ್!
ಮೊಹಮ್ಮದ್ ಸಿರಾಜ್Image Credit source: GettyImages
ಝಾಹಿರ್ ಯೂಸುಫ್
|

Updated on: Sep 07, 2026 | 2:01 PM

Share

ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಕಡು ನಿರಾಸೆ ಮೂಡಿಸಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹೈ-ವೋಲ್ಟೇಜ್ ಪಂದ್ಯದಲ್ಲಿ ಈಸ್ಟ್ ಝೋನ್ ಬ್ಯಾಟರ್‌ಗಳ ಅಬ್ಬರಕ್ಕೆ ತತ್ತರಿಸಿದ ಸಿರಾಜ್, ಕೇವಲ 16.1 ಓವರ್‌ಗಳಲ್ಲೇ ಶತಕ ಪೂರೈಸಿದ್ದಾರೆ.

ಈ ಪಂದ್ಯದಲ್ಲಿ ಸೌತ್ ಝೋನ್ ಪರ ಕಣಕ್ಕಿಳಿದಿರುವ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಈಸ್ಟ್ ಝೋನ್​ ಬ್ಯಾಟರ್‌ಗಳು ಕೇವಲ 16.1 ಓವರ್‌ಗಳಲ್ಲೇ ಬರೋಬ್ಬರಿ 100 ರನ್ ಚಚ್ಚಿದ್ದಾರೆ. ಅಂದರೆ, ಇದೊಂದು ಪ್ರಥಮ ದರ್ಜೆ (ಟೆಸ್ಟ್ ಮಾದರಿ) ಪಂದ್ಯವಾಗಿದ್ದರೂ ಸಿರಾಜ್ ಪ್ರತಿ ಓವರ್‌ಗೆ 6.18 ರ ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಇದಕ್ಕಿಂತಲೂ ದೊಡ್ಡ ಅಚ್ಚರಿಯೆಂದರೆ, ಇಷ್ಟು ರನ್ ನೀಡಿದರೂ ಅವರಿಗೆ ಒಂದೇ ಒಂದು ವಿಕೆಟ್ ಸಿಕ್ಕಿಲ್ಲ ಎಂಬುದು.

ಬೌಲಿಂಗ್‌ನಲ್ಲಿ ಸಿರಾಜ್ ‘ಶತಕ’!

ಪಂದ್ಯದ ಮೊದಲ ಸ್ಪೆಲ್‌ನ 5 ಓವರ್‌ಗಳಲ್ಲೇ 41 ರನ್ ನೀಡಿದ್ದ ಸಿರಾಜ್, ಆ ನಂತರವೂ ರನ್ ಹರಿವನ್ನು ನಿಯಂತ್ರಿಸಲು ಸಾಧ್ಯವಾಗದೆ ತೀವ್ರ ಕಷ್ಟಪಟ್ಟರು. ಇನ್ನು ದ್ವಿತೀಯ ದಿನದಾಟದಲ್ಲಿ ಕೊಂಚ ಲಯ ಕಂಡುಕೊಂಡ ಸಿರಾಜ್, ಭೋಜನ ವಿರಾಮದ ವೇಳೆಗೆ ಒಟ್ಟು 21 ಓವರ್‌ಗಳನ್ನು ಎಸೆದು, 3 ಮೇಡನ್ ಸೇರಿದಂತೆ 118 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ತಮ್ಮ ಬೌಲಿಂಗ್ ಕೋಟಾ ಮುಗಿಸಿದರು.

  • 97 ಎಸೆತಗಳಲ್ಲಿ 100 ರನ್ ನೀಡಿದ ಸಿರಾಜ್
  • 21 ಓವರ್​ಗಳಲ್ಲಿ ಸಿರಾಜ್ ನೀಡಿದ್ದು ಬರೋಬ್ಬರಿ 118 ರನ್​ಗಳು.

ವೇಗಿಗೆ ಶಾಕ್ ನೀಡಿದ ‘ಬಾಸ್ ಬೇಬಿ’!

ಈ ಪಂದ್ಯದ ಹೈಲೈಟ್ ಆಗಿ ಮೂಡಿಬಂದಿದ್ದು ಈಸ್ಟ್ ಝೋನ್​ ತಂಡದ 15 ವರ್ಷದ ಯುವ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಸಾಹಸ. ಅಂತಾರಾಷ್ಟ್ರೀಯ ಬೌಲರ್ ಎನ್ನುವುದನ್ನು ಲೆಕ್ಕಿಸದೆ ಸಿರಾಜ್ ಬೌಲಿಂಗ್ ಮೇಲೆಯೇ ಸವಾರಿ ಮಾಡಿದ ವೈಭವ್, ಒಂದೇ ಓವರ್​ನಲ್ಲಿ 2 ಫೋರ್ ಹಾಗೂ ಒಂದು ಸಿಕ್ಸರ್ ಚಚ್ಚಿದ್ದರು.

ಇತ್ತ ಬಾಸ್ ಬೇಬಿಯ ಆರ್ಭಟದಿಂದ ಲಯ ತಪ್ಪಿದ ಸಿರಾಜ್ ಮತ್ತೆ ಲೈನ್ ಅ್ಯಂಡ್ ಲೆಂಗ್ತ್ ಕಂಡುಕೊಳ್ಳಲು ದ್ವಿತೀಯ ದಿನದಾಟದವರೆಗೆ ಕಾಯಬೇಕಾಗಿ ಬಂತು. ಇದಾಗ್ಯೂ 21 ಓವರ್​ಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯಲು ಸಿರಾಜ್​ಗೆ ಸಾಧ್ಯವಾಗಿಲ್ಲ.

ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರು ಪದೇ ಪದೇ ಗಾಯಗೊಳ್ಳುತ್ತಿರುವುದು ಏಕೆ? ಇಲ್ಲಿದೆ ಉತ್ತರ

ಒಟ್ಟಾರೆಯಾಗಿ ಹೇಳುವುದಾದರೆ, ಮುಂಬರುವ ಅಂತಾರಾಷ್ಟ್ರೀಯ ಟೆಸ್ಟ್ ಸರಣಿಗಳಿಗೂ ಮುನ್ನ ಲಯ ಕಂಡುಕೊಳ್ಳುವ ಉದ್ದೇಶದಿಂದ ಕಣಕ್ಕಿಳಿದಿದ್ದ ಮೊಹಮ್ಮದ್ ಸಿರಾಜ್, ಇದೀಗ ಕಳಪೆ ಬೌಲಿಂಗ್ ಪ್ರದರ್ಶನದಿಂದಾಗಿ ಸುದ್ದಿಯಾಗಿದ್ದಾರೆ. ಇದಾಗ್ಯೂ, ದ್ವಿತೀಯ ದಿನದಾಟದ ಸುಧಾರಿತ ಪ್ರದರ್ಶನದ ಬಳಿಕ, ಮುಂಬರುವ 2ನೇ ಇನಿಂಗ್ಸ್‌ನಲ್ಲಿ ಅವರು ಭರ್ಜರಿ ಕಂಬ್ಯಾಕ್ ಮಾಡಿ ಮತ್ತೆ ಫಾರ್ಮ್‌ಗೆ ಮರಳಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Follow Us