ದುಲೀಪ್ ಟ್ರೋಫಿ ಫೈನಲ್ನಲ್ಲಿ ಟೀಮ್ ಇಂಡಿಯಾ ಆಟಗಾರರ ಮುಖಾಮುಖಿ
ಕ್ರಿಕೆಟ್ ಅಭಿಮಾನಿಗಳ ಕಣ್ಣು ಈಗ ಚೆನ್ನೈನ ಎಂ. ಎ. ಚಿದಂಬರಂ ಕ್ರೀಡಾಂಗಣದತ್ತ ನೆಟ್ಟಿದೆ. ಸೆಪ್ಟೆಂಬರ್ 6 ರಿಂದ 10 ರವರೆಗೆ ನಡೆಯಲಿರುವ ದುಲೀಪ್ ಟ್ರೋಫಿ 2026ರ ಫೈನಲ್ ಪಂದ್ಯದಲ್ಲಿ ಈಸ್ಟ್ ಝೋನ್ ಮತ್ತು ಸೌತ್ ಝೋನ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಉಭಯ ತಂಡಗಳಲ್ಲೂ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಿದ್ದು, ಹೀಗಾಗಿ ಫೈನಲ್ ಪಂದ್ಯವು ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ದೇಶಿಯ ಕ್ರಿಕೆಟ್ನ ಅತ್ಯಂತ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ ದುಲೀಪ್ ಟ್ರೋಫಿ 2026ರ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಸೆಪ್ಟೆಂಬರ್ 6 ರಿಂದ 10 ರವರೆಗೆ ಚೆನ್ನೈನ ಐತಿಹಾಸಿಕ ಎಂ. ಎ. ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್) ಬಲಿಷ್ಠ ಈಸ್ಟ್ ಝೋನ್ ಮತ್ತು ಸೌತ್ ಝೋನ್ ತಂಡಗಳ ನಡುವೆ ಪ್ರಶಸ್ತಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ.
ಭಾರತೀಯ ಟೆಸ್ಟ್ ತಂಡದ ಪ್ರಮುಖ ಆಟಗಾರರು ಫೈನಲ್ ಪಂದ್ಯಕ್ಕಾಗಿ ಉಭಯ ತಂಡಗಳನ್ನು ಸೇರಿಕೊಂಡಿರುವುದರಿಂದ ಈ ಬಾರಿಯ ಫೈನಲ್ ಪಂದ್ಯವು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಕಾಯುತ್ತಿರುವ ಎರಡೂ ತಂಡಗಳಲ್ಲಿರುವ ಪ್ರಮುಖ ಸ್ಟಾರ್ ಆಟಗಾರರ ವಿವರ ಇಲ್ಲಿದೆ:
ಈಸ್ಟ್ ಝೋನ್ ಸ್ಟಾರ್ ಆಟಗಾರರು:
ಸ್ಫೋಟಕ ವಿಕೆಟ್ಕೀಪರ್ ಬ್ಯಾಟರ್ ಇಶಾನ್ ಕಿಶನ್ ನೇತೃತ್ವದ ಈಸ್ಟ್ ಝೋನ್ ತಂಡವು ಅನುಭವಿ ಅಂತರರಾಷ್ಟ್ರೀಯ ಬೌಲರ್ಗಳು ಮತ್ತು ಯುವ ಪ್ರತಿಭೆಗಳ ಬಲಿಷ್ಠ ಮಿಶ್ರಣವನ್ನು ಹೊಂದಿದೆ.
ಇಶಾನ್ ಕಿಶನ್: ತಂಡವನ್ನು ಮುನ್ನಡೆಸುತ್ತಿರುವ ಆಕ್ರಮಣಕಾರಿ ಎಡಗೈ ಬ್ಯಾಟರ್. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಬಲ್ಲರು.
ಮೊಹಮ್ಮದ್ ಶಮಿ: ಭಾರತ ತಂಡದ ಹಿರಿಯ ವೇಗದ ಬೌಲರ್. ಇವರ ಉಪಸ್ಥಿತಿ ಈಸ್ಟ್ ಝೋನ್ ಬೌಲಿಂಗ್ ವಿಭಾಗಕ್ಕೆ ಆನೆಬಲ ತಂದಿದೆ.
ಮುಖೇಶ್ ಕುಮಾರ್: ಸೆಮಿಫೈನಲ್ನಲ್ಲಿ 4 ವಿಕೆಟ್ ಕಿತ್ತು ಮಿಂಚಿದ ಟೀಮ್ ಇಂಡಿಯಾದ ಮತ್ತೊಬ್ಬ ನಂಬಿಕಸ್ಥ ಮಧ್ಯಮ ವೇಗಿ.
ವೈಭವ್ ಸೂರ್ಯವಂಶಿ: ಕೇವಲ 15 ವರ್ಷದ ಅದ್ಭುತ ಯುವ ಬ್ಯಾಟಿಂಗ್ ಸೆನ್ಸೇಷನ್. ಸೆಮಿಫೈನಲ್ನಲ್ಲಿ 92 ಮತ್ತು 40 ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಅಭಿಮನ್ಯು ಈಶ್ವರನ್: ಇಂಡಿಯಾ ‘ಎ’ ತಂಡದ ನಿಯಮಿತ ನಾಯಕ ಹಾಗೂ ದೇಶಿ ಕ್ರಿಕೆಟ್ನ ಅತ್ಯಂತ ಅನುಭವಿ ಆರಂಭಿಕ ಬ್ಯಾಟರ್.
ಶಹಬಾಝ್ ಅಹ್ಮದ್ / ಅನುಕುಲ್ ರಾಯ್: ಆಲ್ ರೌಂಡರ್ಗಳಾಗಿ ತಂಡಕ್ಕೆ ಬ್ಯಾಟಿಂಗ್ ಮತ್ತು ಸ್ಪಿನ್ ಬೌಲಿಂಗ್ನಲ್ಲಿ ಆಸರೆಯಾಗಬಲ್ಲ ಆಟಗಾರರು.
ಸೌತ್ ಝೋನ್ ಸ್ಟಾರ್ ಆಟಗಾರರು:
ಟೀಮ್ ಇಂಡಿಯಾದ ಯುವ ಆಟಗಾರ ತಿಲಕ್ ವರ್ಮಾ ಸಾರಥ್ಯದ ಸೌತ್ ಝೋನ್ ತಂಡಕ್ಕೆ ಕೆ.ಎಲ್. ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ದಿಗ್ಗಜರ ಸೇರ್ಪಡೆಯು ತಂಡದ ಬಲವನ್ನು ಇಮ್ಮಡಿಗೊಳಿಸಿದೆ.
ತಿಲಕ್ ವರ್ಮಾ: ಸೌತ್ ಝೋನ್ ತಂಡದ ನಾಯಕ ತಿಲಕ್ ವರ್ಮಾ ಅದ್ಭುತ ಫಾರ್ಮ್ನಲ್ಲಿದ್ದಾರೆ. ಸೆಮಿಫೈನಲ್ನಲ್ಲಿ ಅಜೇಯ 116* ಮತ್ತು 51* ರನ್ ಸಿಡಿಸಿ ತಂಡವನ್ನು ಫೈನಲ್ಗೆ ತಲುಪಿಸಿದ ಹೀರೊ.
ಕೆ. ಎಲ್. ರಾಹುಲ್: ಬ್ಯಾಟಿಂಗ್ ಲೈನ್ಅಪ್ಗೆ ದೊಡ್ಡ ಬಲ. ಮಧ್ಯಮ ಕ್ರಮಾಂಕದಲ್ಲಿ ಅಂತರರಾಷ್ಟ್ರೀಯ ಮಟ್ಟದ ಅಪಾರ ಅನುಭವವನ್ನು ತರಲಿದ್ದಾರೆ.
ಮೊಹಮ್ಮದ್ ಸಿರಾಜ್: ಗಾಯಗೊಂಡ ವಿದ್ವತ್ ಕಾವೇರಪ್ಪ ಅವರ ಸ್ಥಾನಕ್ಕೆ ಫೈನಲ್ ಪಂದ್ಯಕ್ಕಾಗಿ ತಂಡವನ್ನು ಸೇರಿಕೊಂಡಿರುವ ಟೀಮ್ ಇಂಡಿಯಾದ ಪ್ರಮುಖ ವೇಗಿ.
ದೇವದತ್ ಪಡಿಕ್ಕಲ್: ಶ್ರೀಲಂಕಾ ಪ್ರವಾಸದಲ್ಲಿ ‘ಪ್ಲೇಯರ್ ಆಫ್ ದಿ ಸೀರೀಸ್’ ಪ್ರಶಸ್ತಿ ಗೆದ್ದು, ಸದ್ಯ ಭರ್ಜರಿ ರೆಡ್-ಬಾಲ್ ಫಾರ್ಮ್ನಲ್ಲಿದ್ದಾರೆ.
ಕರುಣ್ ನಾಯರ್: ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿರುವ ಕರ್ನಾಟಕದ ಅನುಭವಿ ಆಟಗಾರ, ಅಗ್ರ ಕ್ರಮಾಂಕಕ್ಕೆ ಆಧಾರ ಸ್ತಂಭ.
ನಾರಾಯಣ್ ಜಗದೀಶನ್: ತಮಿಳುನಾಡಿನ ಡೈನಾಮಿಕ್ ವಿಕೆಟ್ಕೀಪರ್ ಬ್ಯಾಟರ್. ತಮ್ಮದೇ ತವರು ಮೈದಾನದಲ್ಲಿ ಆಡುತ್ತಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್.
ಶ್ರೇಯಸ್ ಗೋಪಾಲ್: ಚೆನ್ನೈನ ಸ್ಪಿನ್ ಸ್ನೇಹಿ ಪಿಚ್ನಲ್ಲಿ ಸೌತ್ ಝೋನ್ ತಂಡದ ಪ್ರಮುಖ ಲೆಗ್ ಸ್ಪಿನ್ನರ್ ಆಗಿ ಮಿಂಚಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಬಾಬರ್ ವಿಶ್ವ ದಾಖಲೆ ಮುರಿದ ಗುರ್ಬಾಝ್
ಒಟ್ಟಿನಲ್ಲಿ, ಅನುಭವ ಮತ್ತು ಯುವ ಜೋಷ್ನಿಂದ ಕೂಡಿರುವ ಈ ಎರಡೂ ತಂಡಗಳ ಹೋರಾಟ ಸದ್ಯ ಟೆಸ್ಟ್ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಲಿರುವುದಂತೂ ಗ್ಯಾರಂಟಿ. ಸೆಪ್ಟೆಂಬರ್ 6 ರಿಂದ ಆರಂಭವಾಗಲಿರುವ ಈ ಮಹಾ ಸಮರದಲ್ಲಿ ಕೊನೆಗೆ ಪ್ರಶಸ್ತಿಯ ಮುಕುಟ ಯಾರ ಮುಡಿಗೇರಲಿದೆ ಎಂಬುದನ್ನು ಕಾದು ನೋಡಬೇಕಿದೆ.




